ETV Bharat / state

ಎರಡು ಪ್ರಾಣ ತೆಗೆದಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಕೊಡಗಿನ ಜನ

author img

By

Published : Feb 14, 2023, 5:26 PM IST

Updated : Feb 14, 2023, 9:18 PM IST

kodagu man eating male tiger
ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ

ಅರವಳಿಕೆ ನೀಡಿ ಎರಡು ಪ್ರಾಣ ತೆಗೆದಿದ್ದ ವ್ಯಾಘ್ರ ಸೆರೆ - ಅರಣ್ಯ ಇಲಾಖೆಯಿಂದ ಕೂಂಬಿಂಗ್ ಕಾರ್ಯಾಚರಣೆ - ಎರಡನೇ ದಿನಕ್ಕೆ ಅರಣ್ಯ ಇಲಾಖೆಗೆ ಸೆರೆಸಿಕ್ಕ ಹುಲಿ

ಅರಣ್ಯ ಇಲಾಖೆಯಿಂದ ಕೂಂಬಿಂಗ್ ಕಾರ್ಯಾಚರಣೆ

ಕೊಡಗು: ಇಬ್ಬರನ್ನು ಬಲಿ ಪಡೆದು ಮತ್ತೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆಯಿಂದ ಕಾಫಿ ತೋಟದ ಸುತ್ತಮುತ್ತಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ತಾತಾ ಮತ್ತು ಮೊಮ್ಮಗನನ್ನು ಬಲಿಪಡೆದ ಸ್ಥಳದಿಂದ ಸ್ವಲ್ಪ ದೂರದ ನಾಣಚ್ಚಿ ಗೇಟ್ ಬಳಿ ಈ ಹುಲಿ ಸೆರೆಯಾಗಿದೆ.

ಕಾಫಿ ತೋಟದಲ್ಲಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ‌ ಭಯದ ವಾತಾವರಣ ಉಂಟಾಗಿತ್ತು. ಭಯದಿಂದ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸಹ ಮನೆಗಳನ್ನು‌ ಖಾಲಿ ಮಾಡಿದ್ದರು. ಹುಲಿಯನ್ನು ಸೆರೆಹಿಡಿಯುವಂತೆ ಆರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ, ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗಿನಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಕಮ್ಮಿಯಾಗುತ್ತಿಲ್ಲ. ಆಹಾರ ಅರಸಿ ಬರುವ ಪ್ರಾಣಿಗಳು ಮನುಷ್ಯರನ್ನು ಬಲಿ ಪಡೆಯುತ್ತಿವೆ. ಕೆಲ ತಿಂಗಳ ಹಿಂದೆ ಆನೆಯ ಕಾಟಕ್ಕೆ ಕೊಡಗಿನ ಜನತೆ ಬೇಸತ್ತರೆ, ಈ ತಿಂಗಳಲ್ಲಿ ಹುಲಿ ಇಬ್ಬರ ಪ್ರಾಣ ತೆಗೆದಿದೆ. ಪೊನ್ನಂಪೇಟೆ ತಾಲೂಕಿನ ಚೂರಿಕಾಡು ಗ್ರಾಮದ‌ ಕಾಫಿ ತೋಟದಲ್ಲಿ ಮೊಮ್ಮಗ ಮತ್ತು ತಾತನನ್ನು ಬಲಿ ಪಡೆದು ಮತ್ತೆ ಅದೇ ಕಾಫಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. ನಿನ್ನೆಯಿಂದ ಅರಣ್ಯ ಇಲಾಖೆ ಹುಲಿ ಸೆರೆಗೆ ಸುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿತ್ತು.

ಇಂದು ಮುಂಜಾನೆ‌ಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಶಾರ್ಪ್ ಶೂಟರ್, ವೈದ್ಯರು ಮತ್ತು 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ 8 ತಂಡ ಮಾಡಿ ಹುಡುಕಾಟ ಆರಂಭಿಸಿತ್ತು. ಅಲ್ಲದೇ ಅಭಿಮನ್ಯು ನೇತೃತ್ವದ 4 ಸಾಕಾನೆಗಳನ್ನು ತಂದು ಹುಲಿ ಸೆರೆಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಇಬ್ಬರನ್ನು ಬಲಿ‌ಪಡೆದ ಸ್ಥಳದಲ್ಲಿ ಬೋನ್ ಇಡಲಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿತ್ತು.

ರೈತ ಸಂಘದ ಅಧ್ಯಕ್ಷ ಮನು‌ಸೋಮಯ್ಯ ಮಾತನಾಡಿ,"ರಕ್ತದ ರುಚಿನೋಡಿರುವ ಹುಲಿ ಮನುಷ್ಯರ ಮೇಲೆ ಮತ್ತೆ ದಾಳಿ ಮಾಡುತ್ತದೆ ಎಂಬ ಭಯ ಸುತ್ತಮುತ್ತಲಿನ ಕಾಫಿ ತೋಟದ ಕೂಲಿ ಕಾರ್ಮಿಕರಿಗಿದೆ. ಮನೆಗಳನ್ನು ಖಾಲಿ‌ಮಾಡಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಾರೆ. ನಿತ್ಯ ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡು ಪ್ರಾಣಿಗಳಿಂದ ಕೊಡಗಿನ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ‌. ಒಂದು ಕಡೆ ಗಜ ಪಡೆಗಳ ಹಾವಳಿಯಾದರೆ ಮತ್ತೊಂದು ಕಡೆ ಇದೀಗ ನರ ಹಂತಕ ಹುಲಿ ಭಯ ದಕ್ಷಿಣ ಕೊಡಗಿನಲ್ಲಿ ಶುರುವಾಗಿದೆ‌. ನರ ಭಕ್ಷಕ ಹುಲಿಗೆ ಮತ್ತೊಂದು ಜೀವ ಬಲಿ‌ಯಾಗುವ ಮೊದಲು ಹುಲಿ ಸೆರೆ ಹಿಡಿಯಿರಿ ಎಂದು ಒತ್ತಾಯಿಸಿದ್ದರು.

ದಕ್ಷಿಣ ಕೊಡಗು ಭಾಗದಲ್ಲಿ ಮೇಲಿಂದ ಮೇಲೆ ಕಾಡು ಪ್ರಾಣಿಗಳ ದಾಳಿ ನಡೆಯುತ್ತಿದ್ದು ಇದರಿಂದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಸಾರ್ವಜನಿಕರು, ಶಾಲೆಗೆ ಹೋಗುವ ಮಕ್ಕಳು, ತೋಟಗಳಿಗೆ ತೆರಳಲು ಮಾಲೀಕರು ಸಹ ಭಯದಲ್ಲೇ ಓಡಾಡುವಂತಾಗಿದೆ.

ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ

Last Updated :Feb 14, 2023, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.