ETV Bharat / state

ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ದಸರಾ ಜಂಬೂಸವಾರಿ: ವಿಡಿಯೋ ನೋಡಿ

author img

By ETV Bharat Karnataka Team

Published : Oct 16, 2023, 8:19 PM IST

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ
ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ

ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊತ್ತ ಮಹೇಂದ್ರ ಆನೆಯ ಗಜಗಾಂಭೀರ್ಯದ ನಡಿಗೆ ನೆರೆದಿದ್ದವರ ಮನಸೂರೆಗೊಳಿಸಿತು.

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ

ಮಂಡ್ಯ: ಕರುನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾದ ಮೂಲನೆಲೆ ಶ್ರೀರಂಗಪಟ್ಟಣ ದಸರಾ ಇಂದು ಆರಂಭವಾಗಿದ್ದು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ. ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಚಾಲನೆ ನೀಡಿದರು.

ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿ ಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಂದಿಧ್ವಜ ಪೂಜೆ ನೇರವೇರಿತು. ಮಧ್ಯಾಹ್ನ 2.30 ರಿಂದ 3.15ರವರೆಗೂ ಸಲ್ಲುವ ಶುಭ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆಗೆ ಪ್ರಮೋದಾದೇವಿ ಒಡೆಯರ್ ಚಾಲನೆ ಕೊಟ್ಟರು. ಜಂಬೂಸವಾರಿಯಲ್ಲಿ ಅಂಬಾರಿ ಆನೆಯಾದ ಮಹೇಂದ್ರ ಹಾಗೂ ಅಕ್ಕಪಕ್ಕದಲ್ಲಿ ವಿಜಯ, ವಿಜಯಲಕ್ಷ್ಮೀ ಆನೆಗಳು ರಾಜಗಾಂಭೀರ್ಯದಿಂದ ಸಾಗಿದವು.

ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ, ದೊಣ್ಣೆವರಸೆ ಸೇರಿದಂತೆ ಸ್ತಬ್ದ ಚಿತ್ರಗಳಿದ್ದ ಅದ್ಧೂರಿ ಮೆರವಣಿಗೆ ರಂಗನಾಥ ದೇವಾಲಯದವರೆಗೂ ಸಾಗಿತು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಸೇರಿ ಅನೇಕರು ಭಾಗಿಯಾಗಿದ್ದರು.

ಬನ್ನಿಮಂಟಪದಿಂದ ಶ್ರೀರಂಗನಾಥ ದೇವಸ್ಥಾನದವರೆಗೂ ಜಂಜೂಸವಾರಿ ಸಾಗಿತು. ಬನ್ನಿಮಂಟಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹೇಂದ್ರ, ವಿಜಯ, ವರಲಕ್ಷ್ಮೀ ಆನೆಗಳು ವಿಶೇಷ ಚಿತ್ರಾಲಂಕಾರದಿಂದ ಕಂಗೊಳಿಸಿದವು. ಇನ್ನೊಂದೆಡೆ ಇಡೀ ಶ್ರೀರಂಗಪಟ್ಟಣ ಮಧುವಗಿತ್ತಿಯಂತೆ ಸಿಂಗಾರಗೊಂಡಿದೆ.

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, "ಈ ಬಾರಿ ಶ್ರೀರಂಗಪಟ್ಟಣ ದಸರಾಕ್ಕೆ ಚಾಲನೆ ನೀಡಬೇಕು ಎಂದು ಕೇಳಿಕೊಂಡರು. ಆದ್ದರಿಂದ ಇಲ್ಲಿಗೆ ಬಂದು ಜಂಬೂಸವಾರಿಗೆ ಚಾಲನೆ ನೀಡಿದ್ದೇನೆ. ತಾಯಿ ಚಾಮುಂಡೇಶ್ವರಿ ಬಳಿ, ಈ ಬಾರಿ ಉತ್ತಮ ಮಳೆ, ಬೆಳೆ ಆಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದೇನೆ" ಎಂದರು.

"ನನ್ನ ಹಲವು ವರ್ಷಗಳ ರಾಜಕೀಯ ಜೀವನದಲ್ಲಿ ಈ ದಿನ ತುಂಬ ಸಂತೋಷ ತಂದಿದೆ. ಜಂಬೂಸವಾರಿ ಯಶಸ್ವಿಯಾಗುವುದಕ್ಕೆ ಇಲ್ಲಿನ ಶಾಸಕರು, ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ ಕಳೆದ ಒಂದು ತಿಂಗಳಿಂದ ಶ್ರಮಿಸಿದ್ದಾರೆ. ಜನರಿಗೆ ಒಳ್ಳೆಯದಾಗಲಿ, ಮಳೆ ಬರಲಿ ಎಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳ ದಸರಾ ಮಾಡಲೇಬೇಕು ಎಂದು ಮಾಡಿದ್ದೇವೆ" ಎಂದು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದರು.

ಸಂಕ್ಷಿಪ್ತ ಇತಿಹಾಸ: ಶ್ರೀರಂಗಪಟ್ಟಣ ದಸರಾವನ್ನು 1610ರಲ್ಲಿ ಅಂದಿನ ವಿಜಯನಗರ ಸಾಮ್ರಾಜ್ಯದ ದೊರೆ ಪ್ರಾರಂಭಿಸಿದ್ದರು. 1799ರ ವರೆಗೂ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತದೆ. ನಂತರ ದಸರಾ ಮೈಸೂರಿಗೆ ಸ್ಥಳಾಂತರವಾಗುತ್ತದೆ. ಶ್ರೀರಂಗಪಟ್ಟಣ ದಸರಾ ಮೈಸೂರಿನ ದಸರಾಗಿಂತಲೂ ಹಳೆಯದು.

ಇದನ್ನೂ ಓದಿ: ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ಚಾಲನೆ: 16 ರಿಂದ 24 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.