ETV Bharat / state

ಹುಣಸೂರಿನಲ್ಲಿ ಮಹಿಳೆ ಬಲಿ ಪಡೆದಿದ್ದ ವಕ್ರದಂತ ಕೊನೆಗೂ ಸೆರೆ

author img

By

Published : Dec 31, 2022, 6:19 AM IST

elephant captured
ಕಾಡಾನೆ ಸೆರೆ

ಹುರುಳಿ ಒಕ್ಕಲು ಮಾಡುವ ವೇಳೆ ಮಹಿಳೆ ಬಲಿ ಪಡೆದಿದ್ದ ಕಾಡಾನೆ ಸೆರೆ - ಸೆರೆ ಹಿಡಿದು ದುಬಾರೆ ಆನೆ ಕ್ಯಾಂಪಿನ ಕ್ರಾಲ್‌ನಲ್ಲಿ ಕಾಡಾನೆ ಬಂಧಿ- ಅರಣ್ಯ ಇಲಾಖೆ ಕಾಡಾನೆ ಹಿಡಿಯುವಲ್ಲಿ ಯಶಸ್ವಿ

ಮೈಸೂರು: ಹುಣಸೂರಿನ ಚಿಕ್ಕ ಬೀಚನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದು, ಇಬ್ಬರನ್ನು ಗಾಯಗೊಳಿಸಿದ ವಕ್ರದಂತ ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಹೆಚ್ಚಿನ ಅಪಾಯ ತಪ್ಪಿಸಿದೆ. ಈ ಪುಂಡಾನೆಯನ್ನು ಅರಣ್ಯ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ದುಬಾರೆ ಆನೆ ಕ್ಯಾಂಪಿನ ಕ್ರಾಲ್‌ನಲ್ಲಿ ಬಂಧಿಯಾಗಿಸಿ, ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ.

ಬಿಳಿಕೆರೆ ಬಳಿಯ ಅರಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಎರಡು ಸಲಗಗಳ ಸೆರೆ ಹಿಡಿಯಲು ಅಭಿಮನ್ಯು, ಭೀಮಾ, ಮಹೇಂದ್ರ, ಗಣೇಶ ಮತ್ತು ಪ್ರಶಾಂತ ಸಾಕಾನೆಗಳೊಂದಿಗೆ ಮುಂಜಾನೆಯೇ ಆಗಮಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಹಾಗೂ ಎಲಿಫೆಂಟ್ ಟಾಸ್ಕ್ಪೋರ್ಸ್ನ ಮುಖ್ಯಸ್ಥೆ ಸೀಮಾ ನೇತೃತ್ವದ ತಂಡ. ತಕ್ಷಣವೇ ಸಾಕಾನೆಗಳೊಂದಿಗೆ ಸ್ಥಳಕ್ಕಾಗಮಿಸಿ ಪುಂಡಾನೆಯನ್ನು ಸೆರೆ ಹಿಡಿಯಲು ಮುಂದಾದರು. ಈ ವೇಳೆ, ಅಕ್ಕ-ಪಕ್ಕದ ಗ್ರಾಮದ ಸಾವಿರಾರು ಮಂದಿ ಸ್ಥಳದಲ್ಲಿ ನೆರೆದು, ಸಲಗವನ್ನು ಅಟ್ಟಾಡಿಸುತ್ತಿದ್ದರು. ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಆನೆ ಸೆರೆ ಹಿಡಿಯಲು ಕಾರ್ಯಚರಣೆ ಆರಂಭಿಸಿದರು.

ಓಡಾಡಿಸಿದ ಪುಂಡಾನೆ : ಸಾಕಾನೆಗಳನ್ನು ಕಂಡ ಸಲಗ ಚಿಕ್ಕಬೀಚನಹಳ್ಳಿ, ದೊಡ್ಡಬೀಚನಹಳ್ಳಿ, ಹಳ್ಳದಮನುಗನಹಳ್ಳಿಯ ಜಮೀನುಗಳಲ್ಲಿ ಅಡ್ಡಾಡುತ್ತಾ ಆಟವಾಡಿಸಿತು. ಇತ್ತ ಜನರಂತೂ ಕೇಕೆ ಹಾಕುತ್ತಾ, ಮುನ್ನುಗ್ಗುತ್ತಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯಾಗುತ್ತಿತ್ತು. ಅರಣ್ಯ ಸಿಬ್ಬಂದಿ ಅತ್ತಿಂದಿತ್ತ ಜನರ ನಡುವೆಯೇ ಓಡಾಡುತ್ತಲೇ ಅರವಳಿಕೆ ಚುಚ್ಚುಮದ್ದು ನೀಡುವ ಪ್ರಥಮ ಪ್ರಯತ್ನ ವಿಫಲವಾಯಿತಾದರೂ ಮಧ್ಯಾಹ್ನ ೨.೩೦ರ ವೇಳೆಗೆ ಎಚ್.ಡಿ.ಕೋಟೆ ತಾಲೂಕಿನ ಹಳ್ಳದ ಮನುಗನಹಳ್ಳಿಯ ವಾಸುರವರ ತೋಟದಲ್ಲಿ ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು.

