ETV Bharat / state

ಗಂಗಾವತಿ: ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

author img

By ETV Bharat Karnataka Team

Published : Oct 10, 2023, 10:38 AM IST

a-youth-died-in-procession-of-ganesh-procession-in-koppala
ಗಂಗಾವತಿ : ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಪ್ರಶಾಂತ ನಗರದಲ್ಲಿ ನಡೆದಿದೆ.

ಗಂಗಾವತಿ (ಕೊಪ್ಪಳ) : ಗಣೇಶ ನಿಮಜ್ಜನ ಮೆರವಣಿಗೆ ವೇಳೆ ನೃತ್ಯ ಮಾಡುತ್ತಿದ್ದ ಯುವಕನೊಬ್ಬ ಹಠಾತ್ ಕುಸಿದು ಬಿದ್ದು,ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪ್ರಶಾಂತನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಸುದೀಪ್ ರುದ್ರಪ್ಪ ಸಜ್ಜನ್(23) ಎಂದು ಗುರುತಿಸಲಾಗಿದೆ.

ಸೋಮವಾರ ಪ್ರಶಾಂತನಗರದ ಯುವಕ ಮಂಡಳಿಯು ಗಣೇಶ ನಿಮಜ್ಜನ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಈ ವೇಳೆ ಮೆರವಣಿಗೆಯಲ್ಲಿ ಡಿಜೆಗೆ ಸದ್ದಿಗೆ ಯುವಕರು ಕುಣಿಯುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಸುದೀಪ್ ಸಜ್ಜನ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದ ಯುವಕ ಸಾವನಪ್ಪಿರುವುದಾಗಿ ತಿಳಿದುಬಂದಿದೆ. ಈ ಹಿನ್ನಲೆ ಗಣೇಶ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.

ಮೆರವಣಿಗೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲೇ ಇದ್ದ ಎಸ್ಪಿ ಯಶೋಧ, ಯುವಕನ ಮೃತ ದೇಹವನ್ನು ನಗರದ ಉಪವಿಭಾಗ ಆಸ್ಪತ್ರೆಗೆ ರವಾನಿಸಿದರು.

ಗಣೇಶ ನಿಮಜ್ಜನ ಮೆರವಣಿಗೆ - ನಗರದಲ್ಲಿ ಬಿಗಿ ಬಂದೋಬಸ್ತ್​ : ನಗರದ ವಾಲ್ಮೀಕಿ ವೃತ್ತ, ಸ್ನೇಹವೃಂದ, ಪ್ರಶಾಂತನಗರ, ಗಾಂಧಿನಗರ ಹಾಗೂ ಲಿಂಗರಾಜ ಕ್ಯಾಂಪ್​ನ ಒಟ್ಟು ಐದು ಗಣೇಶದ ಮೂರ್ತಿಗಳ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಗಣೇಶ ನಿಮಜ್ಜನ ಮೆರವಣಿಗೆ ಸಂಬಂಧ ನಗರದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ಭದ್ರತೆಗಾಗಿ ನಗರದಲ್ಲಿ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಹಿಂದೆ ನಡೆದ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಇಲ್ಲಿನ ಜಾಮೀಯಾ ಮಸೀದಿಗೆ ಮಂಗಳರಾತಿ ಮಾಡಿ, ಮಂಡಲ ಬರೆದು ಪೂಜೆ ಮಾಡಿದ್ದ ಘಟನೆ ನಡೆದಿತ್ತು. ಈ ಸಂಬಂಧ ಇನ್​ಸ್ಪೆಕ್ಟರ್​ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈ ಹಿನ್ನಲೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್​ ಕೈಗೊಂಡಿತ್ತು. ಮೆರವಣಿಗೆ ಹಿನ್ನಲೆ ನಗರದ ವಿವಿದೆಡೆ 150ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನುಅಳವಡಿಸಲಾಗಿತ್ತು. ಜೊತೆಗೆ ಪೊಲೀಸ್ ಇಲಾಖೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸೋಮವಾರ ಪಥ ಸಂಚಲನ ನಡೆಸಿತು.

ಜಿಲ್ಲಾ ಎಎಸ್ಪಿ ಯಶೋಧಾ ಒಂಟಿಗೋಡಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತೆಗೆ ಒಬ್ಬ ಹೆಚ್ಚುವರಿ ಎಸ್ಪಿ, ನಾಲ್ವರು ಡಿವೈಎಸ್ಪಿ, 17 ಪಿಐ, 37 ಪಿಎಸ್ಐ, 56 ಎಎಸ್ಐ, ಎಚ್ಸಿ-ಪಿಸಿ 380, 150 ಗೃಹ ರಕ್ಷಕ ದಳದ ಸಿಬ್ಬಂದಿ, ಐದು ಜಿಲ್ಲಾ ಶಸ್ತ್ರ ಮೀಸಲು ಪಡೆ, ಎರಡು ಕೆಎಸ್ಆರ್​ಪಿ ತುಕ್ಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ತಿಳಿಸಿದ್ದರು.

ಇದನ್ನೂ ಓದಿ : ದಸರಾ ಜಂಜೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.