ರಾಯಚೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಉತ್ಸವ ವಿಚಾರದ ಕುರಿತು ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ 75 ವರ್ಷವಾಗಿದೆ. ಸಿದ್ದರಾಮಯ್ಯ ಎಂದೂ ಆಚರಣೆ ಮಾಡಿಕೊಂಡಿರಲಿಲ್ಲ. ಈಗ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಅಮೃತ ಮಹೋತ್ಸವ ಆಚರಿಸಿಕೊಂಡು ಇನ್ನೂ 25 ವರ್ಷ ಚೆನ್ನಾಗಿರಲಿ ಎಂದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರ ಉತ್ಸವವನ್ನೂ ನಾವು ನೋಡುತ್ತಿರುತ್ತೇವೆ. ನಮಗೆ ಲಾಭ-ನಷ್ಟ ಮುಖ್ಯವಲ್ಲ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವರು ಹಿಂದೆ ಬೇರೆಯವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ ಯಾವ ರೀತಿ ಮಾತನಾಡುತ್ತಿದ್ದರು ಎಂಬುದನ್ನು ನೋಡಿಕೊಂಡು ಹೆಜ್ಜೆ ಹಾಕಬೇಕು. ನನಗೆ ಒಂದೆರಡು ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಾಗ ತಲೆಕಟ್ಟಿದೆಯಾ ನಿನಗೆ ಎಂದು ಹೇಳಿಕೊಂಡೇ ಹೂಗುಚ್ಛ ಕೊಟ್ಟು ಶುಭಾಶಯ ಕೋರಿದ್ದರು ಎಂದು ಹೇಳಿದರು.
ನೀವು ಕೂಡ ಶುಭಾಶಯ ತಿಳಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವಾಸ-ಆತ್ಮೀಯತೆ ರಾಜಕೀಯಕ್ಕಿಂತ ದೊಡ್ಡದು. ಹುಟ್ಟುಹಬ್ಬ ಒಂದು ದಿನಕ್ಕಷ್ಟೇ ಸಂಜೆಯಾಗುತ್ತಿದ್ದಂತೆ ಎಲ್ಲಾ ಮುಗಿಯುತ್ತದೆ. ಒಬ್ಬ ಅಭಿಮಾನಿಯಾಗಿ ಬೇಡ ಎನ್ನಲು ನಾನು ಯಾರು? ಬರ್ತ್ಡೇಗೆ ಹೋಗಲೇಬೇಕು ಅಂತ ಏನು ಇಲ್ಲ, ಮೊಬೈಲ್ ಮೂಲಕ ಸಹ ಶುಭಾಶಯ ತಿಳಸಬಹುದು ಎಂದರು.
ಅವರ ಕಾರ್ಯಕರ್ತರು ಬರುತ್ತಾರೆ. ನಮ್ಮ ಕಾರ್ಯಕರ್ತರು ಕೆಲವರು ಹೋಗುತ್ತಾರೆ. ನಮ್ಮ ಕೆಲವು ಬುದ್ಧಿವಂತ ಕಾರ್ಯಕರ್ತರು ಯಾರ್ಯಾರನ್ನು ಕರೆದುಕೊಂಡು ಬರಬೇಕೋ ಅವರನ್ನು ಕರೆದುಕೊಂಡು ಬರುತ್ತಾರೆ. ಅವರ ಆಚರಣೆಗೆ ನಮ್ಮ ಪರವೂ ಇಲ್ಲ, ವಿರೋಧವೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ.. ಇಬ್ಬರಿಂದಲೂ ಪ್ಲಾನ್, ಮಾಸ್ಟರ್ ಪ್ಲಾನ್