ETV Bharat / state

ಪ್ರಿಯಾಂಕ್ ಖರ್ಗೆಗೆ ಹ್ಯಾಟ್ರಿಕ್ ಗೆಲುವು: ಮಣಿಕಂಠ ರಾಠೋಡ್​ ವಿರುದ್ಧ 13,638 ಮತಗಳ ಅಂತರದ ಜಯ

author img

By

Published : May 13, 2023, 3:24 PM IST

Priyank Kharge wins against Manikanta Rathodin Chittapur Assembly Constituency
ಪ್ರಿಯಾಂಕ್ ಖರ್ಗೆಗೆ ಹ್ಯಾಟ್ರಿಕ್ ಗೆಲುವು: ಮಣಿಕಂಠ ರಾಠೋಡ ವಿರುದ್ಧ 13,638 ಮತಗಳ ಅಂತರದ ಜಯ

ಚಿತ್ತಾಪುರ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಮೂರನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರ (ಮೀಸಲು) ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಎದುರಾಳಿ ಮಣಿಕಂಠ ರಾಠೋಡ್​ ಅವರನ್ನು 13,638 ಮತಗಳ ಅಂತರದಿಂದ ಮಣಿಸಿದ್ದಾರೆ. ಪ್ರಿಯಾಂಕ್ ಖರ್ಗೆ 81,088 ಮತಗಳನ್ನು ಪಡೆದುಕೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಎರಡು ಬಾರಿ ಶಾಸಕರಾದವರು. ಮೊದಲನೇ ಬಾರಿ ಶಾಸಕರಾಗಿ ಆಯ್ಕೆ ಆದಾಗಲೇ ಸಚಿವರಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿದೆ. ಈಗ ಮೂರನೇ ಬಾರಿಗೆ ಗೆಲುವನ್ನು ಬರೆದಿದ್ದಾರೆ. ಕಲಬುರಗಿಯ 9 ಕ್ಷೇತ್ರಗಳಲ್ಲಿ 7 ಸ್ಥಾನವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

22 ನವೆಂಬರ್ 1978 ರಂದು ಕಲಬುರಗಿಯಲ್ಲಿ ತಾಯಿ ರಾಧಾಬಾಯಿ ತಂದೆ ಮಲ್ಲಿಕಾರ್ಜುನ ಖರ್ಗೆ ದಂಪತಿ ಪುತ್ರರಾಗಿ ಜನಿಸಿದ ಪ್ರಿಯಾಂಕ್ ಖರ್ಗೆ, ಮೂಲತಃ ಮಧ್ಯಮ ಕುಟುಂಬಕ್ಕೆ ಸೇರಿದವರು. ಸದ್ಯ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ, ತಾಯಿ ರಾಧಾಬಾಯಿ ಗೃಹಣಿ ಆಗಿದ್ದಾರೆ‌. ರಾಹುಲ್ ಖರ್ಗೆ ಮತ್ತು ಮಿಲಿಂದ್ ಖರ್ಗೆ ಇಬ್ಬರು ಸಹೋದರರಿದ್ದಾರೆ. ಪ್ರಿಯದರ್ಶಿನಿ ಮತ್ತು ಜಯಶ್ರೀ ಎಂಬ ಇಬ್ಬರು ಸಹೋದರಿಯರೂ ಇದ್ದಾರೆ. ಪ್ರಿಯಾಂಕ್ ಖರ್ಗೆ ಶೃತಿ ಅವರೊಂದಿಗೆ ಮದುವೆ ಆಗಿದ್ದು, ಅಮಿತಾಬ್ ಹಾಗೂ ಆಕಾಂಕ್ಷಾ ಎಂಬ ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಹೆಸರಿನಲ್ಲಿ 14.49 ಕೋಟಿ ಆಸ್ತಿ ಹೊಂದಿದ್ದಾರೆ‌. ಖರ್ಗೆ ಕುಟುಂಬದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಮಾತ್ರ ರಾಜಕೀಯ ಕ್ಷೇತ್ರದಲ್ಲಿದ್ದಾರೆ.

