ಶಿವಮೊಗ್ಗ: ಕಳಪೆ ಭತ್ತದ ಬೀಜದಿಂದ ರೈತ ನಷ್ಟಕ್ಕೀಡಾಗಿರುವ ಘಟನೆ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಂಗೋಟೆ ಗ್ರಾಮದ ಬಡ ರೈತ ಗಡ್ಲಪ್ಪ ಎಂಬಾತ ಗುತ್ತಿಗೆ ಪಡೆದ ಒಂದು ಎಕರೆ ಭೂಮಿಯಲ್ಲಿ ಬೇಸಿಗೆ ಬೆಳೆ ಬೆಳೆದಿದ್ದರು. ಆದರೆ ಭತ್ತ ಈವರೆಗೂ ಕಾಳು ಕಟ್ಟದೇ ಕೇವಲ ಹುಲ್ಲು ಮಾತ್ರ ಬೆಳೆದಿದೆ. ಇದರಿಂದ ಭತ್ತ ಬೆಳೆದ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಗಡ್ಲಪ್ಪ ತಮ್ಮ ಗ್ರಾಮದವರ ಒಂದು ಎಕರೆ ಭೂಮಿಯನ್ನು ಗುತ್ತಿಗೆ ಮೇಲೆ ಪಡೆದು ಭತ್ತವನ್ನು ಬೆಳೆದಿದ್ದರು. ಗಡ್ಲಪ್ಪ ಆನವೇರಿಯ ರೇಣುಕಾಂಬ ಟ್ರೇಡರ್ಸ್ ನಿಂದ ಖಾಸಗಿ ಕಂಪನಿಯೊಂದರ ಬೀಜ ಖರೀದಿಸಿದ್ದರು. ಭತ್ತ ನಾಟಿ ಮಾಡಿ ನಾಲ್ಕೈದು ತಿಂಗಳು ಕಳೆದರೂ ಸಹ ಭತ್ತದ ತೆನೆ ಬಂದಿಲ್ಲ. ಭತ್ತದ ಬೀಜ ಖರೀದಿಸಿದ ರೇಣುಕಾ ಟ್ರೇಡರ್ಸ್ ಮಾಲೀಕರ ಬಳಿ ಹೋಗಿ ವಿಚಾರಿಸಿದಾಗ, ಹವಾಮಾನ ವೈಪರಿತ್ಯದಿಂದ ಹೀಗಾಗಿದೆ ಎಂದು ಹೇಳಿ ಕಳುಹಿಸಿದ್ದಾರಂತೆ. ಗಡ್ಲಪ್ಪ ನಾಟಿ ಮಾಡಿದಾಗಿನಿಂದ ಗೊಬ್ಬರ, ಔಷಧ ಎಲ್ಲವನ್ನು ಕಾಲ ಕಾಲಕ್ಕೆ ಸಿಂಪಡಣೆ ಮಾಡಿದ್ರೂ ಸಹ ಭತ್ತ ಕೈಕೊಟ್ಟಿದೆಯಂತೆ.
ಇದನ್ನೂ ಓದಿ: ಮುಂಗಾರು ಜೋರಾಗಿ ಭೂಮಿ ಹಸನಾದರೂ ಬಿತ್ತನೆಗೆ ಸಿಗದ ರಸಗೊಬ್ಬರ, ರೈತರ ಪರದಾಟ
ಗುತ್ತಿಗೆ ಪಡೆದ ಜಮೀನಿನ ಮಾಲೀಕರಿಗೆ ಹಣ ನೀಡಬೇಕು, ಜೊತೆಗೆ ನಮ್ಮ ಹೊಟ್ಟೆಪಾಡಿಗೂ ಹಣ ಬೇಕು. ಆದಾಯದ ಮೂಲವಾಗಿದ್ದ ಭತ್ತ ಕೈಗೆ ಸಿಗದೇ ಮುಂದೇನು ಎಂಬ ಚಿಂತೆ ಈ ರೈತನದ್ದು. ಸಂಬಂಧಪಟ್ಟ ಅಧಿಕಾರಿಗಳು ರೈತ ಗಡ್ಲಪ್ಪ ಅವರ ನೆರವಿಗೆ ಬರಬೇಕಿದೆ.