ETV Bharat / state

ನಿರಂತರವಾಗಿ ಸುರಿಯುತ್ತಿರುವ ಮಳೆ: ಕಟಾವಿಗೆ ಬಂದ ಬೆಳೆ ನೀರುಪಾಲು, ಮಲೆನಾಡ ರೈತರು ಕಂಗಾಲು

author img

By

Published : Nov 21, 2021, 4:55 PM IST

ಶಿವಮೊಗ್ಗ ಜಿಲ್ಲೆಯಾದ್ಯಂತ(heavy rain in Shivamogga) ಎಡೆಬಿಡದೇ ಮಳೆಯಾಗುತ್ತಿದ್ದು, ಇದರಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆ ಗದ್ದೆಯಲ್ಲೇ ಹಾಳಾಗುತ್ತಿದೆ. ಅಡಿಕೆ ಬೆಳೆಗಾರರ ಗೋಳಂತೂ ಹೇಳತೀರದ್ದಾಗಿದೆ.

paddy crop
ಬೆಳೆ ಕಳೆದುಕೊಳ್ಳುತ್ತಿರುವ ರೈತರು

ಶಿವಮೊಗ್ಗ: ಜಿಲ್ಲೆಯಲ್ಲಿ ಅಡಿಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳು ಕಟಾವಿಗೆ ಬಂದಿವೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ(heavy rain in Shivamogga) ಯಾವುದೇ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕೊಯ್ಲು ಮಾಡಿದರೂ ಆ ಬೆಳೆಯನ್ನು ಸಂಸ್ಕರಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಈ ಬಾರಿ ಮಲೆನಾಡಿನ ರೈತರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಭಾರಿ ಮಳೆಯಿಂದ ಬೆಳೆ ನಾಶ

ನವೆಂಬರ್ ತಿಂಗಳ ಆರಂಭದಿಂದಲೇ ಮಲೆನಾಡಿನಲ್ಲಿ ಅಡಿಕೆ ಹಾಗೂ ಭತ್ತದ ಕೊಯ್ಲು ಆರಂಭಗೊಳ್ಳುತ್ತದೆ. ಆದರೆ ನವೆಂಬರ್ ತಿಂಗಳ ಆರಂಭದಿಂದಲೂ ವರುಣನ ಆರ್ಭಟ ಇರುವುದರಿಂದ ಯಾವುದೇ ಬೆಳೆಗಳ ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಭತ್ತದ ಬೆಳೆ(paddy crop) ಕಟಾವು ಮಾಡದಿದ್ದರೆ ಭತ್ತ ನೀರುಪಾಲಾಗುತ್ತದೆ. ಪೈರನ್ನು ಕಟಾವು ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಇನ್ನೊಂದೆಡೆ ಮಳೆಯ ಮಧ್ಯೆಯೂ ಹೇಗೋ ಭತ್ತದ ಪೈರನ್ನು ಕಟಾವು ಮಾಡಿದ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಕಟಾವು ಮಾಡಿದ ಭತ್ತ ಗದ್ದೆಯಲ್ಲೇ ಉಳಿದಿದೆ. ಆದರೆ ಈ ಅವಧಿಯಲ್ಲಿ ಬಂದ ಭಾರಿ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೊಯ್ದು ಹಾಕಿರುವ ಭತ್ತದ ಫಸಲು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದೆ.

ಅಡಿಕೆ ಬೆಳೆಗಾರರು ಕಂಗಾಲು:

ಈ ಅವಧಿಯಲ್ಲಿ ಮಳೆ ಇಲ್ಲದಿದ್ದರೆ ಅಡಿಕೆ ಕೊಯ್ಲು ಬಿರುಸಿನಿಂದ ಸಾಗಿರುತ್ತಿತ್ತು. ಆದರೆ ನವೆಂಬರ್ ಆರಂಭದಿಂದಲೇ ಮಳೆ ಹಿಡಿದುಕೊಂಡಿರುವುದರಿಂದ ಅಡಿಕೆ ಕೊಯ್ಲು ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆಯನ್ನು ಮರದಲ್ಲೇ ಬಿಟ್ಟರೆ ಅಡಿಕೆ ಕಾಯಿಗಳು ಗೋಟಾಗಿ ಬೆಲೆಯೇ ಇಲ್ಲದಂತಾಗುತ್ತದೆ. ಅಡಿಕೆ ಗೊನೆ ತೆಗೆದರೆ ಅಡಿಕೆಯನ್ನು ಒಣಗಿಸಲು ಮಳೆ ಬಿಡುತ್ತಿಲ್ಲ. ಮಳೆ ಮಧ್ಯೆಯೂ ಅಡಿಕೆ ಕೊಯ್ಲು ಮಾಡಿದರ ಪಾಡಂತೂ ಹೇಳತೀರದಾಗಿದೆ. ತಟ್ಟಿಗಳ ಮೇಲೆ ಅಡಿಕೆ ಒಣಗಿಸಿ ತಟ್ಟಿಯ ಕೆಳಗೆ ಬೆಂಕಿ ಹಾಕಿ ಒಣಗಿಸುವ ಸ್ಥಿತಿ ಬಂದಿದೆ. ಇನ್ನು ಕೆಲ ರೈತರು ಗ್ಯಾಸ್ ಸಿಲಿಂಡರ್ ಬೆಂಕಿಯ ಮೂಲಕ ಅಡಿಕೆಯನ್ನು ಒಣಗಿಸುತ್ತಿದ್ದಾರೆ.

ಜಿಲ್ಲೆಯ ಅರ್ಥ ವ್ಯವಸ್ಥೆ ನಿಂತಿರುವುದೇ ಅಡಿಕೆ ಮೇಲೆ. ಆದರೆ ರೈತರು ಬೆಳೆದ ಬೆಳೆಗಳು ಕಟಾವಿಗೆ ಬರುವ ಸಮಯಕ್ಕೆ ಮಳೆ ಆರ್ಭಟಿಸತೊಡಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಮಲೆನಾಡಿನ ರೈತರ ಸ್ಥಿತಿ. ಸರ್ಕಾರ ರೈತರ ನೆರವಿಗೆ ಧಾವಿಸದೇ ಇದ್ದಲ್ಲಿ ರೈತರು ಈ ಬಾರಿ ಸಾಲದ ಶೂಲಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.