ಮೋದಿ ಕರ್ನಾಟಕಕ್ಕೆ ಎಷ್ಟು ಬಾರಿ ಬಂದರೂ ಏನೂ ಪ್ರಯೋಜನವಿಲ್ಲ : ಡಿ.ಕೆ ಶಿವಕುಮಾರ್ ವ್ಯಂಗ್ಯ

author img

By

Published : Jan 26, 2023, 5:41 PM IST

modis-karnataka-tour-is-no-use-says-kpcc-president-dk-shivkumar

74ನೇ ಗಣರಾಜ್ಯೋತ್ಸವ - ಮೈಸೂರು ಕಾಂಗ್ರೆಸ್​ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ - ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

ಮೈಸೂರು: ರಾಜ್ಯಕ್ಕೆ ಜನರ ಕಷ್ಟ ಕೇಳಲು ಮೋದಿ ಯಾವತ್ತೂ ಬರಲಿಲ್ಲ. ಆದರೆ, ಈಗ ಪದೇ ಪದೆ ರಾಜ್ಯಕ್ಕೆ ಬರುತ್ತಿದ್ದಾರೆ. ಮೋದಿ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ಏನು ಪ್ರಯೋಜನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ಹೇಳಿದ್ದಾರೆ. ನಗರದ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ದಿನ. ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ದಿನ ಇಂದು. ಇಂತಹ ದಿನದಂದು ನಾವು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯಿಂದ ಬಾಳಬೇಕಾಗಿದ್ದು ಅವಶ್ಯಕವಾಗಿದೆ ಎಂದು ಹೇಳಿದರು.

ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಿದ್ಧಾಂತ ಹಾಗೂ ಸಂವಿಧಾನದಿಂದ ಪ್ರೇರಣೆ ಪಡೆದಿವೆ. ಹೀಗಾಗಿ ನಮ್ಮ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನವಾಗಿದ್ದು, ಇತ್ತೀಚೆಗೆ ಅದರ ವಿರುದ್ಧ ಸಂಚು ನಡೆಸುತ್ತಿರುವ ಕೋಮು ಶಕ್ತಿಗಳನ್ನು ದೂರ ಇಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಫೆಬ್ರವರಿ 3 ರಿಂದ ಮತ್ತೊಂದು ಸುತ್ತಿನ ಪ್ರವಾಸ:ಪ್ರಜಾಧ್ವನಿ ಕಾರ್ಯಕ್ರಮ ಮುಗಿದ ನಂತರ, ಮುಂದಿನ ತಿಂಗಳ ಫೆಬ್ರವರಿ 3 ರಿಂದ ಕಾಂಗ್ರೆಸ್ ನಾಯಕರ ಮತ್ತೊಂದು ಸುತ್ತಿನ ಪ್ರವಾಸ ನಡೆಯಲಿದೆ. ಇದರಲ್ಲಿ ನಾನು ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ ಮಾಡಲಿದ್ದೇವೆ. ಉತ್ತರ ಕರ್ನಾಟಕ ಭಾಗದಿಂದ ಸಿದ್ದರಾಮಯ್ಯ ಪ್ರವಾಸ ಮಾಡಲಿದ್ದು, ದಕ್ಷಿಣ ಕರ್ನಾಟಕ ಭಾಗದಿಂದ ನಾನು ಪ್ರವಾಸ ಮಾಡುತ್ತೇನೆ. ಇದು ಮುಗಿದ ಬಳಿಕ ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋಗುತ್ತೇನೆ. ಸಿದ್ದರಾಮಯ್ಯ ದಕ್ಷಿಣ ಕರ್ನಾಟಕದ ಭಾಗಕ್ಕೆ ಬರುತ್ತಾರೆ ಎಂದು ಹೇಳಿದರು.

ಮೋದಿ ಎಷ್ಟು ಬಾರಿ ಬಂದರೂ ಪ್ರಯೋಜನ ಇಲ್ಲ: ರಾಜ್ಯ ಬಿಜೆಪಿ ನಾಯಕರು ಚುನಾವಣೆ ಹತ್ತಿರ ಬರುತ್ತಿದ್ದಂತೆ, ಪದೇ ಪದೆ ರಾಜ್ಯಕ್ಕೆ ಮೋದಿ ಅವರನ್ನು ಕರೆಸುತ್ತಿದ್ದಾರೆ. ಮೋದಿಯವರು ಜನರ ಕಷ್ಟ ಕೇಳಲು ಯಾವತ್ತೂ ಕರ್ನಾಟಕಕ್ಕೆ ಬರಲಿಲ್ಲ. ಆದರೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪದೇ ಪದೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಎಷ್ಟೇ ಬಾರಿ ಬಂದರೂ ಏನು ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದರು.

ಕೊಟ್ಟ ಭರವಸೆ ಈಡೇರಿಸುತ್ತೇವೆ: ನಾವು ಎಲ್ಲ ಲೆಕ್ಕಾಚಾರ ಮಾಡಿಯೇ ಜನರಿಗೆ ಭರವಸೆ ಕೊಟ್ಟಿದ್ದೇವೆ. ನಾವು ಲಂಚ ಕೊಟ್ಟು ಮತ ಕೇಳುತ್ತಿಲ್ಲ. ಬದ್ಧತೆಯ ಭರವಸೆ ನೀಡಿ ಮತ ಕೇಳುತ್ತಿದ್ದೇವೆ. ನಾನು ಇಂಧನ ಸಚಿವನಾಗಿದ್ದೆ. ಜನರಿಗೆ ಹೇಗೆ ಉಚಿತ ವಿದ್ಯುತ್ ಕೊಡಬೇಕು ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿದ್ದರು. ಅವರಿಗೆ ಹೇಗೆ ಹಣಕಾಸು ವ್ಯವಸ್ಥೆ ಮಾಡಬೇಕು ಎಂಬುದು ಗೊತ್ತಿದೆ. ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ನಿಲ್ಲಿಸಿದರೆ, ಅದೇ ಹಣದಲ್ಲಿ ಜನರ ಕಲ್ಯಾಣ ಮಾಡಬಹುದು. ಇಡೀ ದೇಶದಲ್ಲಿ ಈ ಭ್ರಷ್ಟ ಸರ್ಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದರು.

ಇದನ್ನೂ ಓದಿ : ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿರುಚುವ ಕೆಲಸ ಆಗುತ್ತಿದೆ: ರಾಮಲಿಂಗಾರೆಡ್ಡಿ ಬೇಸರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.