ETV Bharat / state

Elephant tusk cut: ಕಾಡಾನೆ ಕಾರ್ಯಾಚರಣೆ.. ಕೋಪದಿಂದ ಕ್ರೇನ್​ಗೆ ತಿವಿದ ಗಜರಾಜನ ದಂತ ಕಟ್​

author img

By

Published : Jun 9, 2023, 10:40 AM IST

Updated : Jun 9, 2023, 11:02 AM IST

Wild elephant tusk cut
ಕಾಡಾನೆ ದಂತ ಕಟ್​

ರಾಮನಗರದ ಚನ್ನಪಟ್ಟಣದಲ್ಲಿ ಕಾಡಾನೆ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಸೆರೆ ಸಿಕ್ಕ ಗಂಡು ಕಾಡಾನೆ ಕ್ರೇನ್​ಗೆ ತಿವಿದಿದೆ. ಪರಿಣಾಮ ಆನೆಯ ಬಲಭಾಗದ ದಂತ ಮುರಿದಿದೆ.

ಕಾಡಾನೆ ಕ್ರೇನ್​ಗೆ ತಿವಿದು ತನ್ನ ದಂತ ಮುರಿದುಕೊಂಡ ದೃಶ್ಯ

ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಕಾಡಾನೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಕೈಗೊಂಡ ಯೋಜನೆ ಯಶಸ್ಸು ಕಂಡಿದೆ. ತೆಂಗಿನ ಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ತನ್ನ ದಾಂಧಲೆಯನ್ನು ನಡೆಸುತ್ತಾ ಎರಡು ಜೀವಗಳನ್ನು ಸಹ ಬಲಿ ಪಡೆದಿತ್ತು. ಕೊನೆಗೂ ಈ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಭಿಮನ್ಯು ಟೀಮ್ ಯಶಸ್ಸು ಕಂಡಿದೆ. ಆದರೆ, ದುರಂತವೆಂದರೆ ಈ ವೇಳೆ ಕಾಡಾನೆ ದಂತ ಮುರಿದಿದೆ.

ಕಾಡಾನೆ ಸೆರೆ ವೇಳೆ ಆನೆ ದಂತ ಮುರಿತ: ಚನ್ನಪಟ್ಟಣ ತಾ. ಕಾಡನಕುಪ್ಪೆ ಅರಣ್ಯದಲ್ಲಿ ಸೆರೆ ಸಿಕ್ಕ 45 ವರ್ಷದ ಗಂಡು ಕಾಡಾನೆ ದಂತ ಮುರಿದಿದೆ. ಕ್ರೇನ್​ನಲ್ಲಿ ಲಾರಿಗೆ ಹಾಕುವಾಗ ಕೋಪದಿಂದ ಆನೆ ಬಲವಾಗಿ ತಿವಿದ ಪರಿಣಾಮ ಬಲಭಾಗದ ದಂತ ಮುರಿದಿದೆ. ಕೂಡಲೇ ಎಚ್ಚೆತ್ತ ಅರಣ್ಯಾಧಿಕಾರಿಗಳು. ಸತತ 5 ಗಂಟೆ ಸತಾಯಿಸಿದ್ದ ಆನೆಯನ್ನು ಕಡೆಗೂ ಸೆರೆ ಹಿಡಿದಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಕಾಡಾನೆ ತೆರೆಗೆ ಅಭಿಮನ್ಯು ನೇತೃತ್ವದ 5 ಸಾಕಾನೆಗಳ ತಂಡ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಪಂಚಾಯಿತಿ ವ್ಯಾಪ್ತಿಗೆ ಆಗಮಿಸಿತ್ತು. ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಕಾಡಾನೆಗಳನ್ನು ಬರಮಾಡಿಕೊಳ್ಳಲಾಗಿತ್ತು. ಎರಡು ದಿನಗಳಲ್ಲಿ ನಡೆದ ಕಾರ್ಯಾಚರಣೆಯ ವೇಳೆ ತಾಲೂಕಿನ ಅರಳಾಳುಸಂದ್ರ, ಕಾಡನಕುಪ್ಪೆ ಗ್ರಾಮದ ಮಧ್ಯ ಭಾಗದಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಭಿಮನ್ಯು ತಂಡ ಸಫಲವಾಗಿದೆ.

