ETV Bharat / state

ತುಂಗಭದ್ರಾ ಎಡದಂಡೆಗೆ ಕಾಲುವೆಗಳಿಂದ ನೀರು ಕಳ್ಳತನ: ಅಧಿಕಾರಿಗಳಿಂದ ಅನಧಿಕೃತ ಪೈಪ್​ಲೈನ್​ಗಳ ತೆರವು

author img

By

Published : Aug 21, 2023, 6:31 AM IST

unauthorized-pipelines-cleared-in-left-bank-of-tungabhadra-by-officers-in-koppala
ತುಂಗಭದ್ರಾ ಎಡದಂಡೆಗೆ ಕಾಲುವೆಗಳಿಂದ ನೀರು ಕಳ್ಳತನ: ಅಧಿಕಾರಿಗಳಿಂದ ಅನಧಿಕೃತ ಪೈಪ್​ಲೈನ್​ಗಳ ತೆರವು

ತುಂಗಭದ್ರಾ ಎಡದಂಡೆ ಕಾಲುವೆಗೆ ಅಕ್ರಮವಾಗಿ ಅಳವಡಿಸಿದ್ದ ಪೈಪ್​ಲೈನ್​ಗಳನ್ನು ವಿವಿಧ ಇಲಾಖೆಯ ಅಧಿಕಾರಿಗಳ ತಂಡ ತೆರವು ಮಾಡಿದೆ.

ಗಂಗಾವತಿ(ಕೊಪ್ಪಳ): ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿನ ವಿತರಣಾ ಕಾಲುವೆಗಳ ಸಮೀಪ ಅನಧಿಕೃತವಾಗಿ ಪೈಪ್​ಲೈನ್​ ಅಳವಡಿಸಿ, ನೀರು ಕಳ್ಳತನವಾಗುತ್ತಿರುವ ಪ್ರದೇಶಗಳನ್ನು ಪತ್ತೆ ಹಚ್ಚಿದ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಇಂದು ಪೈಪ್​ಲೈನ್​​​ಗಳ ತೆರವು ಕಾರ್ಯಾಚರಣೆ ನಡೆಸಿತು. ನೀರು ಕಳ್ಳತನ ತಡೆಯುವ ಉದ್ದೇಶಕ್ಕೆ ಕೊಪ್ಪಳ ಜಿಲ್ಲಾಧಿಕಾರಿ, ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮುಖ್ಯ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಕೂಡಿದ ಕಾರ್ಯಾಚರಣೆ ಪಡೆ ರಚಿಸಿದ್ದಾರೆ.

ಈ ಹಿನ್ನೆಲೆ ಇಲ್ಲಿನ ವಡ್ಡರಹಟ್ಟಿ ನಂಬರ್-2 ವಿಭಾಗದ ವ್ಯಾಪ್ತಿಗೆ ಒಳಪಡುವ 31ನೇ ವಿತರಣಾ ಕಾಲುವೆ ಸಮೀಪ ಅನಧಿಕೃತ ಪೈಪ್​ಲೈನ್​ ಅಳವಡಿಸಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳ ತಂಡ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನೀಯರ್ ಎಂಎಸ್ ಗೋಡೆಕರ್ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಲಾಯಿತು.

ಮತ್ತೊಂದೆಡೆ, ಕನಕಗಿರಿ ತಾಲೂಕು ವ್ಯಾಪ್ತಿಗೆ ಒಳಪಡುವ ಜೀರಾಳ ಕಲ್ಗುಡಿ ಮತ್ತು ಚಿಕ್ಕಡಂಕನಕಲ್ ಗ್ರಾಮದ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಗೆ ಅನಧಿಕೃತ ಪೈಪ್​ಲೈನ್​ ಅಳವಡಿಸಿ ನೀರು ಕದಿಯಲಾಗುತ್ತಿರುವ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆ ಕನಕಗಿರಿ ತಹಶೀಲ್ದಾರ್​ ವಿಶ್ವನಾಥ್​ ಮುರಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್​ ನೇತೃತ್ವದಲ್ಲಿ ಅಧಿಕಾರಿಗಳ ತಂಡ, ಅನಧಿಕೃತ ಪೈಪ್​ಲೈನ್​ ನಾಶಪಡಿಸುವ ಕಾರ್ಯಾಚರಣೆ ಮಾಡಿದರು. ಸುಮಾರು ಹತ್ತಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ್​ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ: ಸಚಿವ ದಿನೇಶ್ ಗುಂಡೂರಾವ್

ತಹಶೀಲ್ದಾರ್ ಪರಿಶೀಲನೆ: ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ರಂಧ್ರ ಕೊರೆದು ಅನಧಿಕೃತವಾಗಿ ಪೈಪ್​ಲೈನ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ತಹಶೀಲ್ದಾರ್ ಮಂಜುನಾಥ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಿನ್ನೆ(ಶನಿವಾರ) ನಡೆಸಿದ್ದರು. ತಾಲೂಕಿನ ದಾಸನಾಳ ಬಳಿ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಪೈಪ್​ಲೈನ್ ಅಳವಡಿಸಿ ನೀರು ಕದಿಯುತ್ತಿರುವ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ವಿವಿಧ ಕಡೆ ಪರಿಶೀಲನೆ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತಹಶೀಲ್ದಾರ್ ಮಂಜುನಾಥ್ ಹಿರೇಮಠ, "ಮೇಲ್ಭಾಗದಲ್ಲಿ ನೀರು ಕಳ್ಳತನ ಮಾಡುತ್ತಿರುವ ಪರಿಣಾಮ ರಾಯಚೂರಿನವರೆಗೆ ತಲುಪಬೇಕಿರುವ ಕುಡಿಯುವ ಮತ್ತು ಕೃಷಿ ಚಟುವಟಿಕೆಯ ಉದ್ದೇಶದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ. ಈ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಅಲ್ಲದೇ ನಮ್ಮ ಭಾಗದಲ್ಲಿ ಹರಿಯುವ ಕಾಲುವೆಯಲ್ಲಿನ ನೀರಿನ ಪ್ರಮಾಣ 13 ಗೇಜ್ ಪಾಯಿಂಟ್ ಇರಬೇಕು ಎಂದು ನೀರಾವರಿ ಇಲಾಖೆ ಮಾನದಂಡ ನಿಗದಿ ಪಡಿಸಿದರೂ, ದಾಸನಾಳದ ಬಳಿ ವಾಟರ್ ಗೇಜ್ಪಾಯಿಂಟ್ಗೆ ಭೇಟಿ ನೀಡಿದಾಗ 13 ಪಾಯಿಂಟ್ ನೀರಿನ ಹರಿವಿತ್ತು" ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.