ರಾಯಚೂರು: ರಾಯರ ಅಂತರಂಗದ ಭಕ್ತರೊಬ್ಬರು 100 ರೂಪಾಯಿ ನೋಟುಗಳನ್ನ ಶ್ರೀ ಸುಬುದೇಂದ್ರ ತೀರ್ಥರಿಗೆ ನೀಡಿ, ಅನುಗ್ರಹ ಸಂದೇಶ ಮುಗಿದ ಬಳಿಕ ರಥೋತ್ಸವಕ್ಕೆ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವಂತೆ ಕೋರಿದ್ದರು. ಇದನ್ನು ಶ್ರೀಗಳು ನೀಡಿದ್ದಾರಷ್ಟೆ ಎಂದು ಮಂತ್ರಾಲಯದ ರಾಘವೇಂದ್ರ ಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ರಾವ್ ಸ್ಪಷ್ಟಪಡಿಸಿದ್ದಾರೆ.
ಶ್ರೀಗಳು ನೋಟ್ ನೀಡುವಾಗ ಬಹಳಷ್ಟು ಜನ ಬರುವಾಗ ಅಹಿತಕರ ಘಟನೆ ನಡೆಯುವ ಮುಂಚೆ ಅದನ್ನ ಮೊಟಕುಗೊಳಿಸಲಾಗಿತ್ತು. ರಥೋತ್ಸವಕ್ಕೆ ಭಕ್ತರು ಬಾಳೆ ಹಣ್ಣು ಎಸೆಯುವುದು, ಹಣ ಎಸೆಯುವುದು ಹಳೆ ಸಂಪ್ರದಾಯ. ಇದೇನು ಹೊಸ ಸಂಪ್ರದಾಯವಲ್ಲ, ಹಲವು ಮಠಗಳ ರಥೋತ್ಸವ ವೇಳೆ ಹಣ ನೀಡಿರುವ ಉದಾಹರಣೆ ಇದೆ. ಶ್ರೀಗಳು ಹಣ ತೂರುವಾಗ ಯಾವುದೇ ಅಹಿಕರ ಘಟನೆ ಸಹ ನಡೆದಿಲ್ಲವೆಂದು ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಸಂಬಂಧ ಮಂತ್ರಾಲಯದಲ್ಲಿ ನಡೆದ 348 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಮಹಾ ರಥೋತ್ಸವದಂದು 100 ರೂಪಾಯಿ ಮುಖಬೆಲೆಯ ನೋಟು ತೂರಿ ನೂಕು ನುಗ್ಗಲಿಗೆ ಶ್ರೀಮಠದ ಪೀಠಾಧಿಪತಿ ಕಾರಣವೆಂದು ಆರೋಪಿಸಿ ನಾರಾಯಣ ಎಂಬುವರು ಮಂತ್ರಾಲಯದಲ್ಲಿ ಪೊಲೀಸ್ ಠಾಣೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಠದಿಂದ ಸ್ಪಷ್ಟನೆ ನೀಡಲಾಗಿದೆ.