ETV Bharat / state

ಮೈಸೂರು ಯುವ ದಸರಾ: ಮಳೆ ನಡುವೆಯೂ ಮನರಂಜನೆಯಲ್ಲಿ ಮಿಂದೆದ್ದ ಜನ

author img

By

Published : Oct 1, 2022, 7:51 AM IST

Updated : Oct 1, 2022, 9:03 AM IST

ಮೈಸೂರು ಯುವ ದಸರಾ ಕಾರ್ಯಕ್ರಮ
mysore yuva dasara

ಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ ನಟ ನಟಿಯರು ಸರಣಿ ಕಾರ್ಯಕ್ರಮಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸಿದರು.

ಮೈಸೂರು: ಒಂದು ಕಡೆ ಧರೆಗೆ ಮಳೆಯ ಸಿಂಚನವಾಗುತ್ತಿದ್ದರೆ ಇನ್ನೊಂದು ಕಡೆ ಮಳೆಗೆ ಸೆಡ್ಡು ಹೊಡೆಯುವಂತೆ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ರಿಯಲ್ ಸ್ಟಾರ್ ಉಪೇಂದ್ರ ಅವರ ಸೂಪರ್​ ಹಿಟ್​ ಡೈಲಾಗ್ಸ್, ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಹಾಸ್ಯ ಚಟಾಕಿ ಮತ್ತು ಕಲಾವಿದರ ಸಂಗಮ.

ಹೌದು, ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ 3ನೇ ದಿನದ ಯುವ ದಸರಾದ ಸ್ಯಾಂಡಲ್​ವುಡ್ ನೈಟ್ ವೇದಿಕೆಯ ಮೇಲೆ ಉಪೇಂದ್ರ ಹಾಗೂ ಸಾಧುಕೋಕಿಲ ಅವರು ರಕ್ತ ಕಣ್ಣೀರು ಚಿತ್ರದ ಹಾಡನ್ನು ಹಾಡುವುದರ ಜೊತೆ ನರ್ತಿಸಿ ಅಭಿಮಾನಿಗಳನ್ನು ರಂಜಿಸಿದರು.

ಮೈಸೂರು ಯುವ ದಸರಾ ಕಾರ್ಯಕ್ರಮ

ಚಿಕ್ಕಣ್ಣ ಅವರು ಮಾತನಾಡಿ, ನಾನು ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ. ಅದನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿ ಪುನೀತ್ ರಾಜ್ ಕುಮಾರ್ ಅವರಿಗಾಗಿ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡನ್ನು ಹೇಳಿದರು.

ಇದನ್ನೂ ಓದಿ: ಯುವ ದಸರಾ ಸಂಭ್ರಮ.. ಭಕ್ತಿಪರವಶಕ್ಕೆ ಕೊಂಡೊಯ್ದ ಶಿವಸ್ಮರಣೆ ನೃತ್ಯ

ವೇದಿಕೆಯ ಮೇಲೆ ಸಾಧುಕೋಕಿಲ ಅವರು ಮುಕುಂದ ಮುರಾರಿ ಚಿತ್ರದ ನೀನೇ ರಾಮ.. ನೀನೇ ಶಾಮ.. ನೀನೇ ಅಲ್ಲಾ.. ನೀನೇ ಏಸು.. ಗೀತೆ ಹಾಡಿ ಎಲ್ಲರೂ ತಲೆದೂಗುವಂತೆ ಮಾಡಿದರು. ಬಳಿಕ ಪುನೀತ್ ರಾಜ್ ಕುಮಾರ್ ಕುರಿತು ಮಾತನಾಡಿ, ಅವರು ಎಲ್ಲೂ ಹೋಗಿಲ್ಲ. ನಮ್ಮ ನಿಮ್ಮ ನಡುವೆಯೇ ಇದ್ದಾರೆ ಎಂದು ಅಪ್ಪುಗೆ ನಮನ ಸಲ್ಲಿಸಿದರು.