ಕಾಡಾನೆಯನ್ನು ತಾತ್ಕಾಲಿಕ ಕ್ಯಾಂಪ್‌ಗೆ ಕರೆತರಲಾಗಿದ್ದು ಸ್ಥಳಾಂತರ ಕಾರ್ಯವನ್ನು ಕೈಗೊಳ್ಳಲಾಗಿದೆ. ವೈದ್ಯರಾದ ಮುಜೀಬ್ - ರಮೇಶ್ ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯಲಾಗಿದೆ. ಅರಿವಳಿಕೆ ಮದ್ದನ್ನು ನೀಡಿದ ನಂತರ ಪಳಗಿದ ಸಾಕಾನೆಗಳ ಸಹಾಯದಿಂದ ಕಾಡಾನೆ ಸೆರೆ ಹಿಡಿಯಲಾಗಿದ್ದು, ಆನೆ ಸದ್ಯಕ್ಕೆ ಆರೋಗ್ಯವಾಗಿದೆ, ಯಾವುದೇ ಸಮಸ್ಯೆ ಇಲ್ಲ ಎಂದು‌ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಮನ್ಯುವಿನ ಸಹಕಾರದೊಂದಿಗೆ ಈ ಕಾಡಾನೆ ಕಾರ್ಯಾಚರಣೆ ಮಾಡಲಾಗಿದೆ. ಇನ್ನೆರಡು ದಿನಗಳ ಕಾಲ 5 ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ನಂತರ 2 ದಿನ ಬಿಟ್ಟು ಮತ್ತೆ ಕಾಡಾನೆ ಕಾರ್ಯಾಚರಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. ಒಟ್ಟು 5 ಆನೆಗಳ ಕಾರ್ಯಾಚರಣೆಗೆ ಅನುಮತಿ ಕೇಳಿದ್ದೇವೆ ಆದರೆ ಅನುಮತಿ ಸಿಕ್ಕಿಲ್ಲ, ಇನ್ನೊಂದು ಆನೆಯನ್ನು ಕೂಡ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

ಪಾರು ಮಾಡಿದ ಅರಣ್ಯ ಇಲಾಖೆ ವಾಹನದ ಮೇಲೆ ಆನೆ ದಾಳಿ: ಕೊಡಗಿನಲ್ಲಿ ಮೊನ್ನೆ ತಾನೆ ಆಹಾರ ಅರಸಿ ತೋಟಕ್ಕೆ ಬಂದ ಕಾಡಾನೆಯ ಗುಂಪಿನಲ್ಲಿದ್ದ ಒಂದು ಹೆಣ್ಣಾನೆ ನೀರಿದ್ದ ಕೆರೆಗೆ ಬಿದ್ದು, ಮೇಲೆ ಬರಲಾರದೇ ಒದ್ದಾಡಿತ್ತು. ತೋಟದ ಪಕ್ಕದ ಮನೆಯವರಿಗೆ ಕಾಡಾನೆಯ ಕಿರುಚಾಟ ಕೇಳಿ ಗಮನಿಸಲು ಬಂದಾಗ ವಿಚಾರ ಬೆಳಕಿಗೆ ಬಂದಿದೆ. ನಂತರ ಅರಣ್ಯ ಇಲಾಖೆ ತಂಡ 4 ಗಂಟೆಗಳ ಕಠಿಣ ಪರಿಶ್ರಮದಿಂದ ಹೇಗೋ ಆನೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕೆರೆಯಿಂದ ಮೇಲೆ ಬಂದ ಆನೆ ಸಿಟ್ಟಿಗೆ ಒಳಗಾಗಿದ್ದು ಎದುರಿದ್ದ ಇಲಾಖಾ ವಾಹನದ ಮೇಲೆಯೆ ದಾಳಿ ನಡೆಸಿ ಹಾನಿ ಮಾಡಿತ್ತು. ನಂತರ ಪಟಾಕಿ ಸಿಡಿಸಿ, ಬೊಬ್ಬೆ ಹಾಕಿ ಹೇಗೋ ಕಿರಾತಕ ಕಾಡಾನೆಯನ್ನು ಕಾಡಿಗೆ ಅಟ್ಟಿದ್ದರು.

ಇದನ್ನೂ ಓದಿ: ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ರಕ್ಷಣೆ; ಇಲಾಖೆ ವಾಹನದ ಮೇಲೆ ಸಿಟ್ಟು- ವಿಡಿಯೋ

Last Updated :Jun 9, 2023, 11:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.