ETV Bharat / state

Organ donation: ಮಂಡ್ಯ ಯುವಕನ ಮೆದುಳು ನಿಷ್ಕ್ರಿಯ; ಕುಟುಂಬಸ್ಥರಿಂದ ಅಂಗಾಂಗ ದಾನ

author img

By

Published : Jun 19, 2023, 6:41 PM IST

Updated : Jun 19, 2023, 8:16 PM IST

ಅಂಗಾಂಗ ದಾನ
ಅಂಗಾಂಗ ದಾನ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಅಂಗಾಂಗಗಳನ್ನು ಕಸಿ ಮಾಡಲಾಗಿದೆ.

ಮಂಡ್ಯ : ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ದೇಹದ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಚಿಕ್ಕಮಂಡ್ಯ ಗ್ರಾಮದ ಜಯಮ್ಮ ಹಾಗೂ ಶ್ರೀನಿವಾಸ ದಂಪತಿಯ ಪುತ್ರ ಗಿರೀಶ್ (32) ಜೂನ್ 15ರಂದು ಮಂಡ್ಯದಲ್ಲಿ ಕೆಲಸ ಮುಗಿಸಿ ​ಬೈಕ್‌ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದಾಗ ನಡೆದ ಅವಘಡದಲ್ಲಿ ಗಾಯಗೊಂಡಿದ್ದರು.

ಚಿಕ್ಕಮಂಡ್ಯ ರಸ್ತೆಯ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗದ ಹಳ್ಳಕ್ಕೆ ಆಯತಪ್ಪಿ ಬಿದ್ದು ಗಿರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಇದನ್ನೂ ಓದಿ : ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ್ದ ಪೋಷಕರು.. ಸಂತ್ರಸ್ತ ಕುಟುಂಬಕ್ಕೆ ನೆರವು ಒದಗಿಸಿದ ಶಾಸಕ ಖಾದರ್

ಮನೆಗೆ ಆಧಾರವಾಗಿದ್ದ ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ತಾಯಿ ಒಂದೆಡೆ ಗಂಡನಿಲ್ಲದೇ, ಇದೀಗ ಪುತ್ರನನ್ನೂ ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದಾರೆ. ಅಪಘಾತದ ಕುರಿತು ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರ್ಮಿಕ ಕಟ್ಟುಪಾಡು ಮೀರಿ ಅಂಗಾಂಗ ದಾನ ಪ್ರಕರಣ: ಜೂನ್ 4ರಂದು ಮದುವೆ ಸಮಾರಂಭ‌ ಮುಗಿಸಿ ವಾಪಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆ ಅಪಘಾತ ಜರುಗಿತ್ತು. 22 ವರ್ಷದ ಫಾರ್ದಿನ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 7ರಂದು ಬೆಳಗ್ಗೆ 11.55 ಕ್ಕೆ ಫಾರ್ದಿನ್ ಖಾನ್ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು.

ಮೆದುಳು ನಿಷ್ಕ್ರೀಯಗೊಂಡರೂ ಉಳಿದೆಲ್ಲ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ. ಆದರೆ ಎಲ್ಲ ಧಾರ್ಮಿಕ ಕಟ್ಟುಪಾಡುಗಳನ್ನೂ ಮೀರಿ ಮಗನ ದೇಹದ ಅಂಗಾಂಗ ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು. ಈ ಮೂಲಕ ಆರು ಜನರ ಬದುಕಿಗೆ ಮರುಜೀವ ನೀಡಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಫಾರ್ದಿನ್ ಖಾನ್ ಕುಟುಂಬಸ್ಥರನ್ನು ಸನ್ಮಾನಿಸಿದ್ದರು.

ಏನಿದು ಅಂಗಾಂಗ ದಾನ?: ಅಕಾಲಿಕವಾಗಿ ಮೃತಪಟ್ಟ ವ್ಯಕ್ತಿ ಅಥವಾ ಮಿದುಳು ನಿಷ್ಕ್ರಿಯಗೊಂಡ ಜೀವಂತ ಅಂಗಾಂಗಗಳನ್ನು ಅಂಗಾಂಗ ದೋಷ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗೆ ಹೊಂದಿಸಿ, ಅವರಿಗೆ ಮರುಜೀವ ನೀಡುವುದು. ಮೃತ ವ್ಯಕ್ತಿಯೊಬ್ಬನಿಂದ ಕನಿಷ್ಠ 6 ಮಂದಿ ವಿವಿಧ ಅಂಗಾಂಗಗಳ ಸಮಸ್ಯೆಯಿಂದ ಬಳಲುತ್ತಿರುವರು ಬದುಕಬಹುದು. ಇತ್ತೀಚಿಗೆ ದೇಶದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ.

ಇದನ್ನೂ ಓದಿ : ಅಂಗಾಂಗ ದಾನ ಜಾಗೃತಿಯಿಂದ ಜೀವ ರಕ್ಷಣಾ ಪ್ರಕ್ರಿಯೆಗೆ ಯಶಸ್ಸು: ಡಾ. ಕುಮುದ್ ಧಿತಾಲ್

Last Updated :Jun 19, 2023, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.