ETV Bharat / state

ಸಿಎಂ ಮುಸ್ಲಿಮರ ಓಲೈಕೆ ಮಾಡುತ್ತಿರುವುದು ಶೋಭೆ ತರಲ್ಲ: ಬಿ.ಎಸ್.ಯಡಿಯೂರಪ್ಪ

author img

By ETV Bharat Karnataka Team

Published : Dec 6, 2023, 2:22 PM IST

Updated : Dec 6, 2023, 2:30 PM IST

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಲಿ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತು

ಶಿವಮೊಗ್ಗ: ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್.​ ಯಡಿಯೂರಪ್ಪ ಅವರು ಟೀಕಿಸಿದ್ದಾರೆ. ಅವರು ರಾಜ್ಯದ ಸಿಎಂ ಆಗಿದ್ದುಕೊಂಡು ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ನಗರದಲ್ಲಿನ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರರಿಗೆ ಹಣ ಕೊಡಲು ಅಭ್ಯಂತರವಿಲ್ಲ. ಆದರೆ, ಹಣದ ಹೆಸರಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿರೋದು ತರವಲ್ಲ. ಈ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಅವಕಾಶ ಮಾಡಿಕೊಡುತ್ತದೆ. ಈ‌ ರೀತಿ ಮಾತುಗಳನ್ನು ಸಿಎಂ ಅವರಿಂದ ನಿರೀಕ್ಷೆ ‌ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧೀಶರು ಸೇರಿ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದೆ. ಏನಾದರೂ ಹೇಳುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು: ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ. ಅವರ ಹೆಸರಿನಲ್ಲಿ ನೂರಕ್ಕೆ ನೂರು ಪ್ರತಿಶತ ಗೆಲುವು ಪಡೆಯುತ್ತೇವೆ. ಯಾವುದೇ ಅನುಮಾನ ಬೇಡ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನವರು ಓಲೈಕೆ ರಾಜಕಾರಣ ಮಾಡುವ ಮೂಲಕ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ, ಅದು ಸಾಧ್ಯವಿಲ್ಲ. ದೇಶದಲ್ಲಿ ಬಿಜೆಪಿ ಮತ್ತು ಮೋದಿ ಪರ ವಾತಾವರಣವಿದೆ. ನಾವು ಎಲ್ಲಾ ಕ್ಷೇತ್ರ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದರು.

ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಪೋಟೋ ತೆಗೆಯುವ ವಿಚಾರ ಸರಿಯಲ್ಲ. ಸಾವರ್ಕರ್ ಭಾವಚಿತ್ರ ತೆಗೆಯುವ ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಇದು ಹೋರಾಟಗಾರರಿಗೆ ಮಾಡಿದ ಅವಮಾನ. ರಾಜ್ಯದ ಜನ ಸುಮ್ಮನಿರಲ್ಲ ಎಂದರು.

ಸೋಮಣ್ಣ ಪಕ್ಷ ಬಿಡಲ್ಲ: ಮಾಜಿ ಸಚಿವ ಸೋಮಣ್ಣ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬೇರೆ ಯಾವ ಪಕ್ಷಕ್ಕೂ ಅವರು ಹೋಗುವುದಿಲ್ಲ. ಅವರು ನಮ್ಮಲ್ಲೇ ಇರುತ್ತಾರೆ. ನಾನು‌ ಅವರ ಜೊತೆ ಮಾತನಾಡುತ್ತೇನೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮಾರ್ಗದರ್ಶನ ಪಕ್ಷಕ್ಕೆ ಬೇಕಾಗುತ್ತದೆ. ಹೀಗಾಗಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿದ್ದಿರುವ ಬರದ ಸಮೀಕ್ಷೆ ನಡೆಸಿರುವ ರಾಜ್ಯ ಸರ್ಕಾರ ಪರಿಹಾರ ಕೋರಿ ಮನವಿ ಸಲ್ಲಿಸಿದ್ದಾರೆ. ಬರೀ ಕೇಂದ್ರದ ಕಡೆ ಬೊಟ್ಟು ಮಾಡದೇ ರಾಜ್ಯ ಸರ್ಕಾರ ಯಾವ ಯಾವ ರೀತಿ‌ ಪರಿಹಾರ ಕೊಡಬಹುದೋ ಅದನ್ನು ಮೊದಲು ಕೊಡಲಿ. ಅಲ್ಲಿಂದ ಪರಿಹಾರದ ಮೊತ್ತ ಬಂದ ಬಳಿಕ ಮತ್ತೆ ಹೆಚ್ಚುವರಿಯಾಗಿ ಪರಿಹಾರ ನೀಡಲಿ ಎಂದರು.

ಇದನ್ನೂ ಓದಿ: 'ನಾನು ಸಿಎಂ ಸಿದ್ದರಾಮಯ್ಯ ವಕ್ತಾರನಲ್ಲ': ಬಿ.ಕೆ. ಹರಿಪ್ರಸಾದ್​

Last Updated :Dec 6, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.