ETV Bharat / state

ಕಲಬುರಗಿ - ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರಾಗಿ ಸೋಮಶೇಖರ್ ಗೋನಾಯಕ್‌ ಅವಿರೋಧ ಆಯ್ಕೆ‌

author img

By

Published : Aug 19, 2023, 7:55 AM IST

Updated : Aug 19, 2023, 8:58 AM IST

ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರಾಗಿ ಸೋಮಶೇಖರ್ ಗೋನಾಯಕ್‌
ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರಾಗಿ ಸೋಮಶೇಖರ್ ಗೋನಾಯಕ್‌

Kalaburagi - Yadagiri DCC Bank Chairman elected: ಕಲಬುರಗಿ - ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗೆ ಸೋಮಶೇಖರ್ ಗೋನಾಯಕ್‌ ಅಧ್ಯಕ್ಷರಾಗಿ ಅವಿರೋಧ ಆಯ್ಕೆ‌ ಆಗಿದ್ದಾರೆ.

ಕಲಬುರಗಿ - ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರಾಗಿ ಸೋಮಶೇಖರ್ ಗೋನಾಯಕ್‌ ಅವಿರೋಧ ಆಯ್ಕೆ‌

ಕಲಬುರಗಿ: ಕಲಬುರಗಿ - ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್​ಗೆ ನೀರಿಕ್ಷೆಯಂತೆ ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ‌ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಆಪ್ತವಲಯದ ಸೋಮಶೇಖರ್ ಗೋನಾಯಕ್‌ ಅವಿರೋಧ ಆಯ್ಕೆ‌ ಆಗಿದ್ದಾರೆ. ನಾಲ್ಕು ಬಾರಿ ನಿರ್ದೇಶಕರಾಗಿ ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸೋಮಶೇಖರ ಗೋನಾಯಕ್ ಇದೀಗ ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಸಾರಥಿ ಆಗಿದ್ದಾರೆ.

ಇದರೊಂದಿಗೆ ಡಿಸಿಸಿ ಬ್ಯಾಂಕ್‌ ಅನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಹಿಡಿತಕ್ಕೆ ಪಡೆಯುವಲ್ಲಿ ಸಫಲಗೊಂಡಿದೆ. ಮುಂದಿನ ಮೂರು ವರ್ಷಗಳ ಕಾಲ ಗೋನಾಯಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬ್ಯಾಂಕ್‌ನ 13 ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ನಿರ್ದೇಶಕ, 1 ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರ ಸಂಘಗಳ ಉಪ ನಿಬಂಧಕರು ಸೇರಿ ಒಟ್ಟು 16 ಜನ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.

ಇದರಲ್ಲಿ 9 ಜನ ಕಾಂಗ್ರೆಸ್ ಬೆಂಬಲಿತ‌ ಹಾಗೂ 4 ಜನ ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದಾರೆ. ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರು, 1 ನಾಮನಿರ್ದೇಶಿತ, 1 ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರ ಸಂಘಗಳ ಉಪ ನಿಬಂಧಕರು ಸೇರಿ ಒಟ್ಟು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಬಲ್ಲ 12 ಮತಗಳಿದ್ದವು. ಆದರೆ, ಬಿಜೆಪಿ ಬೆಂಬಲಿತ 4 ಮತಗಳು ಮಾತ್ರ ಇದ್ದವು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೋನಾಯಕ್ ಹೊರತು ಪಡೆಸಿ ಮತ್ಯಾರು ನಾಮಪತ್ರ ಸಲ್ಲಿಸಿರಲಿಲ್ಲ.

ಕಲಬುರಗಿಯ ಜಗತ್ ವೃತ್ತದ ಬಳಿ‌ ಇರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಡೆದು, ನಿಗದಿತ ಸಮಯ ಮುಗಿಯುವವರೆಗೂ ಗೋನಾಯಕ್ ಹೊರೆತು ಪಡಿಸಿ ಮತ್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ನಾಮಪತ್ರ ಅಂಗೀಕರಿಸಿ ಸೋಮಶೇಖರ ಗೋನಾಯಕ್ ಅವರನ್ನೇ ಅವರೋಧ ಆಯ್ಕೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತೆ ಮಮತಾಕುಮಾರಿ ಘೋಷಣೆ ಮಾಡಿದರು.

ಸೋಮಶೇಖರ ಗೋನಾಯಕ್ ಆಯ್ಕೆ ಘೋಷಣೆ ಆಗ್ತಿದ್ದಂತೆ ಅವರ ಬೆಂಬಲಿಗರು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಕುಣಿದು ಸಂಭ್ರಮಿಸಿದರು. ಇನ್ನು ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ಶಹಾಪುರ ತಾಲೂಕಿನ ಸಿರವಾರದ ಮೊಹಮ್ಮದ್‌ ಇಬ್ರಾಹಿಂ ಅವರನ್ನು ಅಧಿಕಾರೇತರ ಸದಸ್ಯರು ಎಂದು ನಾಮ ನಿರ್ದೇಶನ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಸೇಡಂನಿಂದ ರಾಜಕುಮಾರ ಪಾಟೀಲ್ ಅವರಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಶಂಕರ ಭೂಪಾಲ ಪಾಟೀಲ್‌ ಕಾನಗಡ್ಡಾ ಅವರನ್ನು ನೇಮಿಸಲಾಗಿದೆ.

ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್‌ ಸಭೆ: ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಹಿಡಿಯುವ ಸ್ಪಷ್ಟ ಬಹುಮತ ಇರುವ ಕಾರಣಕ್ಕೆ ನಿನ್ನೆಯೇ ಕಾಂಗ್ರೆಸ್ ಮುಖಂಡರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಯಾರಾಗಬೇಕು ಎನ್ನುವ ಕುರಿತು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ನಡೆಸಿದ್ದರು. ಸಚಿವ ಶರಣಬಸಪ್ಪ ದರ್ಶನಾಪುರ ಅವರ ಅಧ್ಯಕ್ಷತೆಯಲ್ಲಿ, ಎಂಎಲ್‌ಸಿ ಹಾಗೂ ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಒಳಗೊಂಡಂತೆ ಪ್ರಮುಖ‌ರು‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದವರನ್ನು ಗಮನಕ್ಕೆ ಪಡೆದು ಸುದೀರ್ಘ ಚರ್ಚೆ ನಡೆಸಿ ಕಡೆಗೆ ಕಳೆದ ಬಾರಿ ಉತ್ತಮ‌ ಆಡಳಿತ ನೀಡಿದ ಹಾಗೂ ಹೈಕಮಾಂಡ್​ ಸೂಚನೆಯಂತೆ ಸೋಮಶೇಖರ್ ಗೋನಾಯಕ ಅವರನ್ನು ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಡಾ.ಅಜಯ್ ಸಿಂಗ್ ಅಧಿಕಾರ ಸ್ವೀಕಾರ: ಮಂಡಳಿಗೆ ಅಜಯಸಿಂಗ್ ಸುಪ್ರೀಂ- ಪ್ರಿಯಾಂಕ್ ಖರ್ಗೆ

Last Updated :Aug 19, 2023, 8:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.