ETV Bharat / state

ಜಲಶಕ್ತಿ ಯೋಜನೆಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಸಂಸದ ಜಿ.ಎಸ್.ಬಸವರಾಜು ಸೂಚನೆ

author img

By

Published : Mar 16, 2021, 7:48 PM IST

MP GS Basavaraju
ಸಂಸದ ಜಿ.ಎಸ್. ಬಸವರಾಜು ಸಭೆ

ಕೇಂದ್ರ ಸರ್ಕಾರ ಜಲಶಕ್ತಿ ಯೋಜನೆಗೆ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ನಿಖರ ಮಾಹಿತಿಯ ವರದಿಯನ್ನು ಮಾರ್ಚ್ 26ರೊಳಗೆ ನೀಡುವಂತೆ ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು: ಅಂತರ್ಜಲ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ ಯೋಜನೆಗೆ ಸಂಬಂಧಿಸಿದ ನಿಖರ ಮಾಹಿತಿಯ ವರದಿಯನ್ನು ಮಾರ್ಚ್ 26ರೊಳಗೆ ನೀಡುವಂತೆ ದಿಶಾ ಸಮಿತಿ ಅಧ್ಯಕ್ಷ ಹಾಗೂ ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ಮಹಾನಗರ ಪಾಲಿಕೆಯ ಸ್ಮಾರ್ಟ್​ ಕಂಟ್ರೋಲ್ ರೂಂ ಕಚೇರಿ ಸಭಾಂಗಣದಲ್ಲಿ ಜಲಶಕ್ತಿ ಯೋಜನೆ ಡೇಟಾ ಸಂಗ್ರಹಣೆ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಜಲಶಕ್ತಿ ಯೋಜನೆಗೆ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಡೇಟಾ ಸಂಗ್ರಹಿಸಲು ಹತ್ತು ನಗರಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ತುಮಕೂರು ನಗರವೂ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ಹತ್ತು ನಗರಗಳೂ ತಮ್ಮ ವ್ಯಾಪ್ತಿಯಲ್ಲಿನ ಅಂತರ್ಜಲಕ್ಕೆ ಸಂಬಂಧಿಸಿದ ಅಂತರ್ಜಲ ಅಭಿವೃದ್ಧಿ, ಕುಡಿಯುವ ನೀರು, ಕೊಳಚೆ ನೀರು, ನೀರಿನ ಮೂಲಗಳು, ಬೋರ್​ವೆಲ್​ಗಳು, ನೆರೆ ನಿಯಂತ್ರಣ ಹೀಗೆ ಎಲ್ಲವನ್ನೂ ಕ್ರೋಢೀಕರಿಸಿ ನೀರಿನ ಪ್ರತಿಯೊಂದು ಯೋಜನೆ ರೂಪಿಸಲು ಕೈಗೊಳ್ಳಬಹುದಾದ ಕ್ರಮಗಳ ಮಾಹಿತಿ ಒದಗಿಸುವಂತೆ ಹತ್ತು ನಗರಗಳಿಗೆ ಸೂಚಿಸಲಾಗಿದೆ. ಹಾಗಾಗಿ ತುಮಕೂರು ನಗರದ ನೀರಿನ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಒದಗಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ತುಮಕೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಮಾರ್ಟ್​ಸಿಟಿ ಯೋಜನೆ, ಕೊಳಚೆ ಮತ್ತು ಒಳಚರಂಡಿ ನೀರು ಸರಬರಾಜು ಮಂಡಳಿ, ಕಂದಾಯ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ತುಮಕೂರಿನ ಅಂತರ್ಜಲ ಕುರಿತು ವಿಶೇಷ ಅಧ್ಯಯನ ಮಾಡಬೇಕು. ಅಂತರ್ಜಲ ಅಭಿವೃದ್ಧಿಗಾಗಿ ಎಲ್ಲೆಲ್ಲಿ ಏನೇನಾಗಿದೆ?, ಇನ್ನೂ ಏನೇನು ಆಗಬೇಕು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ತಿಂಗಳ 26ರೊಳಗೆ ಮಾಹಿತಿ ನೀಡಬೇಕು. ದಿಶಾ ಸಭೆಗೆ ಮ್ಯಾನ್ಯುಯಲ್ ಮಾಹಿತಿ ಕೊಡಬೇಕು. ಜಿಎಎಸ್ ಲೇಯರ್ ಮಾಹಿತಿಯನ್ನು ಏಪ್ರಿಲ್ 30ರೊಳಗೆ ನೀಡಬೇಕು ಎಂದು ಅವರು ಹೇಳಿದರು.

ರಾಜಕಾಲುವೆಗಳ ಒತ್ತುವರಿ ಬಗ್ಗೆಯೂ ಸಂಪೂರ್ಣ ಮಾಹಿತಿ ಒದಗಿಸಬೇಕು. ಬೋರ್​ವೆಲ್​ ಮರುಪೂರಣ, ನಗರದಲ್ಲಿನ ಕೊಳಚೆ ನೀರು ಯಾವ್ಯಾವ ಕೆರೆ-ಕಟ್ಟೆಗೆ ಹೋಗುತ್ತದೆ ಎಂಬ ಬಗ್ಗೆ ಸಂಪೂರ್ಣ ಸರ್ವೆ ಮಾಡಬೇಕು. ಆಯಾ ಇಲಾಖೆಯವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.