ETV Bharat / state

ಕೋಲಾರ: ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

author img

By ETV Bharat Karnataka Team

Published : Jan 3, 2024, 7:03 PM IST

31 ವರ್ಷ ಹಿಂದಿನ ಗಲಭೆ ಪ್ರಕರಣದ ಸಂಬಂಧ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Etv Bharatbjp-workers-protested-in-kolar-for-arrest-of-karasevakas
ಕರಸೇವಕರ ಬಂಧನ: ಕೋಲಾರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ಪ್ರತಿಭಟನೆ

ಕೋಲಾರ: 31 ವರ್ಷ ಹಿಂದಿನ ಗಲಭೆ ಪ್ರಕರಣದ ಆರೋಪಿ ಬಂಧನ ಖಂಡಿಸಿ ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, 31 ವರ್ಷಗಳ ಹಿಂದಿನ ಪ್ರಕರಣವನ್ನು ರೀ‌ ಓಪನ್ ಮಾಡಿ ಹಿಂದೂ ಕಾರ್ಯಕರ್ತನ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರುವ ಕ್ರಮವನ್ನು ತ್ರೀವವಾಗಿ ಖಂಡಿಸಿದರು.

ಬಳಿಕ ಮಾತನಾಡಿದ ಸಂಸದ ಮುನಿಸ್ವಾಮಿ, "ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ಕರೆಯ ಮೇರೆಗೆ ಪ್ರತಿಭಟನೆ ನಡೆಸುತ್ತಿದ್ದೇವೆ. 31 ವರ್ಷ ಹಿಂದಿನ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ರಾಮಭಕ್ತರು ಮತ್ತು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದರಿಂದ ರಾಜ್ಯ ಕಾಂಗ್ರೆಸ್​ ಮತ್ತು ಇಂಡಿಯಾ ಮೈತ್ರಿಕೂಟದವರಲ್ಲಿ ಬೆಂಕಿ ಹೊತ್ತಿಕೊಂಡಿದೆ" ಎಂದು ಆರೋಪಿಸಿದರು.

ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ,​ "ರಾಜಕೀಯಕೋಸ್ಕರ ಬಿಜೆಪಿಯವರು ಶ್ರೀರಾಮನ ಹೆಸರನ್ನು ಹೇಳುತ್ತಿದ್ದಾರೆ ಎಂದು ಬಿ ಕೆ ಹರಿಪ್ರಸಾದ್​ ಆರೋಪಿಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್​ನಲ್ಲಿ ಯಾವ ಮಟ್ಟಕ್ಕೆ ನೋಡುತ್ತಿದ್ದಾರೆ ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ" ಎಂದು ತಿರುಗೇಟು ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ‌ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ, ಓಂ ಶಕ್ತಿ ಚಲಪತಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಗೃಹ ಸಚಿವರ ಕಾರ್ಯಕ್ರಮದಲ್ಲಿ ಕಣಿಸಿಕೊಂಡ ಹಾವು

ಗೃಹ ಸಚಿವರ ಕಾರ್ಯಕ್ರಮದಲ್ಲಿ ಹಾವು ಪ್ರತ್ಯಕ್ಷ: ಮತ್ತೊಂದೆಡೆ, ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರು, ಪೊಲೀಸ್ ಠಾಣೆ ಉದ್ಘಾಟನೆ ಹಾಗೂ ಕೋಲಾರ ಸಶಸ್ತ್ರ ಮೀಸಲು ಪಡೆಯ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಹಾವು ಪ್ರತ್ಯಕ್ಷವಾಗಿ ನೆರೆದಿದ್ದವರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಧ್ಯಾಹ್ಯ 1 ಗಂಟೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರು ಆಗಮಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಬೇಕಾಗಿತ್ತು. ಅವರು ಕಾರ್ಯಕ್ರಮಕ್ಕೆ ಬರುವುದಕ್ಕೂ ಮೊದಲೇ ಮರಿ ಹಾವೊಂದು ಕಾಣಿಸಿಕೊಂಡಿದೆ. ಹಾವನ್ನು ಕಂಡ ವಿದ್ಯಾರ್ಥಿಗಳು ಮತ್ತು ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನಂತರ ಕಾನ್​ಸ್ಟೇಬಲ್​ವೊಬ್ಬರು ಹಾವನ್ನು ಲಾಠಿ ಸಹಾಯದಿಂದ ಕಾರ್ಯಕ್ರಮದ ಆವರಣದಿಂದ ದೂರ ಎಸೆದು ಬಂದರು. ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟು, ತಮ್ಮ ಕುರ್ಚಿಗಳಲ್ಲಿ ಆಸೀನರಾದರು.

ಇದನ್ನೂ ಓದಿ: 48 ಗಂಟೆಯಲ್ಲಿ ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗದಿದ್ರೆ ಹುಬ್ಬಳ್ಳಿ ಠಾಣೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.