ETV Bharat / state

ಜು.3 ರಂದು ಕೇಂದ್ರ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ : ಕಿಮ್ಮನೆ ರತ್ನಾಕರ್

author img

By

Published : Jun 29, 2023, 12:40 PM IST

Kimmane Rathnakar
ಕಿಮ್ಮನೆ ರತ್ನಾಕರ್

ಕಳೆದ 9 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಇನ್ನೂ ಈಡೇರಿಸದ ಹಿನ್ನೆಲೆ ಜು.3 ರಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಧ್ಯಮಗೋಷ್ಟಿ

ಶಿವಮೊಗ್ಗ : ಸುಳ್ಳು ಭರವಸೆಗಳನ್ನು ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಜು.3ರಂದು ಮಹಾತ್ಮ ಗಾಂಧಿ ಪಾರ್ಕ್​ನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ, 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ, ಉದ್ಯೋಗ ನೀಡುವುದಿರಲಿ ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ" ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕೌಂಟ್​ಗೆ 15 ಲಕ್ಷ ಜಮಾ ಮಾಡುತ್ತೇವೆ ಎಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ಬರೆದುಕೊಟ್ಟರೆ ಮಾತ್ರ ಕೊಡಬೇಕೆ, ಮಾತು ಕೊಟ್ಟರೆ ಕೊಡಬಾರದೆ ಎಂದ ಅವರು, 15 ಲಕ್ಷ ರೂಪಾಯಿಯನ್ನು ಮೊದಲು ಕೊಡಲಿ. ಆಮೇಲೆ ಕಾಂಗ್ರೆಸ್​ ಗ್ಯಾರಂಟಿ ಬಗ್ಗೆ ಮಾತನಾಡಲಿ ಎಂದರು.

ಪಿಎಸ್ಐ ಹಗರಣದ ದುಡ್ಡಿನ ಮುಂದೆ ಸೋತಿದ್ದೇನೆ : ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ಮಾಡಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಪಿಎಸ್​ಐ ಹಗರಣವನ್ನು ತನಿಖೆ ಮಾಡಬೇಕು. ಈ ಹಗರಣದಲ್ಲಿ ದುಡ್ಡು ಮಾಡಿಕೊಂಡವರು ತೀರ್ಥಹಳ್ಳಿಯ ಚುನಾವಣೆಗೆ ಸುರಿದಿದ್ದರು. ಆ ಹಗರಣದ ದುಡ್ಡಲ್ಲೇ ನಾನು ಸೋತಿದ್ದೇನೆ. ದಿವ್ಯ ಹಾಗರಗಿ, ಸ್ಯಾಂಟ್ರೋ ರವಿ, ಆರ್.ಡಿ. ಪಾಟೀಲ್ ಯಾರು?. ಇವರು ತೀರ್ಥಹಳ್ಳಿಯಲ್ಲಿ 70 ಕೋಟಿ ಹಣ ಖರ್ಚು ಮಾಡಿದ್ದು ಗೊತ್ತೇ ಇದೆ ಎಂದ ಕಿಮ್ಮನೆ ಅವರು, ಈ ದುಡ್ಡಿನ ಮುಂದೆ ನಾನು ಸೋತಿದ್ದೇನೆ ಹೊರತು ಆರಗ ಜ್ಞಾನೇಂದ್ರ ಅವರ ವಿರುದ್ಧ ಅಲ್ಲ ಎಂದು ಆರೋಪಿಸಿದರು. ಬಳಿಕ, 40 % ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಪ್ರತ್ಯೇಕವಾಗಿಯೇ ಒತ್ತಾಯಿಸುತ್ತೇನೆ ಎಂದರು.

ದೇಶದ ಎಲ್ಲಾ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದದ್ದು ಪ್ರಧಾನಿಯವರ ಜವಾಬ್ದಾರಿ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲವೇ?. ಹಾಗೆಯೇ, ರಾಜ್ಯ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಹಕ್ಕು ಇಲ್ಲ. ಮತ್ತು ಪ್ರಶ್ನೆ ಮಾಡುವ ರೀತಿಯೂ ಸರಿ ಇಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ಜಾರಿ ಮಾಡದೆ ಬಿಡುವುದಿಲ್ಲ. ಎಲ್ಲದಕ್ಕೂ ಒಂದು ಸಮಯವಿರುತ್ತದೆ. ಸ್ವಲ್ಪ ವಿಳಂಬವಾಗಿದ್ದಕ್ಕೆ ಈ ರೀತಿ ಹುಂಬರಂತೆ ಬಿಜೆಪಿಗರು ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಅಶ್ಲೀಲ ವಿಡಿಯೋಗಳ ಬಗ್ಗೆ ಆರಗ ಜ್ಞಾನೇಂದ್ರ ಅವರೇ ಹೇಳಬೇಕು : ಮಾಜಿ ಶಾಸಕ ಕಿಮ್ಮನೆ ರತ್ನಾಕರ್

ಬಿಜೆಪಿ ಆರ್‌ಎಸ್‌ಎಸ್‌ನ ಭಾಗವೇ ಆಗಿದೆ. ನಾನು ಆರ್‌ಎಸ್‌ಎಸ್​ನ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಯಾವ ಪುಸ್ತಕದಲ್ಲೂ ಒಂದೇ ಒಂದು ಸಾಲು ಬಡವರ ಬಗ್ಗೆ ಧ್ವನಿ ಎತ್ತಿಲ್ಲ. ಅಸಮಾನತೆ ಬಗ್ಗೆ ತಿಳಿಸಿಲ್ಲ. ಗಾಂಧೀಜಿ ಬಗ್ಗೆ ವಿದೇಶದಲ್ಲಿ ಮಾತನಾಡುವ ಪ್ರಧಾನಿ, ದೇಶದ ಒಳಗೆ ಮಾತನಾಡುತ್ತಿಲ್ಲ. ಗಾಂಧೀಜಿಯವರು ಹಿಂದೂ ಧರ್ಮವನ್ನು ಉಳಿಸಲು ಮುಂದಾದವರು. ಆದರೆ, ಅಂಬೇಡ್ಕರ್ ಹಿಂದೂ ಧರ್ಮವನ್ನೇ ಬಿಟ್ಟವರು. ಅಂಬೇಡ್ಕರ್ ಬಗ್ಗೆ ವಿರೋಧ ಮಾಡುವ ಧೈರ್ಯವನ್ನು ಬಿಜೆಪಿಯ ನಾಯಕರು ಮಾಡುತ್ತಿಲ್ಲ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಕಲೀಂ ಪಾಶಾ, ವಿಶ್ವನಾಥಕಾಶಿ, ಇಕ್ಕೇರಿ ರಮೇಶ್, ಮಧುಸೂದನ್, ಚೇತನ್, ಬಾಲಾಜಿ, ನಾಗರಾಜ್, ಮಂಜುನಾಥ್, ದುಗ್ಗಪ್ಪ ಗೌಡ, ಸ್ವರೂಪ್ ಮತ್ತಿತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.