ETV Bharat / state

ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

author img

By

Published : Mar 25, 2023, 4:40 PM IST

Updated : Mar 25, 2023, 9:52 PM IST

ರಾಹುಲ್‌ ಗಾಂಧಿಯವರನ್ನು ಅಸಂವಿಧಾನಿಕ ನಡೆಯ ಮೂಲಕ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಕೆಲಸವಲ್ಲ ಎಂದು ಕೆ.ಎಸ್. ಶಿವರಾಮು ಕಿಡಿಕಾರಿದ್ದಾರೆ.

Etv Bharatprotest-in-mysore-for-rahul-gandhi-disqualified
ರಾಹುಲ್ ಗಾಂಧಿ ಅನರ್ಹ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿರುವುದು ಅಸಂವಿಧಾನಿಕ ನಡೆ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪುರಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.

ರಾಹುಲ್‌ ಗಾಂಧಿ ಅವರನ್ನು ಅಸಂವಿಧಾನಿಕ ನಡೆಯ ಮೂಲಕ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಕೆಲಸವಲ್ಲ. ಇದು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಮುನ್ಸೂಚನೆ ಈ ಕ್ರಮ ಖಂಡನಾರ್ಹ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಕಿಡಿಕಾರಿದರು.

ರಾಹುಲ್ ಗಾಂಧಿಯವರ ವಿರುದ್ಧ ಮಾನನಷ್ಟ ಪ್ರಕರಣವೊಂದರಲ್ಲಿ ಸೂರತ್‌ನ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಮೇಲ್ಮನವಿಯನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ನೀಡಿದೆ. ಈ ಮಧ್ಯೆ ಏಕಾಏಕಿ ಸಂಸತ್ ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆಯದೇ, ಮೇಲ್ಮನವಿಗೆ ಕಾಲಾವಕಾಶವನ್ನು ನೀಡಿರುವುದನ್ನು ಲೆಕ್ಕಿಸದೆ ಏಕಾಏಕಿ ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿರಂಕುಶಾಧಿಪತ್ಯ ದೇಶಗಳ ಸಾಲಿಗೆ ಈಗ ಭಾರತವನ್ನು ಸೇರಿಸಲಾಗಿದೆ - ಕೆ.ಎಸ್. ಶಿವರಾಮು: ಅನರ್ಹಗೊಳಿಸಿದ ಪ್ರಕ್ರಿಯೆಯೇ ಪ್ರಶ್ನಾರ್ಹವಾಗಿದೆ. ವಿರೋಧ ಪಕ್ಷಗಳ ನಾಯಕರು ಮತ್ತು ಟೀಕಾಕಾರನ್ನು ಧಮನಿಸಲು ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಿದಂತೆ ತಡೆಯಲು ಕಾನೂನು ಮತ್ತು ಇತರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ನಿರಂಕುಶಾಧಿಪತ್ಯ ದೇಶಗಳ ಸಾಲಿಗೆ ಈಗ ಭಾರತವನ್ನು ಸೇರಿಸಲಾಗಿದೆ ಎಂದು ಟೀಕಿಸಿದರು.

ಬಿಜೆಪಿ ನಾಯಕರು ಹಲವು ವರ್ಷಗಳಿಂದ ರಾಹುಲ್ ಗಾಂಧಿಯವರು ಮತ್ತು ಇತರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗಿಂತ ಹೆಚ್ಚು ಅಪರಾಧ ಎಸಗಿದವರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೇ, ಬಿಜೆಪಿ ಮತ್ತು ಆರ್‌ಎಸ್‌ಎಸ್​ನ ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರು ನರಮೇಧಕ್ಕೆ ಕರೆ ನೀಡಿದ್ದರೂ ಯಾವ ಕ್ರಮವೂ ಇಲ್ಲದೆ ಬೀದಿಯಲ್ಲಿ ತಿರುಗಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಡಾ. ಸಿ.ಎನ್​ ಅಶ್ವತ್ಥನಾರಾಯಣ, ಆರ್.ಅಶೋಕ್, ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ, ಮುಂತಾದವರು ದ್ವೇಷ ಭಾಷಣ, ವಿರೋಧ ಪಕ್ಷದ ನಾಯಕರನ್ನು ಕೊಲೆ ಮಾಡಲು ಕರೆ ನೀಡಿರುವುದು ಮತ್ತು ಇತರೆ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಕೂಡ ಇವರುಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.

ಕರ್ನಾಟಕದಲ್ಲಿ ಶಾಸಕರಾದ ನೆಹರು ಓಲೆಕರ್ ರವರಿಗೆ ಎರಡು ವರ್ಷಗಳ ಶಿಕ್ಷೆಯಾಗಿದೆ. ಮತ್ತೊಂದು ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಾಸಕರಾದ ಕುಮಾರಸ್ವಾಮಿಯವರಿಗೆ 4 ವರ್ಷಗಳ ಶಿಕ್ಷೆಯಾಗಿದೆ. ಆದರೂ ರಾಜ್ಯ ಸರ್ಕಾರ ಇವರುಗಳನ್ನು ಶಾಸಕಸ್ಥಾನದಿಂದ ವಜಾಗೊಳಿಸಿಲ್ಲ. ಇವರುಗಳಿಗೆ ಅನ್ವಯಿಸದ ಕಾನೂನು ರಾಹುಲ್ ಗಾಂಧಿ ಅವರ ಮೇಲೆ ಏಕೆ? ಎಂದು ಕೆ.ಎಸ್. ಶಿವರಾಮು ಪ್ರಶ್ನಿಸಿದರು.

ಇನ್ನು ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ನ ಸದಸ್ಯ ಡಾ.ತಿಮ್ಮಯ್ಯ, ಕರ್ನಾಟಕ ರಾಜ್ಯ ಹಿಂದುಳಿದವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಲೋಕೇಶ್‌ಕುಮಾರ್‌ ಮಾದಾಪುರ, ಮುಖಂಡರಾದ ಜಯ್‌ಕುಮಾರ್, ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ರಾಜಕೀಯ ಕುತಂತ್ರ : ಹೆಚ್ ವಿಶ್ವನಾಥ್

Last Updated :Mar 25, 2023, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.