mysore yuva dasara
ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಿಕ್ಕಣ್ಣ

ಸೋನು, ಧೀರನ್ ರಾಮ್ ಕುಮಾರ್, ನಿಧಿ ಸುಬ್ಬಯ್ಯ ಹಾಗೂ ಹರ್ಷಿಕಾ ಪೂಣಚ್ಛ ಅವರ ನೃತ್ಯ ನೋಡುಗರ ಆಕರ್ಷಣೆಯಾಗಿತ್ತು. ಕೆಂಡ ಸಂಪಿಗೆ ಚಿತ್ರದ ನಾಯಕಿ ಮನ್ವಿತಾ ಅವರು ಪುನೀತ್ ರಾಜ್‍ಕುಮಾರ್ ಹಾಗೂ ದರ್ಶನ್ ಅವರ ಗೀತೆಗಳಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಗುರುಶಿಷ್ಯರು ಚಿತ್ರದ ನಾಯಕಿ ನಿಶ್ವಿಕ ನಾಯ್ಡು ಅವರು ತಮ್ಮದೇ ಚಿತ್ರದ ಗೀತೆಗೆ ನರ್ತಿಸಿದರು.

mysore yuva dasara
ಮೈಸೂರು ಯುವ ದಸರಾ ಕಾರ್ಯಕ್ರಮ

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಲಾವಿದರ ತಂಡದಿಂದ ವೇದಿಕೆ ಮೇಲೆ ವಿವಿಧ ಪ್ರಕಾರದ ಜಾನಪದ ನೃತ್ಯಗಳನ್ನು ಮಾಡಿ ನೆರೆದಿದ್ದ ಕಲಾರಸಿಕರನ್ನು ರಂಜಿಸಿದರು. ಮೈಸೂರಿನ ಎಸ್.ಕೆ.ವಿ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಶಿವರಾಜ್ ಕುಮಾರ್ ಅಭಿನಯದ ಜೋಗಿ ಚಿತ್ರದ ಚೆಲ್ಲಿದರು ಮಲ್ಲಿಗೆಯಾ.. ಹಾಗೂ ಜನುಮದ ಜೋಡಿ ಚಿತ್ರದ ಶುಭವಾಗುತೈತೆ ಕಣಮೋ.. ಗೀತೆಗೆ, ಪುನೀತ್ ರಾಜ್ ಕುಮಾರ್ ನಟಿಸಿರುವ ಹುಡುಗರು ಚಿತ್ರದ ಗಲ್ಲು ಗಲ್ಲು ಎನ್ನುತಾ ಗೆಜ್ಜೆ ಹಾಗೂ ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕಿಳ್ಯಾವುದೋ ಹುಚ್ಚಪ್ಪಾ.. ಮತದಲ್ಲಿ ಮೇಲ್ಯಾವುದೋ.. ಹಾಡಿಗೆ ಹೆಜ್ಜೆ ಹಾಕಿ ಸಭಿಕರಿಂದ ಸೈ ಎನಿಸಿಕೊಂಡರು.

ಇದನ್ನೂ ಓದಿ: ಮೈಸೂರು ಯುವ ದಸರಾ: ಗುರು ಕಿರಣ್ ಗಾಯನಕ್ಕೆ ಮನಸೋತ ಪ್ರೇಕ್ಷಕರು

ಸ್ಲಂ ಡಾಗ್ ಚಿತ್ರದ ಜೈಹೋ ಹಾಡಿಗೆ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಚಿತ್ರದ ಅಂಬಾರಿ ಊರಿನಲ್ಲಿ ಗೀತೆ ಹಾಗೂ ರವಿಚಂದ್ರನ್ ಅಭಿನಯದ ಸಿಪಾಯಿ, ಕಲಾವಿದ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಿಗೆ ಮನಮೋಹಕವಾಗಿ ನೃತ್ಯ ಮಾಡಿದ ಸ್ಥಳೀಯ ನೃತ್ಯ ತಂಡವು ಪ್ರೇಕ್ಷಕರು ಮೈ ಮರೆತು ಕುಣಿಯುವಂತೆ ಮಾಡಿದರು.

ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಜ್ಞಾ, ಸೇರಿದಂತೆ ಅನೇಕ ನಟ-ನಟಿಯರು ಯುವ ದಸಾರ ಕಾರ್ಯಕ್ರಮಕ್ಕೆ ಮೆರಗು ತಂದರು.

ಯುಕ್ರೇನ್ ದೇಶದ ಲೇಸರ್ ಆ್ಯಕ್ಟ್ ಮತ್ತು ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನಡೆದ ನಾಟ್ಯವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಆರಗ ಜ್ಞಾನೇಂದ್ರ, ಶಾಸಕ ಎಲ್.ನಾಗೇಂದ್ರ ಇತರರು ಇದ್ದರು.

Last Updated :Oct 1, 2022, 9:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.