ಹಾವೇರಿ: ಜಿಲ್ಲೆಯ ರೈತರಿಗೆ ವರದಾನವಾಗಬೇಕಿದ್ದ ತುಂಗಭದ್ರಾ ಮೇಲ್ದಂಡೆ ಯೋಜನೆ ಇದೀಗ ಶಾಪವಾಗಿ ಪರಿಣಮಿಸಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ತುಂಗಭದ್ರಾ ಮೇಲ್ಡಂಡೆ ಯೋಜನೆಯ ಕಾಲುವೆ ಹಾದು ಹೋಗಿದೆ. ಮುಖ್ಯಕಾಲುವೆ, ಉಪಕಾಲುವೆ ಸೇರಿದಂತೆ ಸಣ್ಣ ಕಾಲುವೆಗಳು ಇದೀಗ ಕಸಕಡ್ಡಿಗಳಿಂದ ತುಂಬಿವೆ. ಕಾಲುವೆಯೊಳಗೆ ಮುಳ್ಳು-ಗಿಡಗಂಟೆ ಬೆಳೆದಿದ್ದು, ಅದು ಬಿರುಕು ಬಿಟ್ಟಿದೆ.
ಪ್ರತಿವರ್ಷ ಈ ಕಾಲುವೆ ಸ್ವಚ್ಚಗೊಳಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಕಾಲುವೆಗಳು ಮಾತ್ರ ಎಂದಿನಂತಿವೆ. ಮಳೆಗಾಲ ಆರಂಭವಾಗಿ ತುಂಗಭದ್ರಾ ಜಲಾಶಯ ನೀರು ಭರ್ತಿಯಾಗುತ್ತಿದ್ದಂತೆ ಕಾಲುವೆಗೆ ನೀರು ಹರಿಸಲಾಗುತ್ತದೆ. ಆದರೆ ಕಾಲುವೆಯಲ್ಲಿ ಗಿಡಗಳು ಇರುವ ಪರಿಣಾಮ ನೀರು ಸಲೀಸಾಗಿ ಮುಂದೆ ಹರಿಯುವುದಿಲ್ಲ. ಇದರಿಂದ ನೀರು ರೈತರ ಜಮೀನುಗಳಿಗೆ ನುಗ್ಗಿ, ಇದ್ದ ಬೆಳೆಯನ್ನು ಹಾಳು ಮಾಡುತ್ತಿದೆ. ಜಿಲ್ಲೆಯ ಹಲವು ಕಡೆ ಕಾಲುವೆ ಒಡೆದು ರೈತರ ಸಾವಿರಾರು ಎಕರೆ ಬೆಳೆ ಹಾಳಾಗುತ್ತದೆ.
ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ,ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರೈತರು. ಕಳೆದ ಮೂರು ವರ್ಷಗಳಿಂದ ಕಾಲುವೆಯಲ್ಲಿ ಕಸಕಡ್ಡಿ, ಮುಳ್ಳು, ಗಿಡಗಂಟೆ ಬೆಳೆದುನಿಂತಿದ್ದು ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ. ಆದರೆ ಪ್ರತಿವರ್ಷ ಇದಕ್ಕೆ ಬಿಡುಗಡೆಯಾದ ಹಣ ಮಾತ್ರ ನೀರಿನಂತೆ ಖರ್ಚಾಗುತ್ತಿದೆ ಎನ್ನುತ್ತಾರೆ ರೈತರು. ಇನ್ನು ಯುಟಿಪಿ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ಸಹ ಸಿಕ್ಕಿಲ್ಲವಂತೆ.
ಇದನ್ನೂ ಓದಿ: ನಾಟಿ ಮಾಡಿ ನಾಲ್ಕು ತಿಂಗಳು ಕಳೆದರೂ ತೆನೆ ಕಟ್ಟದ ಭತ್ತ.. ಸಂಕಷ್ಟಕ್ಕೆ ಸಿಲುಕಿದ ಅನ್ನದಾತ