ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ತಲಕಾಡಿನ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ವಧು-ವರ ಸಾವನ್ನಪ್ಪಿದ ಪ್ರಕರಣ ಸಂಬಂಧ 6 ಮಂದಿ ವಿರುದ್ಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಸೋಮವಾರ ತಲಕಾಡಿನ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ನವ ವಧು-ವರರಿಬ್ಬರು ಸಾವನ್ನಪ್ಪಿದ್ದರು. ಫೋಟೋ ಶೂಟ್ನಲ್ಲಿ ಭಾಗವಹಿಸಿ ಮೃತಪಟ್ಟ ಚಂದ್ರು, ಶಶಿಕಲಾ, ಫೋಟೊಗ್ರಾಫರ್, ತೆಪ್ಪ ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿ 6 ಜನರ ಮೇಲೆ ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದರು.
ಕಟ್ಟೆಪುರ ಮತ್ತು ಮುಡುಕುತೊರೆ ನಡುವೆ ಹರಿಯುವ ಕಾವೇರಿ ನದಿಯನ್ನು ದಾಟಲು ಮೂಗಪ್ಪ ತೆಪ್ಪ ಬಳಸುತ್ತಿದ್ದರು. ಪ್ರಿ ವೆಡ್ಡಿಂಗ್ ಶೂಟ್ಗೆ ತೆಪ್ಪ ನೀಡುವಂತೆ ಚಂದ್ರು ಹಾಗೂ ಅವರ ಜೊತೆಗಿದ್ದವರು ಕೇಳಿಕೊಂಡ ಹಿನ್ನೆಲೆಯಲ್ಲಿ ಮೂಗಪ್ಪ ತೆಪ್ಪ ನೀಡಿದ್ದರು ಎನ್ನಲಾಗ್ತಿದೆ.
ನದಿಪಾತ್ರದ ನೀರಾವರಿ ಇಲಾಖೆಗೆ ಪತ್ರ:
ನದಿ ಪಾತ್ರದಲ್ಲಿ ಅಸುರಕ್ಷತೆಯಿಂದ ತೆಪ್ಪ, ದೋಣಿ ಮತ್ತು ಬೋಟ್ ನಡೆಸುವವರ ವಿರುದ್ಧ ಕ್ರಮ ವಹಿಸುವಂತೆ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗುವುದು. ತೆಪ್ಪ, ದೋಣಿ, ಬೋಟ್ನಲ್ಲಿ ಸಾಗುವವರು ಕಡ್ಡಾಯವಾಗಿ ಲೈಫ್ ಜಾಕೆಟ್ ಬಳಸಬೇಕು. ಆದರೆ, ಮುಡುಕುತೊರೆಯಲ್ಲಿ ನಡೆದ ದುರಂತದಲ್ಲಿ ಲೈಫ್ ಜಾಕೆಟ್ ಬಳಸದ ಹಿನ್ನೆಲೆ ಪ್ರಾಣ ಕಳೆದುಕೊಂಡರು. ನದಿ ಪಾತ್ರದಲ್ಲಿ ತೆಪ್ಪ, ದೋಣಿ, ಬೋಟ್ಗಳನ್ನು ನಡೆಸುವವರಿಗೆ ಈ ಬಗ್ಗೆ ನೀರಾವರಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಮನವಿ ಮಾಡಿ ಪತ್ರ ಬರೆಯುವುದಾಗಿ ಎಸ್ಪಿ ರಿಷ್ಯಂತ್ ತಿಳಿಸಿದರು.