ನಮ್ಮ ಅವಧಿಯದ್ದೂ ಸೇರಿಸಿ ಎಲ್ಲ ನೇಮಕಾತಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ

author img

By

Published : Sep 21, 2022, 8:54 AM IST

KN_BNG_

ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲೇನು ಕಾರಣ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿಗಳೂ ಸೇರಿದಂತೆ ಈವರೆಗಿನ ಎಲ್ಲ ನೇಮಕಾತಿಗಳ ಬಗ್ಗೆ ಹೈಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿಧಾನಸಬೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಡಿಜಿಪಿ ಅಮೃತ್ ಪೌಲ್ ಮೇಲೆ ಮಂಪರು ಪರೀಕ್ಷೆ ಏಕೆ ಮಾಡಬಾರದು?, ಐಪಿಸಿ ಸೆಕ್ಷನ್ 164ರಡಿ ಅವರ ಹೇಳಿಕೆಯನ್ನು ಏಕೆ ರೆಕಾರ್ಡ್ ಮಾಡಿಲ್ಲ? ಖಾಲಿ ಉತ್ತರ ಪತ್ರಿಕೆ ತುಂಬಲು ಎಡಿಜಿಪಿ ಅವರು ಯಾರ ನಿರ್ದೇಶನದ ಮೇಲೆ ಕಾನ್ಸ್‌ಟೆಬಲ್‌ಗಳನ್ನು ಕಳಿಸಿದ್ದರು?, ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಯಾರು ನೇಮಕ ಮಾಡಿದ್ದು?, ಪ್ರಕರಣ ಬೆಳಕಿಗೆ ಬಂದು ಇವರ ಕಚೇರಿ ಮೇಲೆ ದಾಳಿ ನಡೆದ ನಂತರ ಅವರನ್ನು ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲು ಏನು ಕಾರಣ ಎಂದು ಪ್ರಶ್ನೆಗಳ ಸುರಿಮಳೆಗರೆದರು.

ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1,672 ಸಬ್ ಇನ್ಸ್‌ಪೆಕ್ಟರ್, 30,100 ಜನ ಕಾನ್ಸ್‌ಟೆಬಲ್​ಗಳು, 1,102 ಜನ ಜೈಲ್ ವಾರ್ಡನ್‌ಗಳು, 33 ಜನ ಫೊರೆನ್ಸಿಕ್ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಆ ಬಗ್ಗೆ ಯಾವ ದೂರುಗಳು ಕೇಳಿಬಂದಿರಲಿಲ್ಲ. ನಮ್ಮ ಕಾಲದಲ್ಲಿ ಕೂಡಾ ಪೊಲೀಸ್ ನೇಮಕಾತಿಯಲ್ಲಿ ಹಗರಣಗಳಾಗಿವೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ನಾವು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೇ ಇರುತ್ತದೆಯಾ?. ಇದರಲ್ಲಿ 4 ಜನ ಮಂತ್ರಿಗಳು ಶಾಮೀಲಾಗಿದ್ದಾರೆ ಎಂಬ ವಕೀಲರ ಸಂಘದ ರಂಗನಾಥ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ರಾಜಕಾರಣಿಗಳಿದ್ದರೂ ತನಿಖೆ ಆಗಲಿ, ಹಾದಿ ತಪ್ಪಬಾರದು: ಎಚ್​ಡಿಕೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.