ETV Bharat / state

ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯ ರೈತರ ಧರಣಿಗೆ ಬಸವರಾಜ ಬೊಮ್ಮಯಿ ಸಾಥ್

author img

By ETV Bharat Karnataka Team

Published : Oct 2, 2023, 10:50 PM IST

Updated : Oct 2, 2023, 10:59 PM IST

farmer-organizations-protested-in-mandya-for-cauvery-issue
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯ ರೈತರ ಧರಣಿಗೆ ಮಾಜಿ ಸಿಎಂ ಬಸವರಾಜು ಬೊಮ್ಮಯಿ ಸಾಥ್

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಮಂಡ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಮಂಡ್ಯ ರೈತರ ಧರಣಿಗೆ ಬಸವರಾಜ ಬೊಮ್ಮಯಿ ಸಾಥ್

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದವು. ಕಳೆದ 28 ದಿನಗಳಿಂದಲೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಪ್ರತಿದಿನ ಹಲವಾರು ಸಂಘಟನೆಗಳು ಬೆಂಬಲ ನೀಡುತ್ತಲೇ ಬಂದಿವೆ. ಇಂದೂ ಕೂಡ ಹಲವು ಸಂಘಟನೆಗಳು ಬೆಂಬಲ ಸೂಚಿಸಿರುವುದರ ಜೊತೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಖುದ್ದು ಧರಣಿ ಸ್ಥಳಕ್ಕೆ ಬಂದು ತಮ್ಮ ಬೆಂಬಲ ಸೂಚಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವು ಧರಣಿಗೆ ಮಂಡ್ಯದ ಶಿಕ್ಷಕರು ಹಾಗೂ ಬಿಡದಿ ಮಠದ ಚನ್ನಕೇಶವನಂದ ಸ್ವಾಮೀಜಿ ಸಾಥ್ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿಯಿಂದ ನಡೆದ ಧರಣಿಯಲ್ಲಿ ಕೈಯಲ್ಲಿ ಚೊಂಬು, ಬೇವು-ಬೆಲ್ಲ ಹಿಡಿದು ಕಿವಿಯಲ್ಲಿ ಹೂ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಅಣಕಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡಿದೆ. ತಮಿಳುನಾಡು ಅರ್ಜಿ ಹಾಕಿದ ನಂತರ ಇವರು ಅರ್ಜಿ ಹಾಕಲು ಮುಂದಾಗ್ತಾರೆ. ಈವರೆಗೆ ಯಾವುದೇ ಒಂದು ದೃಢ ನಿಲುವು ತೆಗೆದುಕೊಳ್ಳುತ್ತಿಲ್ಲ. ನಾವು ಸದಾ ಅನ್ನದಾತರ ಜೊತೆ ಇರ್ತೀವಿ. ಶಿವಮೊಗ್ಗ ಗಲಭೆ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹೇಳಿಕೆ ಕೋಮು ಗಲಭೆಗೆ ಕುಮ್ಮಕ್ಕು ಕೊಡುವಂತೆ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಹಿಂದೆ ಕಾಂಗ್ರೆಸ್ ಮೈಶುಗರ್ ಕಾರ್ಖಾನೆಗೆ ಮೊಳೆ ಹೊಡೆದೇ ಬಿಟ್ಟಿತ್ತು. ನಮ್ಮ ಅವಧಿಯಲ್ಲಿ ನಾವು ಮೈ ಶುಗರ್ ಪ್ರಾರಂಭ ಮಾಡಿದ್ವಿ. ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯಿಲ್ಲ. ಕೋರ್ಟ್ ಹೇಳುವುದಕ್ಕೂ ಮೊದಲೇ ಇವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಬೆಳೆಗಳನ್ನು ಬೆಳೆಯುವುದಿರಲಿ ಮುಂದಿನ ದಿನಗಳಲ್ಲಿ ಕುಡಿಯೋ ನೀರಿಗೂ ತಾತ್ವಾರ ಉಂಟಾಗುತ್ತದೆ. ಜನವರಿ ವೇಳೆಗೆ ಕುಡಿಯುವ ನೀರು ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ಮತ್ತೊಂದೆಡೆ, ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ಸರ್ಕಾರ ರೈತರಿಗೆ ನೇಣುಭಾಗ್ಯ ಕೊಟ್ಟಿರುವುದಾಗಿ ನೇಣು ಕುಣಿಕೆ ಸ್ತಬ್ಥ ಚಿತ್ರದದೊಂದಿಗೆ ಪ್ರತಿಭಟನೆ ನಡೆಯಿತು. ಭೂಮಿತಾಯಿ ಹೋರಾಟ ಸಮಿತಿ ಹೋರಾಟ ಬೆಂಬಲಿಸಿ ಕಡತನಾಳು ಗ್ರಾಮದ ರೈತರು ವಿನೂತನ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಮಂಡ್ಯ ರೈತರಿಗೆ ನೇಣು ಭಾಗ್ಯ ನೀಡಿದೆ ನೀರು ಬಿಟ್ಟ ಸರ್ಕಾರ ಹಾಗೂ ಸಿಎಂ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ: ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಚಿಕ್ಕೋಡಿ ಕರವೇ ಕಾರ್ಯಕರ್ತರು

Last Updated :Oct 2, 2023, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.