ಹಾಸನ: ದೇಶವನ್ನು ವಿಭಜನೆ ಮಾಡಿದ್ದ ಕಾಂಗ್ರೆಸ್ನ ಪಾಪದ ಕೊಡ ತುಂಬಿದೆ. ಹಾಗಾಗಿ ಪಾಪದ ಕೈಯನ್ನು ತೊಳೆದುಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಯಾತ್ರೆ ಬದಲಿಗೆ ಕಾಂಗ್ರೆಸ್ ಜೋಡೋ ಮಾಡುವ ಅವಶ್ಯಕತೆ ಇದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಅವರ ಆಂತರಿಕ ಜಗಳ ಬೀದಿಗೆ ಬಂದಿದೆ. ಕಾಂಗ್ರೆಸ್ ನಲ್ಲಿರುವ ಪ್ರಮುಖ ನಾಯಕರುಗಳು ಪಕ್ಷ ತೊರೆಯುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಕೂರಲು ಕಾಂಗ್ರೆಸ್ಗೆ ಯೋಗ್ಯತೆ ಇಲ್ಲದೆ ನಾಲಾಯಕ್ ಅನ್ನೋ ಸ್ಥಿತಿಗೆ ಬಂದು ತಲುಪಿದೆ. ಪಕ್ಷವನ್ನು ಸ್ಥಿರ ಮಾಡುವ ಬದಲು ರಾಹುಲ್ ಗಾಂಧಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡು ತುಂಡಾಗಿದೆ. ಮೊದಲಿಗೆ ಭಾರತ್ ಜೋಡೋ ಬದಲಿಗೆ ಕಾಂಗ್ರೆಸ್ ಜೋಡೋ ಆಗಲಿ ಎಂದು ಹೇಳಿದರು.
ಇನ್ನು, ಸಿದ್ದರಾಮಯ್ಯ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಆಸಕ್ತಿ ಕಳೆದುಕೊಂಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೋದಲ್ಲೆಲ್ಲಾ ಕಾರ್ಯಕರ್ತರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಅವರ ಹೇಳಿಕೆಗಳು ಆಂತರಿಕ ಗೊಂದಲವನ್ನು ಸೃಷ್ಟಿಸುತ್ತಿವೆ. ಇದರ ಜೊತೆ ಐಟಿ ನೋಟಿಸ್, ಭ್ರಷ್ಟಾಚಾರದಿಂದ ಯಾರು ಯಾವಾಗ ಜೈಲಿಗೆ ಹೋಗ್ತಾರೋ ಅನ್ನೋ ಆತಂಕ ಇದೆ. ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ಗೆ ಲಾಭವಿಲ್ಲ, ಬಿಜೆಪಿಗೆ ನಷ್ಟವು ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಅವಧಿಯದ್ದೂ ಸೇರಿಸಿ ಎಲ್ಲ ನೇಮಕಾತಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