ETV Bharat / state

UPSC ಪರೀಕ್ಷೆಯಲ್ಲಿ ರಾಮನಗರದ ಕೃಷಿಕ ಕುಟುಂಬದ ಪ್ರತಿಭೆಗಳ ಸಾಧನೆ

author img

By

Published : May 24, 2023, 10:19 AM IST

ಕೃಷಿಕ ಕುಟುಂಬದ ಪ್ರತಿಭೆಗಳ ಸಾಧನೆ
ಕೃಷಿಕ ಕುಟುಂಬದ ಪ್ರತಿಭೆಗಳ ಸಾಧನೆ

ಯುಪಿಎಸ್​ ಫಲಿತಾಂಶ ಹೊರಬಿದ್ದಿದ್ದು, ರಾಮನಗರ ಜಿಲ್ಲೆಯ ಕೃಷಿಕ ಕುಟುಂಬದ ಇಬ್ಬರು ಪರೀಕ್ಷೆ ಪಾಸ್​​ ಮಾಡಿದ್ದಾರೆ.

238 ನೇ ರ‍್ಯಾಂಕ್ ಪಡೆದ ಚೆಲುವರಾಜು ಪ್ರತಿಕ್ರಿಯೆ

ರಾಮನಗರ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023 ರ ನಾಗರಿಕ ಸೇವೆಗಳ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ರಾಮನಗರ ಜಿಲ್ಲೆಯ ಇಬ್ಬರು ತೇರ್ಗಡೆ ಹೊಂದಿದ್ದಾರೆ. ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣ ಗ್ರಾಮದ ಯುವತಿ ದಾಮಿನಿ ಎಂ.ದಾಸ್ ಅವರು 345 ನೇ ರ‍್ಯಾಂಕ್ ಪಡೆದರೆ, ಹಾರೋಹಳ್ಳಿಯ ಚೆಲುವರಾಜು 238 ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಚೆಲುವರಾಜು (238 ನೇ ರ‍್ಯಾಂಕ್) : ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ದೊಡ್ಡಬಾದಿಗೆರೆಯ ರೈತ ಕುಟುಂಬದ ಚೆಲುವರಾಜು 238 ನೇ ರ‍್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಿಕ್ ‌ಎಂಜಿನಿಯರಿಂಗ್ ಪದವೀಧರ ಚೆಲುವರಾಜು ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿವರೆಗೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಸತತ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ಮುಂದಿನ ದಿನಗಳಲ್ಲಿ ಸರ್ಕಾರಿ ಸೇವೆಯಲ್ಲಿ ಜನರಿಗೋಸ್ಕರ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದೂ ಸೇರಿದಂತೆ ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

ಪರೀಕ್ಷಾ ತಯಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಕೆ ಮಾಡಿದರೆ ಯುಪಿಎಸ್​​ಸಿ ಪರೀಕ್ಷೆಗೆ ಹೆಚ್ಚಿನ ಅಭ್ಯಾಸ ಬೇಕಾಗುತ್ತದೆ. ಎಷ್ಟು ಗಂಟೆಗಳ ಕಾಲ ಓದಿದ್ದೀವಿ ಎನ್ನುವುದಕ್ಕಿಂತಲೂ ಏನನ್ನು ತಿಳಿದುಕೊಂಡಿದ್ದೀವಿ ಅನ್ನುವುದು ಇಲ್ಲಿ ಬಹಳ ಮುಖ್ಯ. ದಿನಕ್ಕೆ 10 ಗಂಟೆಗಳ ಕಾಲ ಅಭ್ಯಾಸ ಮಾಡಬೇಕಾಗುತ್ತದೆ" ಎಂದು ತಿಳಿಸಿದರು.

ದಾಮಿನಿ ಎಂ.ದಾಸ್ (345 ನೇ ರ‍್ಯಾಂಕ್) : ದಾಮಿನಿ ಎಂ. ದಾಸ್‌ ಅವರು ಕೃಷಿಕರ ಕುಟುಂಬ ಹಿನ್ನೆಲೆಯಿಂದ ಬಂದವರು. ಇವರು ತಮ್ಮ ಪ್ರಾಥಮಿಕ ಹಂತ ಹಾಗೂ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ಬೆಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್‌ನಲ್ಲಿ ಮುಗಿಸಿದರು. ಪಿಯುಸಿಯನ್ನು ವಿದ್ಯಾವರ್ಧಕ ಪಿಯು ಕಾಲೇಜಿನಲ್ಲಿ ಮಾಡಿದ್ದು ಉನ್ನತ ಶಿಕ್ಷಣವನ್ನು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದಾಮಿನಿ 345 ನೇ ರ‍್ಯಾಂಕ್ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದು ಎರಡನೇ ಬಾರಿಗೆ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಇಂತಹ ಸಾಧನೆಗೆ ಕಠಿಣ ಪರಿಶ್ರಮದ ಖಂಡಿತವಾಗಿ ಬೇಕು. ಇದಕ್ಕಾಗಿ ದಿನಕ್ಕೆ ಹತ್ತು ಗಂಟೆ ಓದಿಗಾಗಿಯೇ ಮೀಸಲಿಟ್ಟಿದ್ದೆ ಎಂದು ತಿಳಿಸಿದ್ದಾರೆ.

ಗ್ರಾಮದ ಜನರ ಸಂಭ್ರಮ: ರೈತರ ಮಕ್ಕಳಿಬ್ಬರು ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿರುವುದಕ್ಕೆ ಇಡೀ ಗ್ರಾಮವೇ ಸಂಭ್ರಮಪಟ್ಟಿದೆ. ಕೃಷಿಕ ಕುಟುಂಬದಲ್ಲಿ ಬೆಳೆದ ನಮ್ಮೂರಿನ ಹೆಣ್ಣು ಮಗಳಾದ ದಾಮಿನಿ ಹಾಗೂ ಹಾರೋಹಳ್ಳಿಯ ಚೆಲುವರಾಜು ಸಾಧನೆ ನಮಗೆಲ್ಲರಿಗೂ ಸಂತಸ ತಂದಿದೆ. ರೈತನ ಮಕ್ಕಳಾಗಿ ಹುಟ್ಟಿ ಗ್ರಾಮದ ಹೆಸರನ್ನು ಬೆಳಗಿಸುವುದರ ಜೊತೆಗೆ ಜಿಲ್ಲೆಗೂ ಕೀರ್ತಿ ತಂದಿರುವುದಕ್ಕೆ ಸಂತಸವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ: UPSC Results: ಅಂಗನವಾಡಿ ಶಿಕ್ಷಕಿ ಮಗನಿಗೆ 448ನೇ ರ‍್ಯಾಂಕ್‌, ರಾಜ್ಯಕ್ಕೆ ಕೀರ್ತಿ ತಂದ 25ಕ್ಕೂ ಹೆಚ್ಚು ಸಾಧಕರ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.