ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಈ ಬಾರಿ ಮೆರವಣಿಗೆಯಲ್ಲಿ ಹೊರಡಲಿವೆ.
ಜಿಲ್ಲಾ ಪಂಚಾಯತ್ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಬ್ದಚಿತ್ರ ಉಪಸಮಿತಿಯ ಅಧ್ಯಕ್ಷ ಮುರುಳಿ, ಕಳೆದ ಬಾರಿಗಿಂತ ಈ ಬಾರಿ ವಿಶೇಷವಾದ ಸ್ತಬ್ಧಚಿತ್ರಗಳು ಮೂಡಿ ಬರಲಿವೆ. ಅಂಬಾರಿ ಮೆರವಣಿಗೆಗೆ ಯಾವುದೇ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ ಈ ಬಾರಿ 39 ಸ್ಥಬ್ಧಚಿತ್ರಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ-ಬರ, ಚಂದ್ರಯಾನ, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ಥಬ್ಧಚಿತ್ರಗಳು ನಗರದ ಎಪಿಎಂಸಿ ಆವರಣದಲ್ಲಿ ತಯಾರಾಗುತ್ತಿವೆ. ಕಲಾವಿದರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾವಾರು ಸ್ಥಬ್ಧಚಿತ್ರಗಳ ಮಾಹಿತಿ :
- ಬೆಳಗಾವಿ - ಪ್ರವಾಹದಿಂದ ನಲುಗಿದ ಬೆಳಗಾವಿ
- ಬಾಗಲಕೋಟೆ - ಅತಿವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು
- ಧಾರವಾಡ - ಸಾಂಸ್ಕೃತಿಕ ವೈಭವ
- ಹಾವೇರಿ - ಶಂಖನಾದ ಮೊಳಗಿಸುತ್ತಿರುವ ಕನಕದಾಸರು
- ಗದಗ - ಬೇಟಿ ಪಡಾವೋ, ಬೇಟಿ ಬಚಾವೋ
- ಉತ್ತರ ಕನ್ನಡ - ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ
- ವಿಜಯಪುರ - ವಚನ ಪಿತಾಮಹ ಫ.ಹು ಹಳಕಟ್ಟಿ
- ಬೆಂಗಳೂರು ನಗರ - ಚಂದ್ರಯಾನ-2
- ಬೆಂಗಳೂರು ಗ್ರಾಮಾಂತರ - ಸ್ವಚ್ಛತೆ ಕಡೆಗೆ ನಮ್ಮ ನಡಿಗೆ
- ಚಿತ್ರದುರ್ಗ - ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು
- ದಾವಣಗೆರೆ - ಏರ್ಸ್ಟ್ರೈಕ್
- ಕೋಲಾರ - ಅಂತರಗಂಗೆ
- ಶಿವಮೊಗ್ಗ - ಫಿಟ್ ಇಂಡಿಯಾ
- ತುಮಕೂರು - ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು
- ರಾಮನಗರ - ಮಳೂರು ಅಂಬೆಗಾಲು ಕೃಷ್ಣ
- ಚಿಕ್ಕಬಳ್ಳಾಪುರ - ರೇಷ್ಮೆ ಮತ್ತು ಹೆಚ್.ನರಸಿಂಹಯ್ಯ
- ಕಲಬುರಗಿ - ಆಯುಷ್ಮಾನ್ ಭಾರತ್
- ಬಳ್ಳಾರಿ - ಹಂಪಿ ವಾಸ್ತುಶಿಲ್ಪ ಕಲಾ ವೈಭವ
- ಬೀದರ್ - ಫಸಲ್ ಭೀಮಾ ಯೋಜನೆ
- ಕೊಪ್ಪಳ - ಗವಿಸಿದ್ದೇಶ್ವರ ಬೆಟ್ಟ
- ರಾಯಚೂರು - ಗೂಗಲ್ ಬ್ರಿಡ್ಜ್, ಪ್ರಧಾನಮಂತ್ರಿ ಸಿಂಚಾಯಿ ಹಾಗೂ ನರೆಗಾ ಯೋಜನೆ
- ಯಾದಗಿರಿ - ಅಂಬಿಗರ ಚೌಡಯ್ಯ
- ಮೈಸೂರು - ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ
- ಚಾಮರಾಜನಗರ - ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ
- ಚಿಕ್ಕಮಗಳೂರು - ಶಿಶಿಲಬೆಟ್ಟ
- ದಕ್ಷಿಣ ಕನ್ನಡ - ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ
- ಹಾಸನ - ಎತ್ತಿನಹೊಳೆ ಯೋಜನೆ
- ಕೊಡಗು - ಗುಡ್ಡ ಕುಸಿತ ಜಾಗೃತಿ ಮೂಡಿಸುವ ಕುರಿತು
- ಮಂಡ್ಯ - ಶ್ರೀಆದಿ ಚುಂಚನಗಿರಿ ಮಠ, ಉಡುಪಿ ಕೃಷ್ಣ ಮಠದ ಗೋಪುರ
- ದಸರಾ ಉಪಸಮಿತಿ - ಆನೆ ಬಂಡಿ, ಜೆಎಸ್ಎಸ್ ಮಠ, ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ
- ವಾರ್ತಾ ಇಲಾಖೆ - ಸರ್ಕಾರದ ಸೌಲಭ್ಯಗಳ ಮಾಹಿತಿ
- ಕಾವೇರಿ ನೀರಾವರಿ ನಿಗಮ - ನೀರಾವರಿ ನಿಗಮದ ಕುರಿತು ಮಾಹಿತಿ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ
- ಪ್ರವಾಸೋದ್ಯಮ ಇಲಾಖೆ - ನಿಮ್ಮ ಸಾಹಸಗಾಥೆ ನೀವೇ ರಚಿಸಿ
- ಮೈಸೂರು ವಿಶ್ವವಿದ್ಯಾನಿಲಯ - ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು