ETV Bharat / state

ದಸರಾ ಮಹೋತ್ಸವದಲ್ಲಿ ಭಾಗವಹಿಸುವ 14 ಆನೆಗಳ ತೂಕ ಪರೀಕ್ಷೆ.. ನಾಳೆಯಿಂದ ಆನೆಗಳ ತಾಲೀಮು ಶುರು

author img

By ETV Bharat Karnataka Team

Published : Sep 27, 2023, 6:04 PM IST

14 elephants weight test
14 ಗಜಪಡೆಯ ತೂಕ ಪರೀಕ್ಷೆ

ದಸರಾ ಆನೆಗಳಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಆನೆ 5680 ಕೆಜಿ ತೂಕ ಹೊಂದಿ ಅತ್ಯಂತ ಬಲಶಾಲಿ ಎಂಬ ಹೆಗ್ಗಳಿಕೆಯನ್ನು ಮತ್ತೆ ಉಳಿಸಿಕೊಂಡಿದೆ. ಮೊದಲ ಬಾರಿಗೆ ಜಂಬುಸವಾರಿಯ ಕ್ಯಾಪ್ಟನ್ ಅಭಿಮನ್ಯು ಆನೆ ತೂಕ ಸೆ. 6 ರಂದು 5160 ಕೆಜಿ ಇತ್ತು. ಈಗ 21 ದಿನಗಳಲ್ಲಿ 5300 ಕೆಜಿ ತೂಕ ಹೆಚ್ಚಿಸಿಕೊಂಡಿದೆ.

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಮೊದಲ ಹಾಗೂ ಎರಡನೇ ತಂಡದ ಒಟ್ಟು 14 ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು ಈ ಬಾರಿ ಜಂಬುಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು 21 ದಿನಗಳಲ್ಲಿ 140 ಕೆಜಿ ತೂಕ ಹೆಚ್ಚಿಸಿಕೊಂಡಿರುವುದು ವಿಶೇಷವಾಗಿದೆ.

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಾಗೂ ಎರಡನೇ ಗಜಪಡೆಯ ಹದಿನಾಲ್ಕು ಆನೆಗಳ ತಂಡ ಮೈಸೂರಿನ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಇಂದು ಹದಿನಾಲ್ಕು ಆನೆಗಳ ತೂಕ ಪರೀಕ್ಷೆಯನ್ನ ಮಾಡಲಾಯಿತು. ಈ 14 ಆನೆಗಳಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಆನೆ 5680 ಕೆಜಿ ತೂಕ ಹೊಂದಿ ಅತ್ಯಂತ ಬಲಶಾಲಿ ಹಾಗೂ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.

14 elephants weight test
14 elephants weight test

ಹದಿನಾಲ್ಕು ಗಜಪಡೆಗಳ ತೂಕ ಎಷ್ಟು.. ಗಜಪಯಣದ ಮೂಲಕ ಒಂಬತ್ತು ಆನೆಗಳು ಮೊದಲ ತಂಡದಲ್ಲಿ ಅರಮನೆಗೆ ಆಗಮಿಸಿದ್ದು, ಅವುಗಳ ತೂಕವನ್ನು ಸೆಪ್ಟೆಂಬರ್ 6 ರಂದು ಮಾಡಲಾಗಿದೆ. ಆದರೆ ಈಗ ಮತ್ತೆ ಮೊದಲ ತಂಡ ಹಾಗೂ ಎರಡನೇ ತಂಡದ ಒಟ್ಟು ಹದಿನಾಲ್ಕು ಗಜಪಡೆಯನ್ನು ಮತ್ತೆ ತೂಕ ಮಾಡಲಾಗಿದೆ. ಅದರಲ್ಲಿ ಮೊದಲ ಬಾರಿಗೆ ಜಂಬುಸವಾರಿಯ ಕ್ಯಾಪ್ಟನ್ ಅಭಿಮನ್ಯು ಆನೆಯ ತೂಕ ಹಾಕಲಾಗಿದ್ದು, ಆಗ ಅದರ ತೂಕ ಸೆಪ್ಟೆಂಬರ್ 6 ರಂದು 5160 ಕೆಜಿ ಇತ್ತು. ಕಳೆದ 21 ದಿನಗಳಲ್ಲಿ 140 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು, ಒಟ್ಟು 5300 ಕೆಜಿ ತೂಕ ಅಭಿಮನ್ಯು ಹೊಂದಿದ್ದಾನೆ. ಇದರ ಜೊತೆಗೆ ಇಂದು ತೂಕ ಹಾಕಿದ ಆನೆಗಳ ತೂಕದ ವಿವರ ಹೀಗಿದೆ
1)ಅಭಿಮನ್ಯು - 5300 ಕೆಜಿ

