ಮೈಸೂರು: ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 1 ರೂಪಾಯಿ 50 ಪೈಸೆಯನ್ನು ಕಡಿತಗೊಳಿಸಲು ಮೈಸೂರು ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟವು ತೀರ್ಮಾನಿಸಿ ಆದೇಶವನ್ನು ಹೊರಡಿಸಿದೆ. ನಂದಿನಿ ಹಾಲಿನ ದರದ ಏರಿಕೆ ಜೊತೆಯಲ್ಲಿ ರೈತರಿಗೆ ನೀಡುತ್ತಿರುವ ಹಾಲಿನ ದರವನ್ನು ಸಹ ಇಳಿಸುವಂತೆ, ಜುಲೈ 20 ರಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಡೆಸಿದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ಸಹ ನಿನ್ನೆ ಹೊರಡಿಸಲಾಗಿದೆ.
ಆದೇಶದಲ್ಲಿ ಇರುವುದೇನು ? : ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಕಳೆದ ಒಂದು ವಾರದ ಹಿಂದೆ ಸಭೆ ನಡೆಸಿತ್ತು. ಈ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಚರ್ಚೆಯಾಗಿದ್ದು, ಚರ್ಚೆಯಲ್ಲಿ ಅಂತಿಮಗೊಂಡ ನಂತರ ನಿನ್ನೆ ಈ ಬಗ್ಗೆ ಆದೇಶವನ್ನು ಹೊರಡಿಸಿದೆ. ಅದರಂತೆ ಪರಿಷ್ಕೃತ ದರ ನಿಗದಿ ಮಾಡಲು ತೀರ್ಮಾನ ಮಾಡಿರುವ ಒಕ್ಕೂಟ, ಪರಿಷ್ಕೃತ ದರದ ಅನ್ವಯ ಸಂಘಗಳಿಂದ ರೈತರಿಗೆ ಪ್ರತಿ ಲೀ. ಗೆ ಕೇವಲ 31.52 ರೂಪಾಯಿ ಮಾತ್ರ ಸಂದಾಯ, ಜೊತೆಗೆ ಗ್ರಾಹಕರಿಗೆ ನೀಡುವ ಹಾಲಿನ ದರದಲ್ಲಿ 3 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದರ ಜೊತೆಗೆ ರೈತರ ಕಿಸೆಗೂ ಸಹ ಸರ್ಕಾರ ಕತ್ತರಿ ಹಾಕಲು ಹೊರಟಿದೆ. 1.50 ರೂಪಾಯಿ ಹಣ ಕಡಿತ ಮಾಡದಿದ್ದರೆ ಒಕ್ಕೂಟಕ್ಕೆ 56 ಕೋಟಿ ರೂ ನಷ್ಟ ಆಗುವ ಸಂಭವವಿದೆ ಎಂದು ಹೇಳಲಾಗಿದೆ. ಹೀಗಾಗಿ ಒಕ್ಕೂಟದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಸರ್ಕಾರದಿಂದ ದರ ಹೆಚ್ಚಳವಾಗಿರುವ ಮೂರು ರೂಪಾಯಿ ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ.
ಜೊತೆಗೆ ರೈತರಿಂದ ಹಾಲಿನ ದರದಲ್ಲಿ ಕಡಿತಗೊಳಿಸಿದ 1.50 ಪೈಸೆಯಲ್ಲಿ ಒಕ್ಕೂಟ ತನ್ನ ಸಿಬ್ಬಂದಿಯ ಗುಣಮಟ್ಟದ ಪ್ರೋತ್ಸಾಹ ಧನಕ್ಕಾಗಿ 0.20 ಪೈಸೆ, ಸಂಘಗಳ ಮಾರ್ಜಿನ್ ಹಣ 0.75 ಪೈಸೆ, ಸರ್ಕಾರಿ ಯೋಜನೆಗಳ ನಿರ್ವಹಣೆಗೆ 0.10 ಪೈಸೆ ಹಾಗೂ ರೈತ ಕಲ್ಯಾಣ ಟ್ರಸ್ಟ್ ಗೆ 0.25 ಪೈಸೆ ಹಾಗೂ ಸಂಘಗಳಿಂದ ಒಕ್ಕೂಟ ಷೇರು ಬಾಬ್ತಿಗೆ 0.10 ಪೈಸೆಯಂತೆ ಆಯಾ ಖಾತೆಗಳಿಗೆ ವರ್ಗಾಯಿಸಲಾಗುವುದು ಹಾಗೂ ಇತರ ನಿಬಂಧನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಒಕ್ಕೂಟವು ತಿಳಿಸಿದೆ.