ETV Bharat / state

ಯುಗಾದಿ ಸಂದರ್ಭ ಆಡುವ ಜೂಜಾಟಕ್ಕೆ ಬ್ರೇಕ್​ ಹಾಕಿದ ಪೊಲೀಸ್​ ಇಲಾಖೆ

author img

By

Published : Mar 20, 2023, 7:32 PM IST

Ramanagara SP Karthik Reddy
ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ

ಯುಗಾದಿ ಹಬ್ಬದ ಸಂದರ್ಭ ಎಲ್ಲಿಯಾದರೂ ಜೂಜಾಟ ಆಡುವುದನ್ನು ಕಂಡರೂ ಸಾರ್ವಜನಿಕರು ಹತ್ತಿರದ ಪೊಲೀಸ್​ ಠಾಣೆಗೆ ಮಾಹಿತಿ ನೀಡುವಂತೆ ಎಸ್​ಪಿ ಮನವಿ ಮಾಡಿದ್ದಾರೆ.

ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ

ರಾಮನಗರ: ಜೂಜಾಟಕ್ಕೆ ರಾಮನಗರದಲ್ಲಿ‌ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ, ಕೇಸ್ ಬೀಳೋದು ಗ್ಯಾರಂಟಿ ಎಂದು ರಾಮನಗರ ಎಸ್ಪಿ‌ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೊಸ ವರ್ಷದ ಆರಂಭ ಎನ್ನುವ ನಂಬಿಕೆ ಇರುವ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದರ ಜೊತೆಗೆ ಜೂಜಾಟ ಆಡುವ ಪದ್ಧತಿ ಕೂಡ ಗತಕಾಲದಿಂಲೂ ನಡೆದುಕೊಂಡು ಬಂದಿದೆ.

ಯುಗಾದಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಹಬ್ಬದ ಆಚರಣೆ ನೆಪದಲ್ಲಿ ಇಸ್ಪೀಟ್ ಆಟ, ಜೌಕಬಾರ ಸೇರಿದಂತೆ ನಾನಾ ಬಗೆಯ ಜೂಜಾಟ ಕನವರಿಕೆಯಲ್ಲಿದ್ದ ಜನರಿಗೆ ರಾಮನಗರ ಜಿಲ್ಲಾ ಪೊಲೀಸರು ಜೂಜಾಟ ನಿರ್ಬಂಧಿಸಿ, ವಾರ್ನಿಂಗ್​ ನೀಡಿದ್ದಾರೆ. ಯುಗಾದಿ ಹಬ್ಬದ ಜೂಜಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಯುಗಾದಿ ಹಬ್ಬದಂದು ಎಲ್ಲಾ ಮಾದರಿಯ ಜೂಜಾಟಗಳನ್ನು ನಿಷೇಧಿಸಿದ್ದು, ಒಂದು ವೇಳೆ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಜೂಜಾಟಕ್ಕೆ ಮುಂದಾದವರು ಹಾಗೂ ಜೂಜು ಅಡ್ಡೆ ನಡೆಸುವವರ ಮೇಲೂ ಗೂಂಡಾ ಕಾಯ್ದೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?: ರಾಮನಗರ ಜಿಲ್ಲೆಯ ಸಮಸ್ತ ನಾಗರೀಕರಿಗೆ ಯುಗಾದಿ ಹಬ್ಬದ ಶುಭಾಶಯಗಳು. ನಮಗೆ ಮಾಹಿತಿ ಇರುವ ಪ್ರಕಾರ ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೊಟೇಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ಕ್ಲಬ್‌ಗಳು ಇನ್ನಿತರ ಸ್ಥಳಗಳು ಮತ್ತು ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಟ ಆಡುತ್ತಾರೆ ಎಂಬುದು ತಿಳಿದು ಬಂದಿದೆ. ಅವುಗಳೆಲ್ಲವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರೂ ಸಾರ್ವಜನಿಕರು ಈ ರೀತಿಯ ಯಾವುದೇ ಕಾನೂನು ಬಾಹಿರ ಆಟಗಳಲ್ಲಿ ಪಾಲ್ಗೊಳಬಾರದು ಮತ್ತು ಅದಕ್ಕೆ ಪ್ರೋತ್ಸಾಹ ನೀಡಬಾರದು. ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು, ಮಧ್ಯವರ್ತಿಗಳ ಮೇಲು ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ, ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ, ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದು ಎಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಎಚ್ಚರಿಗೆ ಕೊಟ್ಟಿದ್ದಾರೆ.

ಸಾರ್ವಜನಿಕರು, ಒಂದು ವೇಳೆ ಎಲ್ಲಿಯಾದರೂ ಈ ಥರ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದರೂ ದಯವಿಟ್ಟು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ 112 ಗೆ ಫೋನ್​ ಮಾಡಿ ತಿಳಿಸಿ​ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋಳಿ ಕಾಳಗದ ಜೂಜುಕೋರರು ಸಿಗದಿದ್ದಕ್ಕೆ ಮೂರು ಹುಂಜು ಬಂಧಿಸಿಟ್ಟ ಕಾರಟಗಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.