ಹಾಸನ: ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ನಾಗರಿಕರಿಗೆ ಮತ್ತು ಅಲ್ಲಿನ ಮಕ್ಕಳಿಗೆ ರೋಗಲಕ್ಷಣಗಳು ಬಹುಬೇಗ ಹರಡುತ್ತವೆ. ಈ ನಿಟ್ಟಿನಲ್ಲಿ ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕ ಆಹಾರ ಮತ್ತು ಕೊರೊನಾ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊರತೆಯಾಗದಂತೆ ಸಿಡಿಪಿಓ ಕಚೇರಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಈಗಾಗಲೇ 85,468 ಮಕ್ಕಳು ದಾಖಲಾಗಿದ್ದು, ಇದರಲ್ಲಿ ಅಂಗನವಾಡಿಯಲ್ಲಿ ಸುಮಾರು 20,155 ಮಕ್ಕಳು ದಾಖಲಾಗಿರುವುದು ವಿಶೇಷ.
7 ತಿಂಗಳಿಂದ ಅಂಗನವಾಡಿ ಬಾಗಿಲು ತೆರೆಯದ ಹಿನ್ನೆಲೆ 15 ದಿನಕ್ಕೆ ಒಮ್ಮೆ ಬಾಲವಿಕಾಸ ಸಮಿತಿ ಅಡಿ ಮತ್ತು ಮಾತೃಪೂರ್ಣ ಯೋಜನೆ ಅಡಿ 6 ತಿಂಗಳ ಮಗುವಿನಿಂದ ಹಿಡಿದು 3 ವರ್ಷದ ಮಗುವಿನ ತನಕ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಅಲ್ಲದೇ 3ರಿಂದ 6 ವರ್ಷದ ಮಕ್ಕಳಿಗೆ ಪ್ರತಿ ಮನೆಗೆ ಇಲಾಖೆಯಿಂದ 15 ದಿನಕ್ಕೊಮ್ಮೆ ಆಹಾರದ ಕಿಟ್ಗಳನ್ನು ನೀಡುವುದರ ಜೊತೆಗೆ ಮೊಟ್ಟೆ ಕೂಡ ನೀಡಲಾಗುತ್ತಿತ್ತು. ಅಂಗನವಾಡಿ ತೆರೆಯಲು ಅವಕಾಶ ಇಲ್ಲದಿರುವ ಕಾರಣ ಇಂತಹ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಿತ್ತು.
ಕೊಳಗೇರಿ ಪ್ರದೇಶದಲ್ಲಿ ಇರುವ ಅಂಗನವಾಡಿ ಮಕ್ಕಳಿಗೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಮತ್ತು ಬಾಲ ವಿಕಾಸ ಸಮಿತಿ ಅಡಿಯಲ್ಲಿಯೇ ವಿಶೇಷ ತಂಡವನ್ನು ರಚಿಸುವ ಮೂಲಕ ಅವರ ಮನೆಗೂ ಕೂಡ ಟೇಕ್ ಹೋಂ ರೇಷನ್ (THR) ಅಡಿಯಲ್ಲಿಯೇ ಅಂಗನವಾಡಿಯಿಂದ ನೀಡಲಾಗುತ್ತಿರುವ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಗರ್ಭಿಣಿ ಮತ್ತು ಮಕ್ಕಳಲ್ಲಿ ಕೊರೊನಾ ಹರಡದಂತೆ ನಮ್ಮ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಪ್ರತಿ 15 ದಿನಕ್ಕೊಮ್ಮೆ ತಪಾಸಣೆಗೆ ಒಳಪಡಿಸುತ್ತಿದ್ದರು. ಹೀಗಾಗಿ ಹಾಸನದಲ್ಲಿ ಮಕ್ಕಳ ಹಾಗೂ ಗರ್ಭಿಣಿಯರ ನಡುವೆ ಸಂಪರ್ಕ ಸೇತುವೆಯಾಗಿ ಅಂಗನವಾಡಿ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶದಂತೆ ಕೆಲಸ ಮಾಡಿ ಕೊರೊನಾ ತಡೆಗಟ್ಟಲು ಪ್ರಮುಖ ಪಾತ್ರವಹಿಸಿದ್ದಾರೆ.