ETV Bharat / state

ಕೊಪ್ಪಳ: ಮೊದಲನೇ ಮಹಡಿಯಿಂದ ಬಿದ್ದು ಮಗು ಗಂಭೀರ ಗಾಯ

author img

By ETV Bharat Karnataka Team

Published : Oct 10, 2023, 8:07 AM IST

Updated : Oct 10, 2023, 9:32 AM IST

ಕೊಪ್ಪಳ
ಕೊಪ್ಪಳ

ಕಾರ್ಯಕ್ರಮದ ಭೋಜನದ ವೇಳೆ ಮಗುವೊಂದು ಮೊದಲನೇ ಮಹಡಿಯಿಂದ ಬಿದ್ದು ಗಾಯಗೊಂಡಿರುವ ಘಟನೆ ಕೊಪ್ಪಳದ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ಕೊಪ್ಪಳ: ಆಟವಾಡುತಿದ್ದ 3.5 ವರ್ಷದ ಮಗು ಮನೆಯ ಮೊದಲನೇ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ಗೌರಿ ನಗರದ ಮಹಡಿ ಮನೆಯೊಂದರಲ್ಲಿ ಶನಿವಾರ (7/10/2023) ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಪಟ್ಟಣದ ದುರ್ಗಾ ಕಾಲೋನಿಯ ನಿವಾಸಿ ಸಂಗೀತ ಕಲಾವಿದ ಹೊಳಿಯಪ್ಪ ಗುರಿಕಾರ ಅವರು, ತಮ್ಮ ಮಗಳು ಸೇರಿದಂತೆ ಕುಟುಂಬ ಸಮೇತ ಗೌರಿ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಸೀರೆ ಕಾರ್ಯಕ್ರಮ ಇರುವ ಕಾರಣ ತೆರಳಿದ್ದರು. ಕಾರ್ಯಕ್ರಮದ ಸಂಭ್ರಮದಲ್ಲಿ ಬಂಧು-ಬಳಗದವರೊಂದಿಗೆ ಭಾಗಿಯಾಗಿದ್ದು, ರಾತ್ರಿ ಮಹಡಿ ಮನೆಯ ಮೇಲೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.

ಆ ಸಮಯದಲ್ಲಿ 3.5 ವರ್ಷದ ಮಗುವೊಂದು ಎಲ್ಲರೂ ಕುಳಿತುಕೊಳ್ಳಲು ಇರಿಸಿದ್ದ ಕುರ್ಚಿ ಮೇಲೆ ನಿಂತು ಕೆಳಗಡೆ ಇಣುಕಿದ್ದಾಳೆ. ಆ ಸಂದರ್ಭದಲ್ಲಿ ಆಯತಪ್ಪಿ ‌ಸುಮಾರು 20 ಅಡಿ ಎತ್ತರದಿಂದ ಕೆಳಗಡೆ ಬಿದ್ದಿದ್ದಾಳೆ. ಬೀಳುವ ರಭಸದಲ್ಲಿ ಗಿಡದ ಟೊಂಗೆಯೊಂದು ಹೊಟ್ಟೆಗೆ ಸಿಕ್ಕಿದ ಪರಿಣಾಮ ಮಗುವಿಗೆ ಗಂಭೀರವಾದ ಗಾಯಗಳಾಗಿವೆ.

ತಕ್ಷಣ ಮಗುವನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ ಪಾಲಕರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಜೀವನ್ಮರಣದ ಹೋರಾಟದಲ್ಲಿದೆ. ಈ ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಘಟನೆ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಮನೆಯಲ್ಲಿ ಪತಿ, ಪತ್ನಿ, ಮಗ ಸಜೀವ ದಹನ; ಆತ್ಮಹತ್ಯೆ ಶಂಕೆ

ಎರಡು ದಿನಗಳ ಹಿಂದೆ ಬೆಂಗಳೂರಲ್ಲಿ ಬಸ್ ಹರಿದು ಮಗು ಸಾವು: ಭಾನುವಾರ ಸಂಜೆ ಗಾರ್ವೇಭಾವಿಪಾಳ್ಯ ಜಂಕ್ಷನ್​​ನಲ್ಲಿ ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿತ್ತು. ದೊಡ್ಡಮ್ಮ ರುಸ್ಮಾ ಜೊತೆ ದ್ವಿಚಕ್ರ ವಾಹನದಲ್ಲಿ ಭಾನುವಾರ ಗಂಡು ಮಗು ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಕೆಳಬಿದ್ದ ಮಗು ಮೇಲೆ ಬಸ್ ಹರಿದು ಅವಘಡ ಸಂಭವಿಸಿದೆ. ಸ್ಥಳದಲ್ಲೇ ಮಗು ಸಾವನ್ನಪ್ಪಿದೆ. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ವಿಜಯನಗರ ಜಿಲ್ಲೆಯಲ್ಲಿ ಬಂಡೆ ಕುಸಿದು ನಾಲ್ಕು ವರ್ಷದ ಬಾಲಕ ಸಾವು: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಪುರ ಗ್ರಾಮದಲ್ಲಿ ಗುಡಿಸಲಿಗೆ ಆಧಾರವಾಗಿ ಸುತ್ತಲೂ ನಿಲ್ಲಿಸಿದ್ದ ಉದ್ದದ ಕಲ್ಲು ಕುಸಿದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಶಾಂತಕುಮಾರ್ - ಮಲ್ಲೇಶ್ವರಿ ದಂಪತಿಯ ಪುತ್ರ ತೇಜಸ್ ಮೃತ ಬಾಲಕ. ಕಳೆದ ತಿಂಗಳು ಸೆಪ್ಟಂಬರ್ 25 ರಂದು ಈ ಅವಘಡ ನಡೆದಿತ್ತು.

ಮೊದಲು ತೆಂಗಿನ ಮರ ಗುಡಿಸಲಿನ ಮೇಲೆ ಬಿದ್ದಿತ್ತು. ಆಗ ಗುಡಿಸಲು ತೆಂಗಿನ ಮರದ ನಡುವೆ ಎಮ್ಮೆ ಸಿಲುಕಿಕೊಂಡಿತ್ತು. ಈ ವೇಳೆ ಎಮ್ಮೆ ಬೆದರಿ ಗುಡಿಸಲಿಗೆ ಉದ್ದದ ಕಲ್ಲಿಗೆ ಗುದ್ದಿದೆ. ಪರಿಣಾಮ ಕಲ್ಲು ಕುಸಿದು ಬಾಲಕ ಮೃತಪಟ್ಟಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ಎರಡು ಲಕ್ಷ ರೂ. ನೆರವು ನೀಡಿದ್ದರು.

Last Updated :Oct 10, 2023, 9:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.