ಶಿವಮೊಗ್ಗ: ಬಿಜೆಪಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯಗೊಂಡಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಬಂದು ಒಂದು ವರ್ಷ ಕಳೆದರೂ ನಗರದ ಅಭಿವೃದ್ಧಿ ಶೂನ್ಯವಾಗಿದೆ. ವಾರ್ಡ್ ಸದಸ್ಯರ ನಾಮಫಲಕ ಬದಲಾವಣೆ ಆಗದೆ ಇರುವುದೇ ಇದಕ್ಕೆ ಉತ್ತಮ ಉದಾಹರಣೆ. ಪಾಲಿಕೆಗೆ ಸಂಬಂಧಿಸಿದ ಎಲ್ಲಾ ಪ್ರಗತಿ ಪರಿಶೀಲನಾ ಸಭೆಗಳು, ಚರ್ಚೆಗಳು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದೆ. ನೆಪಮಾತ್ರಕ್ಕೆ ಪಾಲಿಕೆ ಆಡಳಿತ ಇದೆ. ಸರ್ಕಾರದಿಂದ ಬಂದಿರುವ ಅನುದಾನ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಆಡಳಿತ ಅಸಮರ್ಥವಾಗಿದೆ. 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಹಣ ಕೂಡ ಸದ್ಬಳಕೆಯಾಗಿಲ್ಲ. ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ 30 ಜನ ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ, ಆದರೂ ನಗರದ ರಸ್ತೆ ಗುಂಡಿಗಳು ಮುಚ್ಚಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.
ಸ್ವಚ್ಛತಾ ಯೋಜನೆಯಡಿ 22 ಕೋಟಿ ರೂ. ಹಣ ಬಂದಿದ್ದು, ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆ ಮನೆಗೆ ಕೊಡುವ ಸುಮಾರು 1.68 ಲಕ್ಷದ ಕಸದ ಡಬ್ಬಿಗಳು ,3 ಟಿಪ್ಪರ್ ಗಳು, ಮೂರು ಚಕ್ರದ ವಾಹನಗಳು ಸೇರಿದಂತೆ ಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದು, ಇದುವರೆಗೆ ಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ. ಅಷ್ಟೇ ಅಲ್ಲದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಸುಮಾರು 125 ಕೋಟಿ ರೂ. ಬಿಡುಗಡೆಯಾಗಿತ್ತು. ಆ ಹಣವೂ ಬಳಕೆಯಾಗಿಲ್ಲ. ನೀರು ಪೂರೈಕೆ ಕಾಮಗಾರಿ, ಒಳಚರಂಡಿ, ಬಾಕ್ಸ್ ಚರಂಡಿ , ರಸ್ತೆ ರಿಪೇರಿ ಎಲ್ಲಾ ಕೆಲಸಗಳು ಕೂಡ ಮೊಟಕಾಗಿದೆ ಎಂದರು.