ಶಿವಮೊಗ್ಗ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆ ಹಾಗೂ ಸುಳಿ ಕೊಳೆ ರೋಗ ಕಂಡು ಬರುವ ಸಾಧ್ಯತೆಯಿದ್ದು, ಅದನ್ನು ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್ ಪಿ ನಟರಾಜ್ ರೈತರಿಗೆ ಸಲಹೆ ನೀಡಿದ್ದಾರೆ.
ಕೊಳೆ ರೋಗ ಬರುವ ಸಾಧ್ಯತೆಯನ್ನು ತಡೆಯಲು 3ನೇ ಬಾರಿಗೆ ಮಳೆ ಬಿಡುವು ಕೊಟ್ಟಾಗ ಮರೆಯದೆ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. ಸುಳಿ ಕೊಳೆ ರೋಗದ ಸುಳಿವು ಕಂಡು ಬಂದಲ್ಲಿ ತಕ್ಷಣ ರೋಗ ತಗುಲಿದ ಸುಳಿ ಎಲೆಯನ್ನು ತೆಗೆದು ಸುಟ್ಟು ಹಾಕಬೇಕು ಹಾಗೂ ಆ ಭಾಗದಲ್ಲಿರುವ ಕೆಟ್ಟ ನೀರನ್ನು ಸಹ ತೆಗೆದು ಬೊರ್ಡೋ ಮುಲಾಮನ್ನು ಲೇಪಿಸಿಸಬೇಕು. ಬಳಿಕ ಶೇ. ಒಂದರ ಬೋರ್ಡೋ ದ್ರಾವಣ ಅಥವಾ ಶೇ. 0.3 ರ ಕಾಪರ್ ಆಕ್ಸಿಕ್ಲೋರೈಡನ್ನು ಎಲ್ಲಾ ಗಿಡಗಳ ಸುಳಿ ಭಾಗಕ್ಕೆ ಸಿಂಪಡಿಸಬೇಕು ಎಂದರು.
ಅಡಿಕೆ ಬೇರು ಹುಳವನ್ನು ತಡೆಗಟ್ಟಲು ಜುಲೈ 2ನೇ ವಾರದಿಂದ ಅಕ್ಟೋಬರ್ ಕೊನೆಯ ವಾರದವರೆಗೆ ತೋಟದ ಎಲ್ಲಾ ಕಡೆ 10-15 ಸೆಂ.ಮೀ. ಆಳದಷ್ಟು ಅಗತೆ ಮಾಡಿ, ಎಲ್ಲ ಹುಳುಗಳನ್ನೂ ಹೆಕ್ಕಿ ತೆಗೆದು ಹಾಕಬೇಕು. ಈ ಕ್ರಮ ಸರಿಯಾದ ರೀತಿಯಲ್ಲಿ ಅನುಸರಿಸಿದರೆ, ಶೇ. 90 ಭಾಗದಷ್ಟು ಪರಿಣಾಮಕಾರಿಯಾಗಿ ಹುಳುಗಳ ಹತೋಟಿ ಮಾಡಬಹುದು. ಜೈವಿಕ ಕೀಟ ನಾಶಕಗಳಾದ ಮೆಟಾರಿಜಿಯಂ ಅನಿಸೋಪ್ಲಯ 20 ಗ್ರಾಂ ಅಥವಾ ಪ್ರತಿ ಮರಕ್ಕೆ 20 ಗ್ರಾಂ ಪೋರೇಟ್ 10ಜಿ ಬಳಸಿ, ಕ್ಲೋರ್ಪೈರಿಫಾಸ್ 20 ಇ.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2-3 ಮಿ.ಲೀ ಬೆರೆಸಿ ಮಣ್ಣಿಗೆ ಹಾಕುವ ಮೂಲಕ ಬೇರು ಹುಳುವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.