ಹಾಸನ: ಮೊನ್ನೆ ಸಿಎಂ ಕುಮಾರಸ್ವಾಮಿ ಐಟಿ ದಾಳಿ ಆಗಬಹುದು ಎಂಬ ಸುಳಿವನ್ನು ನೀಡಿದ್ದರು. ಇದರ ಬೆನ್ನಲ್ಲೇ ಹಾಸನದಲ್ಲಿ ಸುಮಾರು ಏಳು ಕಡೆ ಐಟಿ ದಾಳಿ ಕೂಡಾ ನಡೆಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ ಕಳೆದ ವಾರ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನ ಸಮೂಹವನ್ನು ಹಾಸನ ಜನತೆ ನೋಡದಂತೆ, ಮಾಧ್ಯಮಗಳ ಮೂಲಕ ಮತದಾರರಿಗೆ ಅನ್ಯ ಸಂದೇಶ ಹೋಗಬಾರದೆಂಬ ಕಾರಣಕ್ಕಾಗಿ ಜಿಲ್ಲೆಯಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಬಿಜೆಪಿ ಕಡೆಯಿಂದ ಸಾಕಷ್ಟು ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಆದರೆ ನಿನ್ನೆ ಐಟಿ ದಾಳಿಯಾದ ಸಂದರ್ಭದಲ್ಲೂ ಸಚಿವ ರೇವಣ್ಣ, ಹಾಸನದಲ್ಲಿ ಪವರ್ ಕಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ರೇವಣ್ಣನವರು ಇಂತಹ ಸಣ್ಣತನಕ್ಕೆ ಇಳಿಯಬಾರದು. ಬಿಜೆಪಿಗೂ ಐಟಿ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳ ಮೂಲಕವೇ ಸಾಕಷ್ಟು ಬಾರಿ ಆದಾಯ ತೆರಿಗೆ ಕಟ್ಟದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪ್ರಚಾರ ನೀಡಲಾಗಿತ್ತು. ಜಾಹೀರಾತುಗಳ ಮೂಲಕ ಸಂದೇಶನ್ನು ನೀಡಲಾಗಿತ್ತು. ಆದರೂ ಕೂಡ ಕೆಲ ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳು ಆದಾಯ ತೆರಿಗೆ ಕಟ್ಟಿಲ್ಲವೆಂಬ ಶಂಕೆ ಹಿನ್ನಲೆ ದಾಳಿ ನಡೆದಿದೆ. ಆದರೆ ಮೈತ್ರಿ ಸರ್ಕಾರದವರು ಮಾತ್ರ ಇದನ್ನು ಬೇರೆ ರೀತಿಯಲ್ಲೇ ಬಣ್ಣಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಇನ್ನು, ಭ್ರಷ್ಟ ಅಧಿಕಾರಿಗಳು ಹಾಗೂ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆ ಗೌಪ್ಯವಾಗಿ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತದೆ. ರಾಜ್ಯದ ಮೈತ್ರಿ ಐಟಿ ಇಲಾಖೆಯ ಫೋನ್ ಕದ್ದಾಲಿಕೆ ಮಾಡುತ್ತಿದೆ. ಈ ಮೂಲಕ ಭ್ರಷ್ಟರಿಗೆ ಸುಳಿವು ನೀಡಿ ಕುಮಾರಸ್ವಾಮಿ ಸಾಥ್ ನೀಡಿದ್ದಾರೆ ಎಂಬುದು ಕೂಡ ಬಿಜೆಪಿ ಮುಖಂಡರ ಆರೋಪವಾಗಿದೆ.