ETV Bharat / state

ಅರಿವಳಿಕೆ ಮದ್ದು ನೀಡಲೆಂದು ತೆರಳಿದಾಗ ದಾಳಿ ಮಾಡಿದ ಕಾಡಾನೆ: ಅರಣ್ಯ ಸಿಬ್ಬಂದಿ ಸಾವು

author img

By ETV Bharat Karnataka Team

Published : Aug 31, 2023, 3:43 PM IST

Updated : Aug 31, 2023, 7:02 PM IST

ವೆಂಕಟೇಶ್ ಅವರ ಮೇಲೆ ದಾಳಿ ಮಾಡಿದ ಕಾಡಾನೆ
forest staff dies in wild elephant attack at hassan

ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃತಪಟ್ಟಿದ್ದಾರೆ.

ವೆಂಕಟೇಶ್ ಅವರ ಮೇಲೆ ದಾಳಿ ಮಾಡಿದ ಕಾಡಾನೆ

ಸಕಲೇಶಪುರ (ಹಾಸನ): ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತ್ತಿದ್ದ ಭೀಮ ಎಂಬ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃತಪಟ್ಟ ಘಟನೆ ಇಂದು (ಗುರುವಾರ) ನಡೆದಿದೆ. ವೆಂಕಟೇಶ್ ಮೃತರು. ಇವರು ಅರಿವಳಿಕೆ ತಜ್ಞರು ಕೂಡ ಆಗಿದ್ದರು.

ಕಾಡಾನೆಯೊಂದು ಗಾಯಗೊಂಡು ತಿರುಗಾಡುತಿತ್ತು. ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಅರಿವಳಿಕೆ ಮದ್ದು ನೀಡಲು ಮುಂದಾದಾಗ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತ ಅರಣ್ಯ ಇಲಾಖೆಯ ಸಿಬ್ಬಂದಿ ವೆಂಕಟೇಶ್
ಮೃತ ಅರಣ್ಯ ಇಲಾಖೆಯ ಸಿಬ್ಬಂದಿ ವೆಂಕಟೇಶ್

ಘಟನೆಯ ಸಂಪೂರ್ಣ ವಿವರ: ಕಳೆದ ಕೆಲ ದಿನಗಳ ಹಿಂದೆ ಒಂದು ಕಾಡಾನೆ ಮತ್ತೊಂದು ಕಾಡಾನೆಯನ್ನು ಗಾಯಗೊಳಿಸಿತ್ತು. ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಸರ್ಕಾರದಿಂದ ಅನುಮತಿ ಪಡೆದಿತ್ತು. ಇಂದು ಸೆರೆ ಹಿಡಿಯಲು ನಿರ್ಧರಿಸಲಾಗಿತ್ತು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ವೆಂಕಟೇಶ್ ಅವರು ಗಾಯಗೊಂಡಿದ್ದ ಕಾಡಾನೆಗೆ ಅರಿವಳಿಕೆ ಮದ್ದು ನೀಡಲು ಮುಂದಾಗಿದ್ದರು. ಆದರೆ, ಇದರಿಂದ ರೊಚ್ಚಿಗೆದ್ದ ಆನೆ ದಿಢೀರ್ ಆಗಿ ವೆಂಕಟೇಶ್‌ ಮೈಮೇಲೆ ದಾಳಿ ನಡೆಸಿದೆ. ದಾಳಿಯಿಂದ ಪಾರಾಗಲು ಮುಂದಾದರೂ ಬಿಡದ ಆನೆ, ಅಟ್ಟಾಡಿಸಿ ತುಳಿದಿದೆ. ಗಂಭೀರವಾಗಿ ಗಾಯಗೊಂಡ ವೆಂಕಟೇಶ್‌ಗೆ ತಕ್ಷಣವೇ ಪ್ರಥಮ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ವೆಂಕಟೇಶ್ ಮೃತಪಟ್ಟರು ಎಂದು ಅರಣ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.

40ಕ್ಕೂ ಹೆಚ್ಚು ಕಾಡಾನೆ ಸೆರೆ ಕಾರ್ಯದಲ್ಲಿ ಭಾಗಿಯಾಗಿದ್ದ ವೆಂಕಟೇಶ್‌: ಆಲೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ವೆಂಕಟೇಶ್, 1987ರಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆ ನೌಕರಿ ಸೇರಿದ್ದರು. 2019ರವರೆಗೂ ಖಾಯಂ ಆಗದೇ ಗುತ್ತಿಗೆ ಆಧಾರದ ಮೇಲೆಯೇ ಕೆಲಸದಿಂದ ಬಿಡುಗಡೆ ಆಗಿದ್ದರು. 2019ರಲ್ಲಿ ಇವರು ಅರಣ್ಯ ಇಲಾಖೆಯಿಂದ ಬಿಡುಗಡೆ ಹೊಂದಿದ್ದರು. ಇದುವರೆಗೂ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಹಾಸನ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಅತಿ ಹೆಚ್ಚು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಕಾಡಾನೆಗಳ ಸ್ಥಳಾಂತರ, ರೇಡಿಯೋ ಕಾಲರ್ ಅಳವಡಿಕೆ ಮುಂತಾದವುಗಳ ಕೆಲಸಲ್ಲಿ ಭಾಗಿಯಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ದಿನಗೂಲಿಯ ರೂಪದಲ್ಲಿ ವೆಂಕಟೇಶ್‌ ಅವರನ್ನು ಬಳಸಿಕೊಳ್ಳುತ್ತಿದ್ದರು. ಹುಲಿ, ಚಿರತೆ, ಕರಡಿ ಸೆರೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ: ಯುವಕರ ಬೈಕ್​ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!

Last Updated :Aug 31, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.