ETV Bharat / state

ಮೂರ್ತಿಗಳ ಸ್ಥಾಪನೆ ಪ್ರತಿಷ್ಠೆಯಾಗಬಾರದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

author img

By ETV Bharat Karnataka Team

Published : Oct 30, 2023, 10:46 AM IST

ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೂರ್ತಿಗಳ ಸ್ಥಾಪನೆ ಪ್ರತಿಷ್ಠೆಯಾಗಬಾರದು ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ಹಾವೇರಿ: ಮೂರ್ತಿಗಳ ಸ್ಥಾಪನೆ ಪ್ರತಿಷ್ಠೆಯಾಗಬಾರದು ಇನ್ನೊಂದು ಧರ್ಮದವರಿಗೆ ನೋವಾಗಬಾರದು ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಭಾನುವಾರ ಕಿತ್ತೂರು ರಾಣೆ ಚೆನ್ನಮ್ಮ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಇನ್ನೊಂದು ಧರ್ಮದವರಿಗೆ ನೋವಾಗದಂತೆ ದಾರ್ಶನಿಕರ ಮೂರ್ತಿ ಪ್ರತಿಷ್ಠಾಪನೆ ಮಾಡುವುದರಲ್ಲಿ ತಪ್ಪೇನಿಲ್ಲ. ಮೂರ್ತಿಗಳ ಪ್ರತಿಷ್ಠಾಪನೆ ಯಾವುದೇ ಕಾರಣಕ್ಕೂ ಸಮುದಾಯಗಳ ನಡುವೆ ಬಿರುಕು ಉಂಟುಮಾಡಬಾರದು ಬದಲಿಗೆ ಸಮುದಾಯಗಳ ಬೆಸೆಯುವ ಕೆಲಸವಾಗಬೇಕು ಎಂದು ಶ್ರೀಗಳು ತಿಳಿಸಿದರು. ಬಳಿಕ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬದಲಿಯಾಗಿದೆ 2ಎ ಹೋರಾಟ ನಿಂತಿದೆ ಎಂದು ತಪ್ಪು ಅರ್ಥಮಾಡಿಕೊಳ್ಳಬಾರದು.

ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ನಮ್ಮ ಸಮಾಜದವರೇ ಸಿಎಂ ಆಗಿದ್ದರೂ ನಾನು ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲು ಹೋರಾಟ ಮಾಡುತ್ತೇನೆ. ಈ ರೀತಿ ಪ್ರತಿಜ್ಞೆ ಮಾಡಿಯೇ ನಾನು ಹೋರಾಟಕ್ಕೆ ದುಮುಕಿದ್ದೇನೆ ಎಂದು ಶ್ರೀಗಳು ತಿಳಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ಕುರಿತಂತೆ ದ್ವನಿ ಎತ್ತುವಂತೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆಗೆ ಇದೇ ವೇಳೆ ತಿಳಿಸಿದರು. ಮಾನೆ ಅವರು 2ಎ ಗೆ ದ್ವನಿ ಎತ್ತಿದ್ದರೆ, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠರ ಮೀಸಲಾತಿ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ತಮಗೆ ಜನ್ಮನೀಡಿದ ಹಾಲುಮತ ಸಮಾಜವನ್ನ ಎಸ್ಟಿಗೆ ಸೇರಿಸಲು ಮುಂದಾಗಿರುವುದು ಸಂತಸದ ವಿಷಯ. ಡಿ.ಕೆ.ಶಿವಕುಮಾರ್ ಸಹ ಕುಂಚಿಟಿಗ ಸಮಾಜಕ್ಕೆ ಮೀಸಲಾತಿ ನೀಡುವ ಕುರಿತಂತೆ ಹೋರಾಟ ಮಾಡಿದರು. ಒಂದು ಕಾಲದಲ್ಲಿ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳು ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಲು ಅಂಜುತ್ತಿದ್ದರು. ಆದರೆ ಈಗ ಆ ಸನ್ನಿವೇಶ ಇಲ್ಲ ಯಾರು ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೊ, ಅವರನ್ನ ಸಮಾಜ ಅಪ್ಪಿಕೊಳ್ಳುತ್ತದೆ. ಈ ಹಿಂದೆ ಹೋರಾಟ ಮಾಡಿದಾಗ 2ಡಿ ಮೀಸಲಾತಿ ಸಿಕ್ಕಿತ್ತು. ಅದು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಯಿಂದ ತಮಗೆ 2ಡಿ ಮೀಸಲಾತಿ ಸಿಕ್ಕಿತ್ತು. ಆದರೆ ಇಂಪ್ಲಿಮೆಂಟ ಆಗಲಿಲ್ಲ. ಸಿಎಂ ಸಿದ್ದರಾಮಯ್ಯ ತಮಗೆ ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೂ ಸಹ ಮೀಸಲಾತಿ ಸಿಗದ ಕಾರಣ ಹೋರಾಟ ನಡೆಸುತ್ತಿರುವುದಾಗಿ ಶ್ರೀಗಳು ತಿಳಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾವೇರಿ ಅಥವಾ ಧಾರವಾಡ ಜಿಲ್ಲೆಯಲ್ಲಿದ್ದರೆ ಇನ್ನಷ್ಟು ಉನ್ನತ ಸ್ಥಾನಕ್ಕೆ ಹೋಗುತ್ತಿದ್ದರು. ಯಾವುದೇ ಶಾಸಕರು ಒಂದು ಸಮುದಾಯದ ಮತದಿಂದ ವಿಜಯ ಸಾಧಿಸುವುದಿಲ್ಲ. ಬದಲಿಗೆ ಎಲ್ಲ ಸಮುದಾಯದವರು ಮತಗಳಿಂದ ಜಯಗಳಿಸಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​, ಪಂಚಮಸಾಲಿಗಳು ಬಹಳ ಮುಗ್ದರು 2ಎಗೆ ಎಷ್ಟೆಲ್ಲ ಹೋರಾಟ ಮಾಡಿದ್ದೇವೆ. ಪಂಚಮಸಾಲಿಗಳಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ, ಕೂಲಿ ಕೆಲಸ ಮಾಡವವರಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಭರವಸೆ ನೀಡಿದ್ದೇವೆ ಅದನ್ನ ಈಡೇರಿಸಲು ಕಟಿಬದ್ದವಾಗಿದ್ದೇವೆ ಎಂದು ಸಚಿವೆ ವೇದಿಕೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ಉತ್ತರಕನ್ನಡದಲ್ಲಿ ಕೈ ನಾಯಕರಿಂದ ಲೋಕಸಭಾ ಪೂರ್ವಭಾವಿ ಸಭೆ : ಜಿಲ್ಲಾ ಉಸ್ತುವಾರಿ ಸಚಿವರೇ ಸಭೆಗೆ ಗೈರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.