ಕೊಡಗು: ಜಿಲ್ಲೆಯ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ವಸತಿಗಾಗಿ ಆಗ್ರಹಿಸಿ ಮಾಡಿದ್ದ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಸರ್ಕಾರವೇ ಕೊಡಗಿನತ್ತ ಮುಖ ಮಾಡಿತ್ತು. ಇದೀಗ ವಸತಿಗಾಗಿ ಅದೇ ರೀತಿಯ ಇದೀಗ ಮತ್ತೊಂದು ಆಹೋರಾತ್ರಿ ಧರಣಿ ನಡೆಯುತ್ತಿದೆ. 18 ದಿನಗಳಿಂದ ನಿರಂತರ ಧರಣಿ ನಡೆಸುತ್ತಿರೋ ವಸತಿ ವಂಚಿತರು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದಲ್ಲಿ ಕಳೆದ 18 ದಿನಗಳಿಂದ ಈ ಆಹೋರಾತ್ರಿ ಧರಣಿ ನಡೆಯುತ್ತಿದೆ. ಗ್ರಾಮದ ಸರ್ವೇ ನಂ. 337/1 ರಲ್ಲಿರುವ 3.50 ಎಕರೆ ಪೈಸಾರಿ ಜಾಗದಲ್ಲಿ ನಮಗೆ ವಸತಿ ಕಲ್ಪಿಸಿಕೊಡಿ ಎಂದು ಈ ಹೋರಾಟ ನಡೆಸಲಾಗುತ್ತಿದೆ.
ಸುತ್ತಮುತ್ತಲಿನ ಅರ್ಜಿ, ಪೆರುಂಬಾಡಿ, ವೀರಾಜಪೇಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಮಾಡುತ್ತಿರುವ ವಸತಿ ರಹಿತ 55 ಕುಟುಂಬಗಳು ಈ ಹೋರಾಟದಲ್ಲಿ ಭಾಗಿಯಾಗಿವೆ. ವಸತಿ ಹೋರಾಟ ಸಮಿತಿ, ಸಿಐಟಿಯು ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮೂರು ವರ್ಷದ ಹಿಂದೆ ವೀರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಇದೇ ಮಾದರಿಯಲ್ಲಿ ಹೋರಾಟ ಮಾಡಿ ವಸತಿ ಗಿಟ್ಟಿಸಿಕೊಂಡಿದ್ದರು. ಇದೀಗ ಇವರು ಕೂಡ ಅದೇ ಮಾದರಿಯ ಹೋರಾಟದ ಹಾದಿ ಹಿಡಿದಿದ್ದಾರೆ.
ಒಂದು ವಾರಗಳ ಹಿಂದೆ ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ ಇವರು ನಿರ್ಮಾಣ ಮಾಡಿದಂತಹ ತಾತ್ಕಾಲಿಕ ಶೆಡ್ಗಳನ್ನು ಕಿತ್ತು ಹಾಕಿ ಹೋಗಿದ್ದಾರೆ. ಇನ್ನೂ ವೀರಾಜಪೇಟೆ ತಹಶೀಲ್ದಾರರು ಆಗಮಿಸಿ ಜಾಗದಿಂದ ಹೊರಹೋಗುವಂತೆ ಸೂಚನೆ ನೀಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಜಾಗ ಬಿಟ್ಟು ಹೋಗಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.
ಸರಕಾರ ಎಲ್ಲಾರಿಗೂ ವಸತಿ ಕೊಡುತ್ತೇವೆ ಎಂದು ಹೇಳುತ್ತದೆ. ಆದರೆ ನಮಗೆ ಇದುವರೆಗೂ ವಸತಿ ಸಿಕ್ಕಿಲ್ಲ. ಚುನಾವಣೆಗೆ ಮಾತ್ರ ಮತಭಿಕ್ಷೆ ಕೇಳಲು ನಮ್ಮ ಬಳಿ ಜನಪ್ರತಿನಿಧಿಗಳು ಬರುತ್ತಾರೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಸೂರಿಗಾಗಿ ನಡೆಯುತ್ತಿರುವ ಈ ಹೋರಾಟ ಅತಿರೇಕಕ್ಕೆ ಹೋಗುವ ಮೊದಲು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸರ್ಕಾರ ಈ ಹೋರಾಟಗಾರರ ಬೇಡಿಕೆಗೆ ಯಾವ ರೀತಿ ಮನವೊಲಿಸುವ ಕೆಲಸ ಮಾಡುತ್ತೆ ಕಾದು ನೋಡಬೇಕಿದೆ.