ಮುರ್ಡೇಶ್ವರ: ಪುಣೆಯಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್ನಲ್ಲಿ ಕ್ವಾರಂಟೈನ್ಲ್ಲಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ಬೆಂಗ್ರೆ ನಿವಾಸಿ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಕಳೆದ 13 ವರ್ಷಗಳಿಂದ ಪುಣೆಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಏನಾದರು ಕಾರ್ಯಕ್ರಮ ಇದ್ದರೆ ವರ್ಷಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತಿದ್ದನಂತೆ.
ವೆಂಕಟೇಶ 5-6 ದಿನಗಳ ಹಿಂದೆ ಪುಣೆಯಿಂದ ಮುರ್ಡೇಶ್ವರಕ್ಕೆ ಬಂದಿದ್ದ. ಪುಣೆಯಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಇಲ್ಲಿನ ಪೆಟ್ರಿಶಿಯಾ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಕ್ವಾರಂಟೈನ್ ಆಗಿದ್ದ. ಈ ನಡುವೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ ಲಾಡ್ಜಿನ ಕೊಠಡಿಯ ಕಿಟಕಿಗೆ ಟವೆಲ್ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೃತನ ಸಹೋದರ ಗಣಪತಿ ಸುಕ್ರಯ್ಯ ದೇವಾಡಿಗ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.