ETV Bharat / state

ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಚತೆ; ಮುಖ್ಯ ಶಿಕ್ಷಕ ಅಮಾನತು

author img

By ETV Bharat Karnataka Team

Published : Dec 28, 2023, 4:37 PM IST

Updated : Dec 28, 2023, 7:39 PM IST

ಕೋಲಾರ ಹಾಗು ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣಗಳು ಮಾಸುವ ಮುನ್ನವೇ ಶಿವಮೊಗ್ಗದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾಗಿ ಡಿಡಿಪಿಐ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದ ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್
ಶಿವಮೊಗ್ಗದ ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್

ಡಿಡಿಪಿಐ ಪ್ರತಿಕ್ರಿಯೆ

ಶಿವಮೊಗ್ಗ: ಕೋಲಾರ ಜಿಲ್ಲೆಯ ಮಾಲೂರಿನ ಮೊರಾರ್ಜಿ ಶಾಲೆ ಮತ್ತು ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣ ಮಾಸುವ ಮುನ್ನ ಅಂತಹದೇ ಮತ್ತೊಂದು ಪ್ರಕರಣ ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ‌ ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಚ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಎಷ್ಟು ದಿನದ ಹಿಂದಿನದು ಎಂಬುದು ಇನ್ನೂ ತಿಳಿದು ಬಂದಿಲ್ಲ. ವಿಡಿಯೋ ವೈರಲ್ ಬೆನ್ನಲ್ಲೇ ಭದ್ರಾವತಿಯ ಬಿಇಓ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಕುರಿತು ಡಿಡಿಪಿಐಗೆ ಬಿಇಓ ಅವರು ವರದಿಯನ್ನು ನೀಡಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ.

ಮುಖ್ಯ ಶಿಕ್ಷಕ ಅಮಾನತು: ಪ್ರಕರಣ ಸಂಬಂಧಪಟ್ಟಂತೆ ಬೆಟ್ಟದ ನೇರಲಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ( ಪ್ರಭಾರ) ಶಂಕರಪ್ಪನವರನ್ನು ಡಿಡಿಪಿಐ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಉಲ್ಲೇಖದ ಪತ್ರದಲ್ಲಿ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ವರದಿಯಲ್ಲಿ ಶಾಲಾ ಸ್ವಚ್ಚತೆಗೆ ಮತ್ತು ಶಾಲೆಗೆ ಸಂಬಂಧಿಸಿದಂತೆ ಇತರೆ ಅಗತ್ಯ ಪರಿಕರ ಮತ್ತು ಸ್ವಚ್ಛತಾ ಸಾಮಗ್ರಿಗಳನ್ನು ಖರೀದಿ ಮಾಡಲು ಅನುದಾನವನ್ನು ಒದಗಿಸಲಾಗಿದೆ. ಹೀಗಿದ್ದಾಗ್ಯೂ ಶಾಲಾ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಚತೆಗೊಳಿಸಲು ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ. ಮುಖ್ಯ ಶಿಕ್ಷಕರು ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಡಿಡಿಪಿಐ ಪರಮೇಶ್ವರಪ್ಪ ಆದೇಶ ನೀಡಿದ್ದಾರೆ.

ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಚಗೊಳಿಸುವ ವಿಡಿಯೋ ಕುರಿತು ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್. ಪ್ರತಿಕ್ರಿಯೆ ನೀಡಿದ್ದಾರೆ. "ಮಕ್ಕಳು ಶೌಚಾಲಯ ಸ್ವಚ್ಚ ಮಾಡಿರುವ ಕುರಿತು ವಿಡಿಯೋ ಸಿಕ್ಕಿದೆ. ಈ ವಿಡಿಯೋ ಆಧರಿಸಿ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿನ್ನೆಯೇ ಭೇಟಿ ನೀಡಿ ನಮಗೆ ವರದಿ ನೀಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪನವರ ವಿರುದ್ದ ದೂರು ನೀಡಲಾಗಿದೆ. ಯಾರೂ ಕೂಡಾ ವಿದ್ಯಾರ್ಥಿಗಳಿಂದ ಇಂಥ ಕೆಲಸ ಮಾಡಿಸಬಾರದು ಎಂದು ಎಲ್ಲ ಶಾಲೆಗಳಿಗೂ ಈ ಹಿಂದೆ ಒಂದು ಸುತ್ತೋಲೆ ಕಳುಹಿಸಲಾಗಿದೆ" ಎಂದು ಹೇಳಿದರು.

ಇನ್ನೊಂದೆಡೆ, ಮುಖ್ಯ ಶಿಕ್ಷಕರ ವಿರುದ್ದ ಪೋಷಕರಾದ ಲೀಲಾವತಿ ಆಕ್ರೋಶ ಹೊರಹಾಕಿದ್ದಾರೆ. "ನಾವು ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೇವೆ. ಶಾಲೆಗೆ ಮಕ್ಕಳನ್ನು ಓದಲು ಕಳುಹಿಸುತ್ತೇವೆ. ಆದರೆ ಹೀಗೆ ಕೆಲಸ ಮಾಡಿಸುತ್ತಾರೆ ಎಂದರೆ ನಾವೇಕೆ ಶಾಲೆಗೆ ಕಳುಹಿಸಬೇಕು. ಬಿಸಿ ಊಟದಲ್ಲಿ ಹುಳಗಳಿರುತ್ತವೆ. ಹಿಂದೆಲ್ಲಾ ಹೀಗೆ ಆಗಿರಲಿಲ್ಲ. ಶಂಕರಪ್ಪನವರು ಬಂದ ನಂತರ ಹೀಗೆ ಮಾಡಲಾಗುತ್ತಿದೆ" ಎಂದು ದೂರಿದರು.

ಕೆಲವು ದಿನಗಳ ಹಿಂದೆ ಕೋಲಾರದ ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಗಿಳಿಸಿ ಶೌಚ ಮಾಡಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು. ಹಿರಿಯ ಶಿಕ್ಷಕರ ಸಮ್ಮುಖದಲ್ಲೇ ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಚ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ, ಪ್ರಾಂಶುಪಾಲೆ ಮತ್ತು ಶಿಕ್ಷಕರನ್ನು ಅಮಾನತುಗೊಳಿಸಿದೆ. ಇನ್ನು ಕಳೆದ ವಾರವಷ್ಟೇ ಬೆಂಗಳೂರಿನ ಅಂದ್ರಹಳ್ಳಿ ಶಾಲೆಯಲ್ಲೂ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ವಸತಿ ಶಾಲೆ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನಿಂಗ್​; ಕೋಲಾರದಲ್ಲಿ ಅಮಾನವೀಯ ಘಟನೆ

Last Updated : Dec 28, 2023, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.