ಬಿಎ ಪದವೀಧರರಾದ ಪ್ರಿಯಾಂಕ್ ಖರ್ಗೆ, ಗ್ರಾಫಿಕ್ಸ್‌ ಅಂಡ್​ ಅನಿಮೇಷನ್ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿರುವಾಗಲೇ 1998ರಲ್ಲಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (NSUI) ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಮಾಡಿದ್ದು ಅವರ ವರ್ಚಸ್ಸಿಗೆ ಸಾಕ್ಷಿ. NSUI ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 2011 ರಿಂದ 2014ರವರೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪುತ್ರನಿಗೂ ಮುನ್ನ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡುತ್ತಿದ್ದರು. ಅವರು ಕಲಬುರಗಿ ಸಂಸದರಾಗಿ ರಾಷ್ಟ್ರ ರಾಜಕಾರಣಕ್ಕೆ ಹೋದ ಮೇಲೆ 2009 ರಲ್ಲಿ ನಡೆದ ಚಿತ್ತಾಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಬಯಸಿ ಪ್ರಿಯಾಂಕ್ ಖರ್ಗೆ ಅಖಾಡಕ್ಕೆ ಇಳಿದು ಮೊದಲನೇ ಬಾರಿಗೆ ಸೋಲು ಕಂಡಿದ್ದರು. ಅಂದು ಬಿಜೆಪಿಯ ವಾಲ್ಮಿಕಿ ನಾಯಕ್, ಖರ್ಗೆ ವಿರುದ್ಧ 1606 ಮತಗಳಿಂದ ಗೆಲುವು ಸಾಧಿಸಿದ್ದರು.

2013 ರಲ್ಲಿ ವಾಲ್ಮಿಕಿ ನಾಯಕ ವಿರುದ್ಧ 31209 ಮತಗಳಿಗೆ ಭರ್ಜರಿ ಗೆಲವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದರು. ಪ್ರಥಮ ಬಾರಿಗೆ ಶಾಸಕರಾದವರು, 2016 ರಲ್ಲಿ ಸಚಿವರಾಗಿ ನೇಮಕವಾದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಜುಲೈ 2016 ರಿಂದ ಏಪ್ರಿಲ್ 2018ರ ವರೆಗೂ ಸೇವೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದ ಅತ್ಯಂತ ಕಿರಿಯ ವಯಸ್ಸಿನ ಸಚಿವರು ಎಂಬ ಹೆಗ್ಗಳಿಕೆಗೆ ಪ್ರಿಯಾಂಕ್​ ಖರ್ಗೆ ಪಾತ್ರರಾಗಿದ್ದರು.

2018 ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ವಾಲ್ಮಿಕಿ ನಾಯಕ ವಿರುದ್ಧ 4,393 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. 8 ಜೂನ್ 2018 ರಿಂದ 23 ಜುಲೈ 2019ರವರೆಗೆ ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಮಯ ಸಿಕ್ಕಾಗಲೆಲ್ಲ ತಮ್ಮ ಮಾತಿನ ಚಾತುರ್ಯತೆಯಿಂದ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಪಿಎಸ್ಐ ಸೇರಿ ಇತರ ಇಲಾಖೆ ಪರೀಕ್ಷಾ ಹಗರಣಗಳನ್ನು ಬಯಲಿಗೆ ತರುವಲ್ಲಿ ಪ್ರಿಯಾಂಕ್ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಪಿಸಿಸಿ ವಕ್ತಾರರಾಗಿಯೂ ಅವರು ಕೆಲಸ ಮಾಡಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಡಿಕೆಶಿ​ಗೆ 8ನೇ ಗೆಲುವು: ಆರ್.ಅಶೋಕ್​ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ​ಭೇರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.