ಎಸ್​​ಪಿ ನೇತೃತ್ವ : ಸ್ಥಳಕ್ಕಾಗಮಿಸಿದ ಎಸ್ಪಿ ಸೀಮಾ ಲಟ್ಕರ್, ಎ.ಎಸ್.ಪಿ ಬಿ.ಎನ್.ನಂದಿನಿ, ಡಿವೈಎಸ್‌ಪಿ ಮಹೇಶ್ ಹಾಗೂ ಪೊಲೀಸ್ ಸಿಬ್ಬಂದಿ ರಸ್ತೆಯನ್ನು ಬಂದ್ ಮಾಡಿಸಿ ಜನರನ್ನು ನಿಯಂತ್ರಿಸಿದ್ದರಿಂದ ಸೆರೆಯ ಕಾರ್ಯಾಚರಣೆ ನಡೆಸಲು ಸಹಕಾರಿಯಾಯಿತು. ಪ್ರಜ್ಞೆ ತಪ್ಪಿದ ಸಲಗನನ್ನು ಆರೈಕೆ ಮಾಡಿ, ಹಗ್ಗದಿಂದ ಬಿಗಿದು ಸಾಕಾನೆಗಳ ಸಹಾಯದಿಂದ ಸುಮಾರು 300 ಮೀಟರ್‌ನಷ್ಟು ಪುಂಡಾನೆಯ ಹೆಡೆಮುರಿ ಕಟ್ಟಿ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು. ಈ ವೇಳೆ, ನೆರೆದಿದ್ದ ಸಾರ್ವಜನಿಕರು ಆನೆ ಸೆರೆ ಕಾರ್ಯಾ ಚರಣೆಯನ್ನು ಕಣ್ತುಂಬಿಕೊಂಡು ಆನೆ ಸೆರೆಯಾಯಿತ್ತಲ್ಲ ಎಂದು ನಿಟ್ಟುಸಿರುಬಿಟ್ಟರು.

ಪರಿಹಾರ ವಿತರಣೆ : ಆನೆ ಕಾರ್ಯಾಚರಣೆ ನಂತರ ಬಿಳಿಕೆರೆ ಆಸ್ಪತ್ರೆಯಲ್ಲಿ ಮೃತ ಚಿಕ್ಕಮ್ಮರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಗ್ರಾಮಕ್ಕೆ ತಂದು ಗ್ರಾಮಸ್ಥರ ಅಂತಿಮ ನಮನದ ನಂತರ ಶವಸಂಸ್ಕಾರ ನಡೆಸಲಾಯಿತು. ಈ ವೇಳೆ, ಕುಟುಂಬದವರು ಹಾಗೂ ಗ್ರಾಮಸ್ಥರ ರೋಧನ ಮುಗಿಲು ಮುಟ್ಟಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ, ಮೈಸೂರು ವೃತ್ತ ಸಿಎಫ್ ಮಾಲತಿಪ್ರಿಯಾ, ಡಿಸಿಎಫ್ ಸೀಮಾ ಅವರು ಸರಕಾರದ ಪರವಾಗಿ ಪ್ರಥಮ ಹಂತದಲ್ಲಿ ೨.೫೦ ಲಕ್ಷ ರೂ ಪರಿಹಾರದ ಚೆಕ್ ವಿತರಿಸಿ, ಉಳಿದ ೧೨.೫ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದರು.

ವಕ್ರದಂತ ಪುಂಡಾನೆ : ವಕ್ರದಂತ ಹೊಂದಿರುವ ಈ ಪುಂಡಾನೆಯು ಎಚ್.ಡಿ.ಕೋಟೆ ತಾಲೂಕಿನಲ್ಲಿ ಹಲವಾರು ಬೋರ್‌ವೆಲ್‌ಗಳನ್ನು ಮುರಿದುಹಾಕುವಲ್ಲಿ ಪೇಮಸ್ ಆಗಿದ್ದು, ನಾಗರಹೊಳೆ ಉದ್ಯಾನದಿಂದ ಈ ಭಾಗಕ್ಕೆ ದಾಳಿ ಇಟ್ಟಿರುವುದು ಆಶ್ಚರ್ಯಗೊಳಿಸಿದೆ.

ಘಟನೆ ಹಿನ್ನೆಲೆ: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಚಿಕ್ಕ ಬೀಚನನಹಳ್ಳಿ ಗ್ರಾಮದ ಚಿಕ್ಕಮ್ಮ (55 ವರ್ಷ) ಎಂಬ ಮಹಿಳೆ ಕಣದಲ್ಲಿ ಹುರುಳಿ ಒಕ್ಕಲು ಮಾಡುವ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಾಗೂ ಜೊತೆ ಇಬ್ಬರಿಗೆ ಗಾಯಗೊಳಿತ್ತು. ಮಾಹಿತಿ ತಿಳಿದು ಬಂದ ಅರಣ್ಯ ಇಲಾಖೆ ಕಾಡಾನೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ :ಮೈಸೂರು: ದಂಪತಿ ಮೇಲೆ ಏಕಾಏಕಿ ಕಾಡಾನೆ ದಾಳಿ.. ಸ್ಥಳದಲ್ಲೇ ಮಹಿಳೆ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.