ETV Bharat / state

ಗುಲಬರ್ಗಾ ವಿವಿ 41ನೇ ಘಟಿಕೋತ್ಸವ: 14 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ರುಕ್ಮಿಣಿ!

author img

By

Published : Jun 19, 2023, 10:25 PM IST

Etv Bharatgulabarga-university-41st-convocation-held-today-in-kalaburagi
ಗುಲಬರ್ಗಾ ವಿವಿ 41ನೇ ಘಟಿಕೋತ್ಸವ: 14 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ರುಕ್ಮಿಣಿ

ಖಾಸಗಿ ವಿವಿಗಳ ಸ್ಪರ್ಧೆಯನ್ನು ನಮ್ಮ ವಿಶ್ವವಿದ್ಯಾಲಯಗಳು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಲಹೆ ನೀಡಿದರು.

ಕಲಬುರಗಿ: ಗುಲಬರ್ಗಾ ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂ.ಎ ಕನ್ನಡ ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿವಿಯಲ್ಲಿಯೇ ಅತೀ ಹೆಚ್ಚು ಚಿನ್ನದ ಪದಕ ಪಡೆದ ಕೀರ್ತಿಗೆ ಪಾತ್ರರಾದರು.

ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ರುಕ್ಮಿಣಿ, "ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತ್ತು ತಂದೆ-ತಾಯಿ ಹಾಗೂ ಕುಟುಂಬಸ್ಥರ ಸಹಕಾರವೇ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ನನ್ನ ನೆರವಿಗೆ ಬಂತು" ಎಂದರು. "ಬಿ.ಎಡ್. ಕೂಡಾ ಮಾಡಿದ್ದರಿಂದ ಈಗಾಗಲೇ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೇ ನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವೆ" ಎಂದು ಸಂತಸ ವ್ಯಕ್ತಪಡಿಸಿದರು.

ಮಗಳ ಈ ಸಾಧನೆ ಕಂಡು ತಂದೆ ಹಣಮಂತ್ರಾಯ ಭಾವುಕರಾದರು. ನಂತರ ಮಾತನಾಡಿ, "ನಾನು 3ನೇ ತರಗತಿಯವರೆಗೆ ಓದಿದ್ದೇನೆ. ನನಗೆ 4 ಜನ ಹೆಣ್ಮಕ್ಳು, ಒಬ್ಬ ಹುಡುಗ ಇದ್ದಾನೆ. ರುಕ್ಮಿಣಿ ಕೊನೆಯವಳು. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್ ಆಗಿ ಎರಡು ವರ್ಷದ ಹಿಂದೆ ರಿಟೈರ್‍ಮೆಂಟ್ ಆಗಿದ್ದೀನಿ. ಮಗಳು ಚೆನ್ನಾಗಿ ಓದಿದ್ದಾಳೆ" ಎಂದು ಖುಷಿಪಟ್ಟರು.

gulabarga-university-41st-convocation-held-today-in-kalaburagi
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮೂವರಿಗೆ ಗೌರವ ಡಾಕ್ಟರೇಟ್: ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ವಿದ್ಯಾರ್ಥಿಗಳಿಗೆ ಪದವಿ ಘೋಷಿಸಲಾಯಿತು. 129 ಅಭ್ಯರ್ಥಿಗಳಿಗೆ ಪಿಹೆಚ್​ಡಿ ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ, 23 ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕವನ್ನು ನಗದು ಬಹುಮಾನಕ್ಕೆ ಪರಿವರ್ತಿಸಿ ವಿತರಿಸಲಾಯಿತು.

gulabarga-university-41st-convocation-held-today-in-kalaburagi
ಚಿನ್ನದ ಪದಕ ಸ್ವೀಕರಿಸಿದ ವಿದ್ಯಾರ್ಥಿನಿಯರು

ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ್​ ಮೂಲದ ಆದಿತಿ ರೆಡ್ಡಿ ಮಾತನಾಡಿ, ಪಿಹೆಚ್​ಡಿ ಮಾಡುವುದಾಗಿ ತಿಳಿಸಿದರು. ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಸುರಪೂರ ಮೂಲದ ಬಿ.ರಾಜಶ್ರೀ ಮಾತನಾಡಿ, ತಮ್ಮ ಈ ಸಾಧನೆಗೆ ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುವೆ. ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ ಎಂದರು.

ಘಟಿಕೋತ್ಸವದಲ್ಲಿ ಭಾಗವಹಿಸಿದ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾಗಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಮಾತನಾಡಿ, "ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ತಾವು ಬದ್ಧರಾಗಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು. ತಾವು ಸಚಿವರಾದ ನಂತರ ಪ್ರಥಮ ಬಾರಿಗೆ ವಿವಿಯ ಘಟಿಕೋತ್ಸವದಲ್ಲಿ ಭಾಗವಹಿಸುವುತ್ತಿರುವುದು ತಮಗೆ ಹೆಮ್ಮೆ ಎನಿಸುತ್ತಿದೆ. ಈ ಭಾಗದ ಶಿಕ್ಷಣ ಪ್ರಗತಿಗೆ 371ಜೆ ಮೀಸಲಾತಿ ಪೂರಕವಾಗಿದೆ" ಎಂದು ಹೇಳಿದರು.

"ಗುಲಬರ್ಗಾ ವಿವಿ ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ ಹೆಜ್ಜೆ ಇಡುತ್ತಿದೆ. ಇತ್ತೀಚೆಗೆ ಖಾಸಗಿ ವಿವಿಗಳು ಶಿಕ್ಷಣದಲ್ಲಿ ಸ್ಪರ್ಧೆ ನೀಡುತ್ತಿದ್ದು, ಅದನ್ನು ನಮ್ಮ ವಿಶ್ವವಿದ್ಯಾಲಯಗಳು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು" ಎಂದು ಸಲಹೆ ನೀಡಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಗುಲಬರ್ಗಾ ವಿವಿ ಕುಲಪತಿ ಪ್ರೊ ದಯಾನಂದ ಅಗಸರ್, ಕುಲಸಚಿವ ಡಾ.ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ಧಮ್ಮಪ್ರಕಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: 5,000 ಮಹಿಳೆಯರಿಂದ ಅಂಗಾಂಗ ದಾನಕ್ಕೆ ನಿರ್ಧಾರ: ಸ್ವಾತಂತ್ರ್ಯೋತ್ಸವದಂದು ಒಪ್ಪಿಗೆ ಪತ್ರ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.