2)ಭೀಮ -4685 ಕೆಜಿ

3)ಮಹಿಂದ್ರಾ -4665ಕೆಜಿ

4)ಧನಂಜಯ -4990 ಕೆಜಿ

5)ಗೋಪಿ - 5145 ಕೆಜಿ

6) ಕಂಜನ್ - 4395ಕೆಜಿ

7) ಅರ್ಜುನ - 5680ಕೆಜಿ

8)ಸುಗ್ರೀವ - 5035ಕೆಜಿ

9) ಪ್ರಶಾಂತ - 4970ಕೆಜಿ

10 )ರೋಹಿತ್ - 3350ಕೆಜಿ

ಹೆಣ್ಣಾನೆಗಳ ತೂಕ..
1) ವಿಜಯ -2885ಕೆಜಿ

2)ವರಲಕ್ಷ್ಮಿ - 3170ಕೆಜಿ

3) ಹಿರಣ್ಯ - 2915ಕೆಜಿ

4) ಲಕ್ಷ್ಮಿ -3235ಕೆಜಿ

ಹೀಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಾಗೂ ಎರಡನೇ ತಂಡದಲ್ಲಿ ಆಗಮಿಸಿದ ಹತ್ತು ಗಂಡನೇ ಹಾಗೂ ನಾಲ್ಕು ಹೆಣ್ಣಾನೆಗಳ ತೂಕ ಮಾಡಿಸಿದ್ದು, ನಾಳೆಯಿಂದ ಹದಿನಾಲ್ಕು ಆನೆಗಳ ತಾಲೀಮು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬುಸವಾರಿ ಸಾಗುವ ರಾಜಪಥದಲ್ಲಿ ಸಾಗಲಿದೆ ಎಂದು ಡಿ.ಸಿ.ಎಫ್ ಸೌರವ್ ಕುಮಾರ್ ಅವರು ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 15ರಂದು ದಸರಾ ಮಹೋತ್ಸವಕ್ಕೆ ಚಾಲನೆ.. ಅಕ್ಟೋಬರ್ 15ರಂದು ಭಾನುವಾರ ಬೆಳಗ್ಗೆ 10:15ರಿಂದ 10:36ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡುವರು. ಅನಂತರ 9 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರು ದಸರಾ ಉದ್ಘಾಟನೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅಕ್ಟೋಬರ್ 23ರಂದು ಆಯುಧ ಪೂಜೆಯ ಕೆಲಸಗಳು ನಡೆಯಲಿದ್ದು, ಅಕ್ಟೋಬರ್ 24ರ ಮಂಗಳವಾರ ವಿಜಯದಶಮಿ ದಿನ ಮಧ್ಯಾಹ್ನ 1:46ರಿಂದ 02:08 ನಿಮಿಷಗಳವರೆಗಿನ ಮಕರ ಲಗ್ನದಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಪೂಜೆ ನಡೆಯಲಿದೆ. ಬಳಿಕ ದಸರಾ ಮೆರವಣಿಗೆ ಆರಂಭವಾಗಲಿದೆ. ಸಂಜೆ 4:40ರಿಂದ 5ಗಂಟೆಯ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಜಂಬೂಸವಾರಿ ಸಮಯ ಸಂಜೆ ಬಂದಿರುವುದು ವಿಶೇಷವಾಗಿದೆ. ಅಕ್ಟೋಬರ್ 26ರಂದು ಗುರುವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ರಥೋತ್ಸವ ಜರುಗಲಿದೆ.

ಇದನ್ನೂಓದಿ:ಬರಗಾಲದ ಎಫೆಕ್ಟ್​: ಸರಳ, ಅದ್ಧೂರಿ ಎನ್ನುವ ಬದಲು ಸಾಂಪ್ರದಾಯಿಕ ದಸರಾ ಹೇಳಿಕೆಗೆ ಹೋಟೆಲ್ ಮಾಲೀಕರ ಸಂಘ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.