ETV Bharat / state

ಹಾಸನ ಜಿಲ್ಲೆಯಲ್ಲಿ ಕೊರೊನಾದಿಂದ ಶೇ. 75 ರಷ್ಟು ಗುಣಮುಖ: ಡಿಸಿ ಗಿರೀಶ್​

author img

By

Published : Sep 14, 2020, 9:10 PM IST

press meet
ಸುದ್ದಿಗೋಷ್ಠಿ

ಜಿಲ್ಲೆಯಲ್ಲಿ ಕೋವಿಡ್-19 ಗುಣಮುಖರಾದವರ ಪ್ರಮಾಣ ಶೇ. 75 ರಷ್ಟಿದ್ದು, ಮರಣ ಪ್ರಮಾಣ ಶೇ. 1.5 ರಷ್ಟಿದೆ. ಅದನ್ನು ಶೇ. 1ಕ್ಕಿಂತಲೂ ಕಡಿಮೆಗೆ ಇಳಿಸುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್​.ಗಿರೀಶ್ ಹೇಳಿದ್ದಾರೆ.

ಹಾಸನ: ಜಿಲ್ಲೆಯಲ್ಲಿ ಶೇ.70 ರಷ್ಟು ಕೋವಿಡ್-19 ಸೋಂಕಿತ ಪ್ರಕರಣಗಳು ರೋಗ ಲಕ್ಷಣಗಳನ್ನು ಹೊಂದಿಲ್ಲದ ಪ್ರಕರಣಗಳಾಗಿವೆ, ಈ ಹಿನ್ನಲೆಯಲ್ಲಿ ಇಂತಹವರನ್ನು ಸಹ ಆರೋಗ್ಯ ಇಲಾಖಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು ಇದಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್​. ಗಿರೀಶ್ ಕೋರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೋಗ ಲಕ್ಷಣಗಳನ್ನು ಹೊಂದಿಲ್ಲದ ಸೋಂಕಿತರನ್ನು ಗುರುತಿಸಲು ವಿಳಂಬವಾದಲ್ಲಿ ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹಬ್ಬುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸಾವು ಸಂಭವಿಸಿದ್ದು ಇದಕ್ಕೆ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಬಹಳಷ್ಟು ಜನರು ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿ ಕೊನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸುತ್ತಿದೆ. ಆದ್ದರಿಂದ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೊರೊನಾ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಯೋ ವೃದ್ದರು, ರಕ್ತದೊತ್ತಡ, ಮಧುಮೇಹ ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿರುವವರು ಕೊರೋನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಇಂತಹವರು ರೋಗ ಲಕ್ಷಣ ಇಲ್ಲದಿದ್ದರು ಸಹ ಕೋವಿಡ್ ಪರೀಕ್ಷಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಅಲ್ಲದೇ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26 ಸ್ಥಳಗಳಲ್ಲಿ ಕೊರೊನಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಕೊರೋನಾ ಹಾಟ್ ಸ್ಪಾಟ್‍ಗಳಾಗಿ ಮಾರ್ಪಡಾಗಿದೆ. ಈ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆ ನಡೆಯುತ್ತಿದ್ದು ಪ್ರತಿಯೊಬ್ಬರು ತಪಾಸಣೆಗೆ ಒಳಪಡುವಂತೆ ಕೋರುವುದಾಗಿ ತಿಳಿಸಿದರು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಕಡ್ಡಾಯವಾಗಿದೆ ಇದನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಜಾಗ್ರತರಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕೋವಿಡ್ ಸೋಂಕಿತರ ಶೇ.95 ರಷ್ಟು ಪ್ರಥಮ ಮತ್ತು ದ್ವಿತೀಯ ಹಂತದ ಸಂಪರ್ಕರನನು ತಪಾಸಣೆ ಮಾಡಲಾಗಿದೆ. 34 ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡವಿಧಿಸಲಾಗಿದೆ. ವಿವಿಧ ರೀತಿಯ ನಿಯಮ ಉಲ್ಲಂಘನೆಗಳಲ್ಲಿ 8.34 ಲಕ್ಷ ರೂ ದಂಡ ವಸೂಲು ಮಾಡಲಾಗಿದೆ. ಎಲ್ಲಾ ಸಾರ್ವಜನಿಕರು ಜಾಗೃತರಾಗಿ ಸಹಕಾರ ನೀಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್-19 ಗುಣಮುಖರಾದವರ ಪ್ರಮಾಣ ಶೇ. 75 ರಷ್ಟಿದ್ದು, ಮರಣ ಪ್ರಮಾಣ ಶೇ. 1.5 ರಷ್ಟಿದೆ. ಅದನ್ನು ಶೇ. 1ಕ್ಕಿಂತಲೂ ಕಡಿಮೆಗೆ ಇಳಿಸುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಹೆಚ್ಚು ತಪಾಸಣೆಗೆ ಅವಕಾಶ ಕಲ್ಪಿಸಲು ಹಾಗೂ ಅದಕ್ಕೆ ಪೂರಕ ಅಗತ್ಯ ಸಂಘಟನೆ, ಸೌಲಭ್ಯ ಮತ್ತು ಸಹಕಾರ ನೀಡಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಸ್ಥಳೀಯ ಜನಪತ್ರಿನಿಧಿಗಳು, ಗ್ರಾಮದ ಪ್ರಮುಖರನ್ನು ಇದರಲ್ಲಿ ತೋಡಗಿಸಿ ಅರಿವು ಮತ್ತು ಜಾಗೃತಿ ಚಟುವಟಿಕೆಗಳನನು ಹೆಚ್ಚಾಗಿ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.