ETV Bharat / state

ಹಿಂದಿನ ಸರ್ಕಾರದ ಹಗರಣಗಳ ತನಿಖೆ‌ ಮಾಡಿಸುತ್ತೇವೆ: ಎಂ ಬಿ ಪಾಟೀಲ್

author img

By

Published : Jun 3, 2023, 7:34 PM IST

we-will-investigate-the-scams-of-the-previous-government-says-mb-patil
ಹಿಂದಿನ ಸರಕಾರದ ಹಗರಣಗಳ ತನಿಖೆ‌ ಮಾಡಿಸುತ್ತೇವೆ: ಎಂ ಬಿ ಪಾಟೀಲ್

ಇಷ್ಟು ದಿನ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಕೆಲಸ ಮಾಡಿದ್ದೇವೆ. ಇನ್ನು ಮುಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿರುವ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಸಚಿವ ಎಂ ಬಿ ಪಾಟೀಲ್​ ತಿಳಿಸಿದರು.

ಕೊಪ್ಪಳ: ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿರುವ ಪಿಎಸ್ಐ ಹಗರಣ, 40 ಪರ್ಸೆಂಟ್​​ ಹಗರಣ ಹಾಗೂ ಕೊರೊನಾ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಹೇಳಿದರು.

ಇಂದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ, ಇನ್ನು ಮುಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿರುವ ಹಗರಣಗಳ ತನಿಖೆ ಮಾಡಿಸುವಲ್ಲಿ ನಿರತರಾಗಲಿದ್ದೇವೆ ಎಂದು ಹೇಳಿದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್​ ಶೆಟ್ಟರ್​ ಹಾಗೂ ಲಕ್ಷ್ಮಣ ಸವದಿಯವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಜಗದೀಶ್​ ಶೆಟ್ಟರ್​​ ಲೋಕಸಭೆಗೆ ಸ್ಪರ್ಧಿಸುವ ಕುರಿತು ಹೈಕಮಾಂಡ್​ ನಿರ್ಧರಿಸಲಿದೆ ಎಂದರು.

ಗೃಹ ಜ್ಯೋತಿ ಯೋಜನೆಯಲ್ಲಿ ಗೊಂದಲವಿಲ್ಲ: ವಿರೋಧ ಪಕ್ಷಗಳಿಗೆ ಕೆಲಸವಿಲ್ಲ. ಹೀಗಾಗಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ಜನರಿಗೆ ಏನು ಭರವಸೆ ನೀಡಿದ್ದೇವೆಯೋ ಅದನ್ನು ಈಡೇರಿಸುತ್ತೇವೆ. ಗೃಹ ಜ್ಯೋತಿ ಅಷ್ಟೇ ಅಲ್ಲ, ನಮ್ಮ ಐದು ಗ್ಯಾರಂಟಿಗಳನ್ನು ಯಾವುದೇ ಗೊಂದಲವಿಲ್ಲದೆ ರಾಜ್ಯದ ಜನರಿಗೆ ಒದಗಿಸುತ್ತೇವೆ ಸಚಿವರು ಸ್ಪಷ್ಟಪಡಿಸಿದರು.

ಕಾರ್ಖಾನೆಗಳಿಂದ ಪರಿಸರಕ್ಕೆ ಹಾನಿ: ಕೊಪ್ಪಳ ಜಿಲ್ಲೆಯ ಉಕ್ಕು ಕಾರ್ಖಾನೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇದಕ್ಕೆ ಏನಾದರು ಕ್ರಮ ವಹಿಸುವಿರಾ ಎಂಬ ವಿಚಾರಕ್ಕೆ ಪ್ರತ್ರಿಕ್ರಿಯಿಸಿದ ಸಚಿವರು, ಈ ಕುರಿತು ಕ್ರಮ ವಹಿಸಲಾಗುವುದು. ಕೊಪ್ಪಳದಲ್ಲಿ ಬಹಳಷ್ಟು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಅವರೆಲ್ಲ ಈ ಭಾಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಒದಗಿಸುವಲ್ಲಿ ಕೈಜೋಡಿಸಬೇಕು. ಈ ಕುರಿತು ಕೈಗಾರಿಕ ಸಚಿವನಾಗಿ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಕೈಗಾರಿಕೆಗೆಂದು ಖರೀದಿಸಿರುವ ಭೂಮಿ ಬಳಕೆಗೆ ಕ್ರಮ: ಇಲ್ಲಿಯವರೆಗೆ ಕೈಗಾರಿಕೆಗೆಂದು ಮೀಸಲಿರುವ ಭೂಮಿಯನ್ನು ಬಳಸಬೇಕು. ಯಾರು ಇಲ್ಲಿಯವರೆಗೂ ಅದನ್ನ ಬಳಕೆ ಮಾಡಿಕೊಂಡಿಲ್ಲವೋ ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಇದೇ ತಿಂಗಳು 10ನೇ ತಾರಿಖಿನೊಳಗಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಎಂ ಬಿ ಪಾಟೀಲ್​ ಹೇಳಿದರು. ಕೊಪ್ಪಳ ಗವಿಮಠ ಈ ಭಾಗದ ಸಿದ್ದಗಂಗಾ ಮಠ, ಸಚಿವರಾದ ನಂತರ ವಿಜಯಪುರ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಚಿತ್ರದುರ್ಗ ಹಾಗೂ ಕೊಪ್ಪಳ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದಿದ್ದೇನೆ ಎಂದು ಸಚಿವ ಎಂ ಬಿ ಪಾಟೀಲ್​​ ಹೇಳಿದರು.

ಯಾವುದೇ ರೀತಿ ತನಿಖೆ ನಡೆಸಲಿ- ಬೊಮ್ಮಾಯಿ: ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಅಕ್ರಮಗಳ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು 15 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಯಾವುದೇ ರೀತಿ ತನಿಖೆ ನಡೆಸಲಿ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಮೇ 30ರಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಗ್ಯಾರಂಟಿಗಳಲ್ಲಿ ಗೊಂದಲಗಳಿವೆ, ಕಾಂಗ್ರೆಸ್​ನವರು​ ಜನರಿಗೆ ಮೋಸ ಮಾಡಿದ್ದಾರೆ: ಪ್ರಹ್ಲಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.