ETV Bharat / state

ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಅಂತ ಜನ ತೀರ್ಮಾನಿಸುತ್ತಾರೆ: ಸಂಸದ ಪ್ರತಾಪ್ ಸಿಂಹ

author img

By ETV Bharat Karnataka Team

Published : Dec 24, 2023, 12:51 PM IST

Updated : Dec 24, 2023, 1:07 PM IST

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ

ಸಂಸತ್‌ ಭದ್ರತಾ ಲೋಪ ಪ್ರಕರಣ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಪ್ರತಾಪ್​ ಸಿಂಹ ಮಾತನಾಡಿದರು.

ಸಂಸದ ಪ್ರತಾಪ್ ಸಿಂಹ ಹೇಳಿಕೆ

ಮೈಸೂರು : ನಾನು ದೇಶಪ್ರೇಮಿಯೋ, ದೇಶದ್ರೋಹಿಯೋ ಎಂಬುದನ್ನು ಮುಂಬರುವ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಸಂಸತ್‌ ಭದ್ರತಾ ಲೋಪ ಪ್ರಕರಣ ಮತ್ತು ಮನೋರಂಜನ್‌ಗೆ ಪಾಸ್ ನೀಡಿದ ವಿಚಾರವಾಗಿ ಪ್ರತಾಪ್​ ಸಿಂಹ ಮಾತನಾಡಿದರು.

ನಾನು ದೇಶದ್ರೋಹಿನಾ? ದೇಶಪ್ರೇಮಿನಾ? ಎಂಬುದನ್ನು ಬೆಟ್ಟದಲ್ಲಿ ಕುಳಿತಿರುವ ತಾಯಿ ಚಾಮುಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕುಳಿತಿರುವ ಕಾವೇರಿ ತಾಯಿ ತೀರ್ಮಾನಿಸುತ್ತಾರೆ. ಅಲ್ಲದೆ, ಕಳೆದ 20 ವರ್ಷಗಳಿಂದ ನನ್ನ ಬರವಣಿಗಳನ್ನು ಓದುಕೊಂಡು ಬಂದಿರುವ ಕರ್ನಾಟಕದಲ್ಲಿರುವ ಓದುಗ ಅಭಿಮಾನಿಗಳು, ಅಲ್ಲದೆ 9 ವರ್ಷಗಳಿಂದ ದೇಶ, ಧರ್ಮ, ರಾಷ್ಟ್ರೀಯತೆ ವಿಚಾರಗಳು ಬಂದಾಗ ನಾನು ನಡೆದುಕೊಂಡಿರುವ ರೀತಿಯನ್ನು ಮತ್ತು ನನ್ನ ಕೆಲಸವನ್ನು ನೋಡಿರುವ ಕೊಡಗು- ಮೈಸೂರು ಜನ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ಅವರ ತೀರ್ಪು ಅನ್ನು ನೀಡುತ್ತಾರೆ. ಈ ವಿಚಾರದಲ್ಲಿ ನಾನು ಇದಷ್ಟೆ ಹೇಳುತ್ತೇನೆ. ಈ ಬಗ್ಗೆ ಇನ್ನೇನೂ ಕೇಳಬೇಡಿ, ನಾನು ಯಾವ ವಿವರಣೆ ಕೊಡುವುದಿಲ್ಲ ಎಂದು ಪ್ರತಾಪ್​ ಸಿಂಹ ತಿಳಿಸಿದರು.

ಬೆಂಗಳೂರು-ಮೈಸೂರು ಹೈವೇ ವಿಚಾರ : ಬೆಂಗಳೂರು- ಮೈಸೂರು ಹೈವೇಯನ್ನು 2018ರಲ್ಲಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮರುದಿನವೇ ಆರು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಭೂಮಿ ಪೂಜೆ ನೆರವೇರಿಸಿದ್ದರು. ರಾಮನಗರದ ಬಳಿ‌‌ ನೀರು ತುಂಬಿಕೊಂಡಾಗ ಪ್ರತಾಪಸಿಂಹನನ್ನು ಬೈದಿದ್ದರು. ಅದನ್ನು ಮತ್ತೆ ಸರಿಪಡಿಸಿರುವುದು ಪ್ರತಾಪ ಸಿಂಹ. ಮಂಡ್ಯದ ಬಳಿ ರಸ್ತೆ ಬಿರುಕು ಬಿಟ್ಟಾಗ ಬೈದಿದ್ದು ಪ್ರತಾಪ ಸಿಂಹನಿಗೆ. ಅದನ್ನು ಸರಿಪಡಿಸಿದ್ದು ಸಹ ಪ್ರತಾಪ ಸಿಂಹ. ನಿಡಗಟ್ಟದ ಬಳಿ ರಸ್ತೆ ನಿರ್ಮಾಣದ ಜವಾಬ್ದಾರಿ‌ ಹೊತ್ತಿದ್ದು ಕೂಡ ಪ್ರತಾಪ ಸಿಂಹ. ಕಾಳೇನಹಳ್ಳಿ ಕ್ವಾರಿ‌ ಕೊಡಿಸಿದ್ದು ಯಾರು? ಎಂದು ಅವರು ಪ್ರಶ್ನಿಸಿದರು.

