ETV Bharat / state

'ಸರ್ವಪಕ್ಷಗಳ ಸಭೆ ನಾಟಕ': ರೈತ ಮುಖಂಡ ಕುರುಬೂರು ಶಾಂತಕುಮಾರ್

author img

By ETV Bharat Karnataka Team

Published : Aug 23, 2023, 5:19 PM IST

Updated : Aug 23, 2023, 7:57 PM IST

ರಾಜ್ಯ ಸರ್ಕಾರವು ರೈತರನ್ನು ಹೊರಗಿಟ್ಟು ಸರ್ವಪಕ್ಷಗಳ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸುದ್ದಾರೆ.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ರೈತ ಮುಖಂಡರ ಪ್ರತಿಭಟನೆ

ಮೈಸೂರು: ನಮ್ಮ ಜಲಾಶಯಗಳ ನೀರು ಖಾಲಿ ಮಾಡಿ ಸರ್ವಪಕ್ಷಗಳ ಸಭೆ ಕರೆದು, ಈ ಸಭೆಗೆ ರೈತ ಮುಖಂಡರನ್ನು ಕರೆಯದೇ ಸರ್ಕಾರ ನಾಟಕ ಮಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.

ಇಂದು ಕಾಡಾ ಕಚೇರಿಯ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಬಳಿಕ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, "ನಮ್ಮ ರಾಜ್ಯ ಸರ್ಕಾರ ಜಲಾಶಯಗಳ ನೀರನ್ನು ಖಾಲಿ ಮಾಡಿ, ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ರೈತರ ನಿಜವಾದ ಸಮಸ್ಯೆಗಳನ್ನು ಕೇಳಬೇಕಾದ ಸರ್ಕಾರ, ಸಭೆಗೆ ರೈತ ಮುಖಂಡರನ್ನೇ ಕರೆಯದೇ ಸರ್ವಪಕ್ಷಗಳ ಸಭೆಯೆಂದು ನಾಟಕ ಮಾಡುತ್ತಿದೆ. ನೀರೆಲ್ಲ ಖಾಲಿಯಾದ ಮೇಲೆ, ಸಭೆ ಕರೆಯುವ ಅವಶ್ಯಕತೆ ಏನಿದೆ. ರೈತರನ್ನು ಸಭೆಗೆ ಕರೆದರೆ, ಅವರ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಅದಕ್ಕಾಗಿ ಸಭೆಗೆ ಕರೆಯುತ್ತಿಲ್ಲ. ಇವರ ನಾಟಕ ಜಗತ್ತಿಗೆ ಗೊತ್ತು. ರೈತರನ್ನು ಹೊರಗಿಟ್ಟು ಸರ್ವಪಕ್ಷಗಳ ಸಭೆಯನ್ನು ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ಚಳುವಳಿ ತೀವ್ರಗೊಳಿಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.

'ಡಿ.ಕೆ.ಶಿವಕುಮಾರ್ ಅವರಿ​ಗೆ ತಮಿಳುನಾಡg ಸಿಎಂ ಜೊತೆ ಅವಿನಾಭಾವ ಸಂಬಂಧ': "ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅವಿನಾಭಾವ ಸಂಬಂಧವಿದೆ. ಇತ್ತೀಚೆಗೆ ಮಾಧ್ಯಮಗಳಲ್ಲೇ ನೋಡಿದ್ದೆವು. ಬೆಂಗಳೂರು ಏರ್​ಪೋರ್ಟ್​ಗೆ ತಮಿಳುನಾಡಿನ ಸಿಎಂ ಬಂದಾಗ, ಡಿಸಿಎಂ ಏರ್​ಪೋರ್ಟ್​ಗೆ ಹೋಗಿ ಸ್ವಾಗತ ಮಾಡಿದ್ದರು. ಇವರ ಸಂಬಂಧಗಳನ್ನು ಉಳಿಸಿಕೊಳ್ಳಲು, ರಾಜ್ಯದ ರೈತರ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಮೊದಲು ರಾಜ್ಯದ ರೈತರ ಹಿತರಕ್ಷಣೆಗೊಸ್ಕರ ಕೆಲಸ ಮಾಡಲಿ" ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದರು.

"ಮೈಸೂರು ಭಾಗದವರೇ ಮುಖ್ಯಮಂತ್ರಿಗಳಾಗಿದ್ದು, ಇಷ್ಟೆಲ್ಲಾ ಅನಾಹುತ ನಡೆಯುತ್ತಿದ್ದರೂ ಸುಮ್ಮನಿದ್ದಾರೆ. ಕಣ್ಣಿದ್ದೂ ಸಹ ಕುರುಡರಾಗಿದ್ದು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನ್ಯಾಯಾಲಯದಲ್ಲಿ ಸಮ್ಮತವಾಗಿ ವಾದ ಮಾಡುವುದು ಸರ್ಕಾರದ ಕೆಲಸ. ಸಮರ್ಥ ವಕೀಲರನ್ನು ನೇಮಕ ಮಾಡಿ ವಾದ ಮಂಡಿಸಬೇಕು" ಎಂದು ಅವರು ಆಗ್ರಹಿಸಿದರು.

ಜಲಾಶಯಗಳು ಖಾಲಿಯಾಗುತ್ತಿವೆ: "ಕಬಿನಿ ಜಲಾಶಯದಲ್ಲಿ 48 ಅಡಿ ಇದ್ದ ನೀರು ಈಗ 75 ಅಡಿಗೆ ಬಂದಿದೆ. 113 ಅಡಿ ಇದ್ದ ಕೆಆರ್​ಎಸ್ ಜಲಾಶಯದ ನೀರು ಈಗ 105 ಅಡಿ ತಲುಪಿದೆ. 35 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಸಹಾಯ ಮಾಡಲು ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ" ಎಂದು ಆರೋಪಿಸಿದರು.

ಇದನ್ನೂ ಓದಿ: ತಮಿಳುನಾಡಿನ ರೀತಿ ಸಮರ್ಥ ವಾದ ಮಂಡಿಸಲು ಸರ್ಕಾರಕ್ಕೆ ಸಲಹೆ: ಬೊಮ್ಮಾಯಿ

Last Updated : Aug 23, 2023, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.