ಗಂಗಾವತಿ: ಕಾರಟಗಿಯ ತಾಲೂಕಿನ ಮುಸ್ಟೂರು ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳುಗಣಿಗಾರಿಕೆ ನಡೆಸದ ಆರೋಪದ ಮೇಲೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ಪಡೆದುಕೊಂಡ ಗುತ್ತಿಗೆದಾರರ ಮೇಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿ.ಎಲ್. ಕಾಂಬ್ಳೆ ಎಂಬ ವ್ಯಕ್ತಿಯ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸಿ.ಎಚ್. ರೂಪಾ ದೂರು ದಾಖಲಿಸಿದ್ದಾರೆ. ಮರಳು ಗಣಿಗಾರಿಕೆ ಮಾಡಲು ಅನುಮತಿ ಪಡೆದುಕೊಂಡ ಈ ಗುತ್ತಿಗೆದಾರ ಅನಧಿಕೃತವಾಗಿ 350 ಮೀಟರ್ ದೂರದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ. ಅಲ್ಲದೇ 300 ಮೆಟ್ರಿಕ್ ಟನ್ ಪ್ರಮಾಣದಷ್ಟು ಮರಳು ಸಂಗ್ರಹಿಸಿದ್ದು, ಸರ್ಕಾರಕ್ಕೆ ಹಾನಿ ಮಾಡಿದ್ದಾರೆ. ಜಲಸಾರಿಗೆ ಇಲಾಖೆಯ ಶೆಡ್ಯೂಲ್ ಪ್ರಕಾರ 2.26 ಲಕ್ಷ ಮೊತ್ತದಷ್ಟು ಪ್ರಮಾಣದ ಅಕ್ರಮ ಮರಳು ಸಂಗ್ರಹಿಸಿದ್ದಾರೆ ಎಂದು ರೂಪಾ ದೂರಿನಲ್ಲಿ ವಿವರಿಸಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಮತ್ತು ಸ್ಥಳಾಂತರಕ್ಕೆ ಬಳಸುತ್ತಿದ್ದ ಎರಡು ಹಿಟಾಚಿ ಸೇರಿದಂತೆ ನಾನಾ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 300 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.