ETV Bharat / state

ಮೈಸೂರಲ್ಲಿ ಹುಲಿ ದಾಳಿಗೆ ಹಸು ಬಲಿ.. ಮಂಡ್ಯದಲ್ಲಿ ಕರು ಹೊತ್ತೊಯ್ದು ತಿಂದ ಚಿರತೆ

author img

By ETV Bharat Karnataka Team

Published : Sep 17, 2023, 4:39 PM IST

ಹುಲಿ ದಾಳಿ ನಡೆಸಿರುವುದು
ಹುಲಿ ದಾಳಿ ನಡೆಸಿರುವುದು

ಮೈಸೂರಿನ ಎಚ್​ ಡಿ ಕೋಟೆ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಪರಿಣಾಮ ಒಂದು ಹಸು ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿದೆ.

ಮೈಸೂರು: ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ, 1 ಹಸು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್ ಡಿ‌ ಕೋಟೆ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಇಂದು ನಡೆದಿದೆ.

ಹೊಸಹೊಳಲು ಗ್ರಾಮದ ಎಚ್. ಎಸ್ ಲಿಂಗರಾಜು ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ಹಸುಗಳನ್ನು ಲಿಂಗರಾಜು ಅವರ ಪುತ್ರ ವಿಕಾಸ್ ಮೇಯಿಸುವ ವೇಳೆ ಹುಲಿ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಕರುವಿನ ಮೇಲೆ ಚಿರತೆ ದಾಳಿ: ಇನ್ನೊಂದೆಡೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದು ತಿಂದು ಹಾಕಿರುವ ಘಟನೆ ತಾಲೂಕಿನ ಮಾದಾಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಭಿಷೇಕ್​ ಗೌಡ ಎಂಬುವವರಿಗೆ ಸೇರಿದ ಹಸುವಿನ ಕರುವನ್ನ ತಡರಾತ್ರಿ ಚಿರತೆ ತಿಂದು ಹಾಕಿದೆ.

ಚಿರತೆ ದಾಳಿಯ ಬಗ್ಗೆ ಅಭಿಷೇಕ್​ಗೌಡ ಅವರು ಮಾಹಿತಿ ನೀಡಿದ್ದಾರೆ

ಪ್ರತಿನಿತ್ಯ ಕೊಟ್ಟಿಗೆಯಲ್ಲಿ ಹಸು ಮತ್ತು ಕರುವನ್ನು ಕಟ್ಟಿ ಹಾಕಲಾಗುತ್ತಿತ್ತು. ಚಿರತೆ ರಾತ್ರಿ ವೇಳೆ ದಾಳಿ ಮಾಡಿ ಕರುವನ್ನ ಅನತಿ ದೂರ ಎಳೆದೊಯ್ದು ಅರ್ಧ ಭಾಗ ತಿಂದು ಹಾಕಿದೆ. ಚಿರತೆ ದಾಳಿ ಮಾಡಿರುವ ಬೆನ್ನಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜಮೀನಿಗೆ ತೆರಳಲು ರೈತರು ಆತಂಕ ಪಡುತ್ತಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

ಕರು ಕಳೆದುಕೊಂಡ ರೈತನ ಕುಟುಂಬ ಕಂಗಾಲಾಗಿದ್ದು, ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹುಲಿ ದಾಳಿಗೆ ಸಿಂಧಿ ಹಸು ಬಲಿ : ಹುಲಿ ದಾಳಿಗೆ ಸಿಂಧಿ ಹಸು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಮತ್ತಿಕಟ್ಟೆ ಗ್ರಾಮದಲ್ಲಿ ( ಫೆಬ್ರವರಿ 14-2023) ನಡೆದಿತ್ತು. ಮತ್ತಿಕಟ್ಟೆ ಬ್ಲೂ ಮೌಂಟೇನ್ ಎಸ್ಟೇಟ್ ಆನಂದ್ ಮಿಸ್ಕಿತ್ ಎಂಬುವವರಿಗೆ ಸೇರಿದ ಕಾಫಿ ಎಸ್ಟೇಟ್​​ನಲ್ಲಿ ಹುಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ ಎಂಬುದು ತಿಳಿದು ಬಂದಿತ್ತು. ಗ್ರಾಮದ ಮಧುಸೂದನ್ ಚಂದ್ರಾವತಿ ಎಂಬುವವರಿಗೆ ಸೇರಿದ ಹಸು ಇದಾಗಿತ್ತು. ಸ್ಥಳಕ್ಕೆ ಉಪವಲಯ ಅಧಿಕಾರಿ ಉಮೇಶ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಜೀವನಕ್ಕೆ ಆಸರೆಯಾಗಿದ್ದ ಹಸು : ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಕುಟುಂಬ ಬೆಲೆ ಬಾಳುವ ಹಸುವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಬಡ ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ತಿಂದಿರುವ ಭಯಾನಕ ದೃಶ್ಯ ಕಂಡು ಹಸುವಿನ ಮಾಲೀಕರು ಕಣ್ಣೀರು ಸುರಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಹುಲಿ ದಾಳಿಗೆ ಸಿಂಧಿ ಹಸು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.