ಈ ಎಲ್ಲ ಸಂದರ್ಭದಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಎಲ್ಲಿ ಹೋಗಿದ್ರು? ಹೈವೇಗೆ ಖರ್ಚಾಗಿದ್ದು ಎಂಟೂವರೆ ಸಾವಿರ ಕೋಟಿ ರೂಪಾಯಿ. 800 ರೂ. ಕೊಟ್ಟಿದ್ದರೆ ಸಿದ್ದರಾಮಯ್ಯ, ಮಹದೇವಪ್ಪ ಕೊಟ್ಟಿದ್ರೆ ಹೇಳಲಿ? ಆಗ ಸಿದ್ದರಾಮಯ್ಯ ಮಹದೇವಪ್ಪ ಜೋಡಿ ರಸ್ತೆ ಅಂತ ಮಾಡುತ್ತೇವೆ. ಇದು ನನ್ನ ರಸ್ತೆಯಲ್ಲ. ನರೇಂದ್ರ ಮೋದಿ ಅವರ ರಸ್ತೆ, ಅದನ್ನು ಮಂಡ್ಯ, ಚನ್ನಪಟ್ಟಣ, ರಾಮನಗರ, ಮದ್ದೂರು, ಬೆಂಗಳೂರಿನ ಜನ ಗುರುತಿಸುತ್ತಿದ್ದಾರೆ. ನಾನೊಬ್ಬ ಮೇಸ್ತ್ರಿ, ಕೆಲಸಗಾರ ಅಷ್ಟೆ. ಮೋದಿ ಅವರು ಕೊಟ್ಟಿದ್ದ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದೇವೆ. ಓಡಾಡುವ ಜನಕ್ಕೆ ಆ‌ ರಸ್ತೆ ಯಾವುದು ಅಂತ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಸಾರ್ವಜನಿಕ‌ ಸಭೆಯಲ್ಲಿ ಹೇಗೆ ಮಾತನಾಡಬೇಕು ಅಂತ ತಿಳಿದುಕೊಳ್ಳಿ. ತಾತ್ಸಾರದಿಂದ ಮಾತನಾಡುವುದು ನೀವು ಅಲಂಕರಿಸಿರುವ ಸ್ಥಾನಕ್ಕೆ ಶೋಭೆ ತರಲ್ಲ. ನಾನು ಸಾಯುವ ತನಕ ಪಾಲಿಟಿಕ್ಸ್ ಮಾಡಲು ಬಂದಿಲ್ಲ. ಒಂದು ಟೈಮ್‌ಲೈನ್ ಇಟ್ಟುಕೊಂಡು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.

ಹಿಜಾಬ್ ವಿಚಾರ : ಸಮವಸ್ತ್ರ ಸಂಹಿತೆ ತಂದಿದ್ದ ಉದ್ದೇಶ ಸಮಾನ ಮನಸ್ಥಿತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನಡೆಯಬೇಕು ಎಂದಾಗಿದೆ. ನಾವೆಲ್ಲ ಒಂದೇ ಎಂಬ ಭಾವ ಮೂಡಬೇಕು ಎಂಬುದು ಅದರ ಉದ್ದೇಶ. ಆದರೆ, ಅದನ್ನು ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ವಸ್ತ್ರ ಸಂಹಿತೆಯು ಎಲ್ಲರಲ್ಲೂ ಒಂದೇ ಎಂಬ ಭಾವ ಮೂಡಿಸುತ್ತದೆ ಎಂದು ಪ್ರತಾಪ್​ ಸಿಂಹ ಅಭಿಪ್ರಾಯ ವ್ಯಕ್ತಪಡಿದರು.

ಮಹಾರಾಜರು ತಮ್ಮ ಮನೆಯ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಆ ಹೇಳಿಕೆ ಬಂದಾಗಲೇ ನಮಗೆ ಗೊತ್ತಾಯಿತು ಸಿದ್ದರಾಮಯ್ಯ ಅವರ ಪ್ರೀತಿ, ಅಭಿಮಾನ ಗೌರವ ಟಿಪ್ಪುಗೆ ಹೊರತು ಮೈಸೂರು ಮಹಾರಾಜರಿಗೆ ಅಲ್ಲ ಅಂತ. ಸಿದ್ದರಾಮಯ್ಯ ಅವರು ಬಂದಾಗ ಈ ರೀತಿ ಆಗುತ್ತದೆ ಅಂತಾನೇ ಮೈಸೂರು ಮಹಾರಾಜರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲು ನಮ್ಮ ಸರ್ಕಾರ ತೀರ್ಮಾನಿಸಿ, ಈ ಬಗ್ಗೆ ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದೆವು. 2014ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿತ್ತು. ಈ ವೇಳೆ‌ ಅಲ್ಪ ಸಂಖ್ಯಾತರಿಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಯೂನಿವರ್ಸಿಟಿ‌ ನಿರ್ಮಾಣ ಮಾಡಲು ಮುಂದಾಗಿದ್ದರು ಎಂದು ಆರೋಪಿಸಿದರು.

ಖಾಸಗಿ ಜೆಟ್​ನಲ್ಲಿ ಪ್ರಯಾಣ ವಿಚಾರ: ತಮ್ಮ ನಡೆ ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿ ಏರ್​​ಫೋರ್ಸ್​ ಓನ್​ನಲ್ಲಿ, ಅದೂ ಸರ್ಕಾರದ ವಿಮಾನದಲ್ಲೆ ಓಡಾಡುತ್ತಾರೆ. ಖಾಸಗಿ ಜೆಟ್​ನಲ್ಲಿ ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ. ದೇಶಕ್ಕೆ ಇರೋದು ಒಬ್ಬರೆ ಪ್ರಧಾನಿ. ದೇಶದಲ್ಲಿ 29 ಜನ ಸಿಎಂ ಇದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದು ಮೊದಲು ಬಿಡಿ ಎಂದು ಸಿಂಹ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ : ಬಿಎಸ್ ಯಡಿಯೂರಪ್ಪ

Last Updated :Dec 24, 2023, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.