ETV Bharat / state

ರಾಯಚೂರು: ಪೊಲೀಸರ ಮೇಲೆ ಹಲ್ಲೆ, ಓರ್ವ ಆರೋಪಿ ಸೆರೆ

author img

By ETV Bharat Karnataka Team

Published : Jan 12, 2024, 10:43 AM IST

An accused arrested on assault on Policemen
ಪೊಲೀಸರ ಮೇಲೆ ಹಲ್ಲೆ ಪ್ರಕರಣ

ಕಳ್ಳತನ ಹಾಗೂ ಪೊಲೀಸರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆಂದು ತೆರಳಿದ್ದ ಬಳಗಾನೂರು ಠಾಣೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಸ್ಕಿ ಪಟ್ಟಣದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲ್ಲೇಶ್​ ಬಂಧಿತ ಆರೋಪಿ. ಪ್ರಕರಣದ ಆರು ಆರೋಪಿಗಳ ಪೈಕಿ ಈತನೂ ಒಬ್ಬ. ಪ್ರಕರಣದಲ್ಲಿ ಈತ ಐದನೇ ಆರೋಪಿಯಾಗಿದ್ದಾನೆ.

ಬಳಗಾನೂರ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಮಫ್ತಿಯಲ್ಲಿ ಇಬ್ಬರು ಪೊಲೀಸ್ ಕಾನ್​ಸ್ಟೆಬಲ್​ಗಳು ತೆರಳಿದ್ದರು. ಗುಡದೂರು ಗ್ರಾಮದ ಸಮೀಪ ಬೈಕ್ ತಡೆದು ಇಬ್ಬರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ತಪ್ಪಿಸಿಕೊಂಡು ಮಸ್ಕಿ ಪಟ್ಟಣದ ಕಡೆ ತೆರಳಿದ್ದಾರೆ. ಇವರನ್ನು ಹಿಂಬಾಲಿಸಿಕೊಂಡು ಹೋದ ಪೊಲೀಸರ ಮೇಲೆ ಮಸ್ಕಿ ಪಟ್ಟಣದ ವಾಲ್ಮೀಕಿ ಸರ್ಕಲ್ ಬಳಿ ಆರೋಪಿಗಳು ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಾಯಗೊಂಡ ಪೊಲೀಸ್ ಕಾನ್​ಸ್ಟೆಬಲ್​ಗಳಾದ ಮಂಜುನಾಥ ಹಾಗೂ ಗೋಪಾಲ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಮೂರು ತಂಡಗಳನ್ನು ರಚಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಆರು ಆರೋಪಿಗಳಲ್ಲಿ 5ನೇ ಆರೋಪಿಯಾಗಿರುವ ಮಲ್ಲೇಶ್​ನನ್ನು ಅರೆಸ್ಟ್ ಮಾಡಿದ್ದು, ಇನ್ನುಳಿದ ಐವರು ಆರೋಪಿಗಳಾದ ದುರ್ಗೇಶ್, ಸಣ್ಣ ದುರ್ಗೇಶ್, ಪರುಶುರಾಮ, ವೆಂಕಟೇಶ, ಶಿವರಾಜ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಉದ್ಯಮದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ಅಸೂಯೆ; ಮಾಲೀಕನ ಪತ್ನಿ ಕೊಲೆ ಮಾಡಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.