ETV Bharat / state

ಭದ್ರಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

author img

By ETV Bharat Karnataka Team

Published : Oct 21, 2023, 9:26 AM IST

Updated : Oct 21, 2023, 11:02 AM IST

Murder in shivamogga
ಭದ್ರಾವತಿಯಲ್ಲಿ ಕೊಲೆ

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ.

ಶಿವಮೊಗ್ಗ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ‌ ಕೊಲೆ‌ ಮಾಡಿರುವ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದವನನ್ನು ಭದ್ರಾವತಿ ತಾಲೂಕು ಬಾಬಳ್ಳಿ ಗ್ರಾಮದ ನಿವಾಸಿ ಸೈಯದ್ ರಜಿಕ್(30) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ‌ ಕೊಲೆ ಮಾಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಮ್ಮ ವಾಟ್ಸಪ್ ಗ್ರೂಪ್​ನಲ್ಲಿ ಮಾಹಿತಿ ನೀಡಿದ್ದಾರೆ. ಬಾಬಳ್ಳಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ಕೊಲೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು‌ಬಂದಿಲ್ಲ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: 3 ವರ್ಷಗಳ ಹಿಂದೆ ಮಹಿಳೆ ಕೊಲೆ: ಪತಿ, ಅಪಹರಣದ ಕಥೆ ಹೆಣೆದ ಸಹೋದರು ಸೇರಿ ಐವರು ಸೆರೆ

ಕಲಬುರಗಿಯಲ್ಲಿ ಬರ್ಬರ ಹತ್ಯೆ: ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ಕಳೆದ ರಾತ್ರಿ ಯುವಕನೋರ್ವನ ಕೊಲೆಯಾಗಿದೆ. ಬಲಭೀಮ ಸಗರ (23) ಕೊಲೆಯಾದ ಯುವಕ. ದಸರಾ ಹಬ್ಬಕ್ಕೆಂದು ಯುವಕ ಊರಿಗೆ ಬಂದಿದ್ದ. ಈ ವೇಳೆ ಜಮೀನಿನ ವಿಚಾರ ಹಾಗೂ ಹಳೆ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಶಿರಚ್ಛೇದ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ

ಜಮೀನು ವಿಚಾರವಾಗಿ ಗಲಾಟೆ ಪ್ರಕರಣದಲ್ಲಿ ಬಲಭೀಮ ಜೈಲು ಸೇರಿದ್ದನು. ಇತ್ತೀಚೆಗೆ ಕೋರ್ಟ್​ನಿಂದ ಜಾಮೀನು ಪಡೆದು ಬಳಿಕ ಕಲಬುರಗಿ ನಗರದಲ್ಲಿ ವಾಸವಿದ್ದ. ಆದರೆ ದಸರಾ ಹಬ್ಬದ ಹಿನ್ನೆಲೆ ಗ್ರಾಮಕ್ಕೆ ತೆರಳಿದ್ದಾಗ ಹತ್ಯೆ ಮಾಡಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಪಂಡಿತ ಸಗರ, ರೇವೂರ ಬಿ ಠಾಣೆಯ ಪಿಎಸ್ಐ ಸವಿತಾ ಕಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ರೇವೂರ ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬಿಸಲಾಗಿದೆ.

ಇತ್ತೀಚೆಗೆ ಗ್ರಾಮ ಪಂಚಾಯತ್ ಅಧ್ಯಕ್ಷನ ಕೊಲೆ: ಅಫಜಲಪುರ ತಾಲೂಕಿ‌ನ ಚೌಡಾಪುರ ಬಸ್ ನಿಲ್ದಾಣ ಮುಂದೆ ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮದರಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ (57) ಬರ್ಬರ ಕೊಲೆಯಾಗಿತ್ತು. ಗೌಡಪ್ಪಗೌಡ ಬಿರಾದಾರ ಕಣ್ಣಿಗೆ ದುಷ್ಕರ್ಮಿಗಳು ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Last Updated :Oct 21, 2023, 11:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.