ETV Bharat / state

ಜನ್ಮದಿನದೊಳಗಡೆಯೇ ನೆಹರು ಪ್ರತಿಮೆ ಮೂಲ ಸ್ಥಳಕ್ಕೆ ಪುನರ್ ಸ್ಥಳಾಂತರ: ಮಾಧುಸ್ವಾಮಿ ಅಭಯ

author img

By

Published : Sep 23, 2020, 5:28 PM IST

Maduswamy
Maduswamy

ವಿಧಾನಸೌಧದ ಮುಂಭಾಗದಿಂದ ಸ್ಥಳಾಂತರ ಮಾಡಿದ್ದ ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಪ್ರತಿಮೆಯನ್ನು ನೆಹರು ಜನ್ಮದಿನದ ಒಳಗೆ ಮೂಲ‌ ಸ್ಥಳಕ್ಕೆ ಮತ್ತೆ ಸ್ಥಳಾಂತರ ಮಾಡುವ ಭರವಸೆಯನ್ನು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ನೀಡಿದರು.

ಬೆಂಗಳೂರು: ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ವಿಧಾನಸೌಧದ ಮುಂಭಾಗದಿಂದ ಸ್ಥಳಾಂತರ ಮಾಡಿದ್ದ ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಪ್ರತಿಮೆಯನ್ನು ನೆಹರು ಜನ್ಮದಿನದೊಳಗೆ ಮೂಲ ಸ್ಥಳಕ್ಕೆ ಮರು ಸ್ಥಳಾಂತರ ಮಾಡುವುದಾಗಿ ವಿಧಾನಪರಿಷತ್ ಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪಿಸುವ ಕುರಿತು ಕಾಂಗ್ರೆಸ್ ಸದಸ್ಯ ಗೋವಿಂದರಾಜು ಗಮನ ಸೆಳೆಯುವ ಸೂಚನೆ ಮಂಡಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸದನಕ್ಕೆ ಉತ್ತರ ನೀಡಿದರು. ಶ್ರೀನಿವಾಸ ಪೂಜಾರಿ ಅವರ ಉತ್ತರಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮೆಟ್ರೋ ಕಾಮಗಾರಿಯಿಂದ ವಿಧಾನಸೌಧದ ಮುಂಭಾಗದಲ್ಲಿದ್ದ ನೆಹರು ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೆಟ್ರೋ ಕಾಮಗಾರಿ ಮುಗಿದ ಬಳಿಕ ಪುನಃ ಅಲ್ಲೇ ಪ್ರತಿಷ್ಠಾಪನೆ ಮಾಡುವ ಆದೇಶ ಹೊರಡಿಸಿದ್ದಾರೆ. ಆದರೆ, ಈ ಬಗ್ಗೆ ಪರಿಶೀಲನೆ ಮಾಡುವ ಅವಶ್ಯಕತೆ ಏನಿಲ್ಲ, ಕೂಡಲೇ ಪ್ರತಿಷ್ಠಾಪನೆ ಮಾಡುವ ಉತ್ತರ ಕೊಡಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಆದರೆ, ಈ ಬಗ್ಗೆ ಪರಿಶೀಲನೆ ನಡೆಸುವ ಮಾತನ್ನೇ ಮತ್ತೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪುನರುಚ್ಚರಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಈ ವೇಳೆ, ಮಧ್ಯಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಮೂಲ ಸ್ಥಳದಲ್ಲೇ ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸಿ ಉತ್ತರ ನೀಡುತ್ತೇನೆ ಎಂದರು. ಬಳಿಕ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ವಾಪಸ್ ಪಡೆದರು.

ಭೋಜನಾ ವಿರಾಮದ ನಂತರ ಕಲಾಪ ಪುನರಾರಂಭಗೊಂಡ ವೇಳೆ ಸದನಕ್ಕೆ ಆಗಮಿಸಿದ ಸಚಿವ ಮಾಧುಸ್ವಾಮಿ, ಜವಾಹರಲಾಲ್ ನೆಹರು ಪ್ರತಿಮೆಯನ್ನು ಪುನರ್ ಸ್ಥಳಾಂತರ ಮಾಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಮೂಲ‌ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿದ್ದು, ಮೂಲ ಸ್ಥಳ ಗುರುತಿಸಿ ಪ್ರತಿಮೆ ಸ್ಥಳಾಂತರ ಮಾಡುವ ನಿರ್ಧಾರ ಪ್ರಕಟಿಸಿದರು. ಕಾಲಮಿತಿ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮತ್ತೆ ಪಟ್ಟುಹಿಡಿಯುತ್ತಿದ್ದಂತೆ ನೆಹರು ಜನ್ಮದಿನದ ಒಳಗೆ ಸ್ಥಳಾಂತರ ಮಾಡುವ ಭರವಸೆ ನೀಡಿ ನೆಹರು ಪ್ರತಿಮೆ ಸ್ಥಳಾಂತರ ಗೊಂದಲಕ್ಕೆ ತೆರೆ ಎಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.